ADVERTISEMENT

ಸಹಕಾರ ಸಂಘಗಳ ರಚನೆಗೆ ಏಜೆನ್ಸಿಗಳ ಲಾಬಿಯೇ ಅಡ್ಡಿ

ಕಾರ್ಯಾರಂಭವಾಗದ ಜಿಲ್ಲಾ ಕಾರ್ಮಿಕರ ಸೇವೆಗಳ ವಿವಿದೋದ್ದೇಶ ಸಹಕಾರ ಸಂಘಗಳು

ಆರ್. ಹರಿಶಂಕರ್
Published 30 ಆಗಸ್ಟ್ 2025, 18:20 IST
Last Updated 30 ಆಗಸ್ಟ್ 2025, 18:20 IST
   

ಬಳ್ಳಾರಿ: ಖಾಸಗಿ ಏಜೆನ್ಸಿಗಳ ಶೋಷಣೆಯಿಂದ ಗುತ್ತಿಗೆ ನೌಕರರನ್ನು ಪಾರು ಮಾಡುವ ಉದ್ದೇಶವುಳ್ಳ ‘ಜಿಲ್ಲಾ ಕಾರ್ಮಿಕ ಸೇವೆಗಳ ವಿವಿಧೋದ್ದೇಶ ಸಹಕಾರ ಸಂಘ’ಗಳಿಗೆ ಏಜೆನ್ಸಿಗಳ ಲಾಬಿಯೇ ಅಡ್ಡಿಯಾಗಿದ್ದು, ಬೀದರ್‌ ಹೊರತುಪಡಿಸಿದರೆ ಯಾವ ಜಿಲ್ಲೆಗಳಲ್ಲೂ ಈ ವರೆಗೆ ಸಂಘಗಳು ಕಾರ್ಯಾರಂಭ ಮಾಡಿಲ್ಲ.

ಬೀದರ್‌ನಲ್ಲಿ 2008ರಲ್ಲೇ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ‘ಜಿಲ್ಲಾ ಕಾರ್ಮಿಕ ಸೇವೆಗಳ ವಿವಿಧೋದ್ದೇಶ ಸಹಕಾರ ಸಂಘ ನಿಯಮಿತ’ ಸ್ಥಾಪನೆಯಾಗಿದೆ. ಇದೇ ಮಾದರಿಯಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಸಂಘ ಆರಂಭಿಸಬೇಕು ಎಂದು ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಅವರೂ ಹೇಳಿದ್ದಾರೆ.

ಸಂಘ ಸ್ಥಾಪನೆಗೂ ಮೊದಲು, ಸಹಕಾರ ಇಲಾಖೆಯಲ್ಲಿ ನೋಂದಣಿ ಮಾಡಿಸಬೇಕು. ಬಳಿಕ, ‘ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ (ಕೆಟಿಪಿಪಿ) ಕಾಯ್ದೆಯಿಂದ (ಟೆಂಡರ್‌ ಪ್ರಕ್ರಿಯೆಗಳಿಂದ) ವಿನಾಯಿತಿ ಪಡೆಯಲು ಕಾಯ್ದೆಯ ಸೆಕ್ಷನ್ 4 (ಜಿ) ಅಡಿಯಲ್ಲಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಬೇಕು. ಬಳ್ಳಾರಿ, ಮೈಸೂರು, ಧಾರವಾಡ, ತುಮಕೂರು ಸೇರಿದಂತೆ ಹಲವು ಜಿಲ್ಲೆಗಳು ಸಂಘ ನೋಂದಾಯಿಸಿವೆ. 4(ಜಿ) ವಿನಾಯಿತಿಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿವೆ. ಆದರೆ, ವಿನಾಯಿತಿ ಇನ್ನೂ ಸಿಕ್ಕಿಲ್ಲ. ಇದಕ್ಕೆ ಖಾಸಗಿ ಏಜೆನ್ಸಿಗಳ ಒತ್ತಡವೇ ಕಾರಣ ಎಂದು ಕಾರ್ಮಿಕ ಸಂಘಟನೆಗಳು ಆರೋಪಿಸಿವೆ.

ADVERTISEMENT

ಸಂಘಗಳಿಗೆ ಹಲವು ಜಿಲ್ಲೆಗಳಲ್ಲಿ ಈಗಾಗಲೇ ಸಾವಿರಾರು ಕಾರ್ಮಿಕರು ನೋಂದಣಿಯಾಗಿದ್ದಾರೆ. ಬಳ್ಳಾರಿಯಲ್ಲೇ 3,300ಕ್ಕೂ ಅಧಿಕ ಗುತ್ತಿಗೆ ನೌಕರರು ತಲಾ ₹1 ಸಾವಿರ ಠೇವಣಿ ನೀಡಿ ನೋಂದಾಯಿಸಿಕೊಂಡಿದ್ದಾರೆ. ಒಂದು ಬಾರಿ ಸಂಘ ಕಾರ್ಯಾರಂಭ ಮಾಡಿದರೆ, ಇವರೆಲ್ಲ ಏಜೆನ್ಸಿಯ ಕಪಿಮುಷ್ಠಿಯಿಂದ ಮುಕ್ತಿ ಪಡೆಯಲಿದ್ದಾರೆ.

ಇನ್ನೊಂದೆಡೆ, ಸಹಕಾರಿ ಇಲಾಖೆಯಲ್ಲಿ ನೋಂದಣಿಯಾದ ಸಂಘಗಳು ಬಹುಕಾಲ ನಿಷ್ಕ್ರಿಯವಾಗಿ ಉಳಿಯಲು ಅವಕಾಶವಿಲ್ಲ. ಕೂಡಲೇ ಕಾರ್ಯರಂಭ ಮಾಡಬೇಕಾದ ಅನಿವಾರ್ಯತೆ ಇದೆ.

ಸಂಘ ರಚನೆ ಬಗ್ಗೆ ಕಾರ್ಮಿಕ ಸಚಿವರಿಗೂ ಮನವಿ ಮಾಡಿದ್ದೇವೆ. ಏಜೆನ್ಸಿಗಳು ಸರ್ಕಾರದ ಮೇಲೆ ಒತ್ತಡ ಹಾಕುತ್ತಿರುವ ಅನುಮಾನಗಳಿವೆ. ಸರ್ಕಾರ ಈ ಬಗ್ಗೆ ಗಮನಿಸಬೇಕು.
– ಎ.ದೇವದಾಸ್, ಎಐಯುಟಿಯುಸಿ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ 
ಬಳ್ಳಾರಿ ಸಂಘಕ್ಕೆ ಕೆಟಿಪಿಪಿ ಕಾಯ್ದೆ ಅಡಿ 4(ಜಿ) ವಿನಾಯಿತಿ ಕೋರಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ವಿನಾಯಿತಿ ಸಿಕ್ಕ ಕೂಡಲೇ ಸಂಘ ಕಾರ್ಯಾರಂಭವಾಗಲಿದೆ.
– ಪ್ರಶಾಂತ್‌ ಕುಮಾರ್‌ ಮಿಶ್ರಾ, ಜಿಲ್ಲಾಧಿಕಾರಿ
ಏನಿದು ಜಿಲ್ಲಾ ಕಾರ್ಮಿಕ ಸೇವೆಗಳ ಸಹಕಾರ ಸಂಘ?
ಸರ್ಕಾರದ ಪ್ರತಿ ಇಲಾಖೆ, ಮಂಡಳಿ, ನಿಗಮಗಳಿಗೆ ಅಗತ್ಯವಿರುವ ಗುತ್ತಿಗೆ ನೌಕರರನ್ನು ನೇಮಿಸುವುದು ‘ಜಿಲ್ಲಾ ಕಾರ್ಮಿಕ ಸೇವೆಗಳ ವಿವಿಧೋದ್ದೇಶ ಸಹಕಾರ ಸಂಘಗಳ’ ಮುಖ್ಯ ಉದ್ದೇಶ. ಇದಕ್ಕೆ ಜಿಲ್ಲಾಧಿಕಾರಿಗಳೇ ಅಧ್ಯಕ್ಷರು. ನೌಕರರಿಗೆ ಸರ್ಕಾರದ ಮೂಲಕವೇ ನೇರವಾಗಿ ವೇತನ ಪಾವತಿ, ಭವಿಷ್ಯ ನಿಧಿ, ಇಎಸ್ಐ, ಸಾಲ ಸೌಲಭ್ಯ ಸೇರಿದಂತೆ ವಿವಿಧ ಭದ್ರತೆಗಳನ್ನು ಸಂಘ ಒದಗಿಸುತ್ತದೆ. ಗುತ್ತಿಗೆ ಕಾರ್ಮಿಕರು ಎದುರಿಸುತ್ತಿರುವ ಅನಿಶ್ಚಿತತೆ ದೂರವಾಗುವ ಆಶಯವಿದೆ. ಕಾರ್ಮಿಕ ಸಂಘ ಆರಂಭವಾದರೆ, ಏಜೆನ್ಸಿಗಳಿಂದ ಕಾರ್ಮಿಕರನ್ನು ನೇಮಿಸಿಕೊಳ್ಳುವ ಪದ್ಧತಿಯೇ ನಿರ್ಮೂಲನೆಯಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.