
ಬಳ್ಳಾರಿ: ‘ಬೆಂಗಳೂರು ರಸ್ತೆಯಲ್ಲಿರುವ ಎಪಿಎಂಸಿ ಯಾರ್ಡ್ ಎದುರಿನ ಕಬರಸ್ತಾನವೂ ಸೇರಿದಂತೆ ಜಿಲ್ಲೆಯಲ್ಲಿ ವಕ್ಫ್ ಮಂಡಳಿಗೆ ಸೇರಿದ ಕೋಟ್ಯಂತರ ರೂಪಾಯಿ ಮೌಲ್ಯದ ಭೂಮಿ ಒತ್ತುವರಿಯಾಗಿದೆ’ ಎಂದು ಜಿಲ್ಲಾ ವಕ್ಫ್ ಮಂಡಳಿ ಮಾಜಿ ಅಧ್ಯಕ್ಷ ಹುಮಾಯೂನ್ ಖಾನ್ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ಬೆಂಗಳೂರು ರಸ್ತೆಯ ಎಪಿಎಂಸಿ ಎದುರಿನ 11.50 ಎಕರೆ ವಕ್ಫ್ ಭೂಮಿ ದುರುಪಯೋಗವಾಗುತ್ತಿದ್ದು, ಈ ಬಗ್ಗೆ ಈಗಾಗಲೇ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ತನಿಖೆ ಪ್ರಗತಿಯಲ್ಲಿದೆ’ ಎಂದು ತಿಳಿಸಿದರು.
‘ಕೇವಲ ನಗರ ಪ್ರದೇಶ ಮಾತ್ರವಲ್ಲದೆ, ಸಿರುಗುಪ್ಪ ರಸ್ತೆಯ ಅವ್ವಂಬಾವಿ ಪ್ರದೇಶದಲ್ಲಿರುವ 103 ಎಕರೆ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರ ಹೆಸರಿಗೆ ಆಗಿದೆ. 33 ಎಕರೆ ಟಿಪ್ಪು ಸುಲ್ತಾನ್ ಇನಾಂ ಜಮೀನು ಹಾಗೂ ಪಿಂಜಾರ ಹಟ್ಟಿ ಬಳಿಯ ವಕ್ಫ್ ಆಸ್ತಿಗಳು ಖಾಸಗಿ ವ್ಯಕ್ತಿಗಳ ಹೆಸರಿಗೆ ಕಾನೂನುಬಾಹಿರವಾಗಿ ಖಾತಾ ಬದಲಾವಣೆಯಾಗಿವೆ’ ಎಂದರು.
‘ಈ ಅಕ್ರಮದ ವಿರುದ್ಧದ ಹೋರಾಟಕ್ಕೆ ಮುಸ್ಲಿಮರ ಜತೆಗೆ ಎಲ್ಲ ಸಮುದಾಯದವರು ಕೈ ಜೋಡಿಸಿದರೆ ಜಯ ಸಿಗುತ್ತದೆ’ ಎಂದರು.
ಗೌಸ್ಸಾಬ್, ಮಹಮ್ಮದ್ ಅಲಿ ಸೇರಿದಂತೆ ಹಲವರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.