ADVERTISEMENT

ಎತ್ತಿನಗಾಡಿಯಿಂದ ಬಿದ್ದು ರೈತ ಸಾವು

​ಪ್ರಜಾವಾಣಿ ವಾರ್ತೆ
Published 26 ಜನವರಿ 2018, 6:46 IST
Last Updated 26 ಜನವರಿ 2018, 6:46 IST

ಕೂಡ್ಲಿಗಿ: ತಾಲ್ಲೂಕಿನ ತಾಯಕನ ಹಳ್ಳಿಯಲ್ಲಿ ಎತ್ತಿನ ಗಾಡಿಯಿಂದ ಬಿದ್ದು ರೈತ ದೇವೇಂದ್ರಪ್ಪ(35) ಬುಧವಾರ ಅಸುನೀಗಿದ್ದಾರೆ.

ಹೊಲದಲ್ಲಿ ಭತ್ತದ ಹುಲ್ಲನ್ನು ಏರಿಕೊಂಡು ಬರುವಾಗ ಎತ್ತುಗಳು ಚಿನ್ನಾಟವಾಡುತ್ತ ಓಡಿದ್ದರಿಂದ ದೇವೇಂದ್ರಪ್ಪ ಕೆಳಗೆ ಬಿದ್ದಿದ್ದಾರೆ. ಬಳಿಕ ಗಾಡಿ ಅವರ ಮೈ ಮೇಲೆ ಹಾಯ್ದು, ಸಾವಿಗೀಡಾಗಿದ್ದಾರೆ ಎಂದು ಕಾನಹೊಸಹಳ್ಳಿ ಠಾಣೆಯ ಪೊಲೀಸರು ತಿಳಿಸಿದ್ದಾರೆ.

ಯುವತಿಯರ ರಕ್ಷಣೆ

ADVERTISEMENT

ಬಳ್ಳಾರಿ: ನಗರದ ಕೆ.ಸಿ ರಸ್ತೆಯಲ್ಲಿರುವ ಫಾರ್ಚೂನ್ ಸ್ಪಾ ಮಸಾಜ್ ಸೆಂಟರ್‌ ಮೇಲೆ ದಾಳಿ ನಡೆಸಿದ ನಗರ ಡಿವೈಎಸ್ಪಿ ಉಮೇಶ ನಾಯಕ ನೇತೃತ್ವದ ಬ್ರೂಸ್ ಪೇಟೆ ಠಾಣೆಯ ಪೊಲೀಸರ ತಂಡ, ಬೆಂಗಳೂರು ಮೂಲದ ಇಬ್ಬರು ಯುವತಿಯನ್ನು ರಕ್ಷಣೆ ಮಾಡಿದ್ದಾರೆ.

ಬೆಂಗಳೂರಿನ ಮಹ್ಮದ್ ಅಲಿ, ಕೊಲ್ಕತ್ತದ ಅಲೀಂ ಖಾನ್, ಬಳ್ಳಾರಿಯ ಕೌಲಬಜಾರಿನ ಹನುಮಂತಪ್ಪನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆರ್.ಚೇತನ್ ಮಾರ್ಗದರ್ಶನದಲ್ಲಿ ದಾಳಿ ಮಾಡಲಾಗಿದ್ದು, ಪ್ರಕರಣ ಬ್ರೂಸ್ ಪೇಟೆ ಠಾಣೆಯಲ್ಲಿ ದಾಖಲಾಗಿದೆ.

ಬಸ್‌ಗೆ ಬೈಕ್‌ ಡಿಕ್ಕಿ; ಸ್ಥಳದಲ್ಲೇ ಸಾವು

ಹೂವಿನಹಡಗಲಿ: ತಾಲ್ಲೂಕಿನ ಬಾವಿಹಳ್ಳಿ–ಬನ್ನಿಕಲ್ಲು ಮಾರ್ಗ ಮಧ್ಯೆ ಕೆ.ಎಸ್‌.ಆರ್‌.ಟಿ.ಸಿ. ಬಸ್‌ ಮತ್ತು ಮೋಟರ್‌ ಬೈಕ್‌ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಬೈಕ್‌ ಸವಾರ ಸ್ಥಳದಲ್ಲೇ ಸಾವಿಗೀಡಾಗಿರುವ ಘಟನೆ ಗುರುವಾರ ಸಂಜೆ ಜರುಗಿದೆ.

ಅಪಘಾತದಲ್ಲಿ ಹರಪನಹಳ್ಳಿ ತಾಲ್ಲೂಕು ಕೆ.ಕಲ್ಲಹಳ್ಳಿ ಗ್ರಾಮದ ಮಂಜುನಾಥ (21) ಮೃತಪಟ್ಟಿದ್ದಾರೆ. ಬೈಕ್‌ನ ಹಿಂಬದಿ ಸವಾರರಾದ ಕೆ.ಕಲ್ಲಹಳ್ಳಿಯ ಚಂದ್ರಶೇಖರ, ಗುಜನೂರಿನ ದೇವೇಂದ್ರಪ್ಪ ಗಂಭೀರವಾಗಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.

ಹೂವಿನಹಡಗಲಿಯಿಂದ ಬನ್ನಿಕಲ್ಲು ಕಡೆಗೆ ಹೊರಟಿದ್ದ ಬಸ್ಸು ಮತ್ತು ಬನ್ನಿಕಲ್ಲು ಕಡೆಯಿಂದ ಹೊಳಗುಂದಿ ಕಡೆಗೆ ಬರುತ್ತಿದ್ದ ಬೈಕ್‌ ನಡುವೆ ಈ ಅಪಘಾತ ಸಂಭವಿಸಿದೆ. ಈ ಕುರಿತು ಹೂವಿನಹಡಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯುವಕ ಸಾವು

ಕುರುಗೋಡು: ದ್ವಿಚಕ್ರ ವಾಹನ ನಿಯಂತ್ರಣ ತಪ್ಪಿ ಬಿದ್ದ ಪರಿಣಾಮ ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಪಟ್ಟಣದ ಬಾದನಹಟ್ಟಿ ರಸ್ತೆಯಲಿರುವ ದೊಡ್ಡಬಸವೇಶ್ವರ ರೈಸ್ ಮಿಲ್ ಹತ್ತಿರ ಗುರುವಾರ ರಾತ್ರಿಈ ದುರಂತ ಸಂಭವಿಸಿದೆ.

ಕುರುಗೋಡು ನಿವಾಸಿ ಕೊರಚರ ರಂಗಪ್ಪ (21)ಮೃತರು. ಹಿಂಬದಿ ಸವಾರ ಕಿರಣ್ ಗೆ ಚಿಕ್ಕಪುಟ್ಟಗಾಯಗಳಾಗಿದ್ದು ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೂರು ವರ್ಷ ಜೈಲು

ಹಾವೇರಿ: ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿ ಶಿಗ್ಗಾವಿ ತಾಲ್ಲೂಕಿನ ಬಿ. ಶೆಟ್ಟಿಕೊಪ್ಪ ಗ್ರಾಮದ ಫಕ್ಕಿರೇಶ ಶಿವಪ್ಪ ಕಟ್ಟಿಮನಿಗೆ 3 ವರ್ಷ ಜೈಲು ಹಾಗೂ ₹ 35 ಸಾವಿರ ದಂಡ ವಿಧಿಸಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಈಶಪ್ಪ ಕೆ.ಭೂತೆ ತೀರ್ಪು ನೀಡಿದ್ದಾರೆ.

2015ರ ಆಗಸ್ಟ್‌ 13ರಂದು ಪ್ರಕರಣ ನಡೆದಿದ್ದು, ಫೋಕ್ಸೊ ಪ್ರಕರಣದಡಿ ಶಿಕ್ಷೆ ವಿಧಿಸಲಾಗಿದೆ. ದಂಡದ ಹಣವನ್ನು ಬಾಲಕಿಗೆ ಪರಿಹಾರ ನೀಡಲು ಆದೇಶಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.