ADVERTISEMENT

ಸಂಡೂರು | ಪಾಳು ಬಿದ್ದ ಅಂಗನವಾಡಿ ಕೇಂದ್ರ

ನಿರ್ಮಾಣವಾಗದ ಕಟ್ಟಡ: ಮಕ್ಕಳ ಪರದಾಟ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2025, 4:08 IST
Last Updated 7 ಅಕ್ಟೋಬರ್ 2025, 4:08 IST
 ಸಂಡೂರು ತಾಲ್ಲೂಕಿನ ವಡ್ಡು ಗ್ರಾಮದಲ್ಲಿನ 2ನೇ ಅಂಗನವಾಡಿ ಕೇಂದ್ರದ ಕಟ್ಟಡ ಶಿಥಿಲಗೊಂಡು ಪಾಳು ಬಿದ್ದಿದೆ
 ಸಂಡೂರು ತಾಲ್ಲೂಕಿನ ವಡ್ಡು ಗ್ರಾಮದಲ್ಲಿನ 2ನೇ ಅಂಗನವಾಡಿ ಕೇಂದ್ರದ ಕಟ್ಟಡ ಶಿಥಿಲಗೊಂಡು ಪಾಳು ಬಿದ್ದಿದೆ   

ಸಂಡೂರು: ತಾಲ್ಲೂಕಿನ ವಡ್ಡು ಗ್ರಾಮದ ಒಂದು, ಎರಡನೇ ಅಂಗನವಾಡಿ ಕೇಂದ್ರಗಳ ಕಟ್ಟಡಗಳು ಕಳೆದ ಒಂದು ವರ್ಷದಿಂದ ಸಂಪೂರ್ಣವಾಗಿ ಶಿಥಿಲಗೊಂಡು ಪಾಳು ಬಿದ್ದಿದ್ದು, ಎರಡು ಕೇಂದ್ರಗಳಿಗೆ ಬೀಗ ಜಡಿಯಲಾಗಿದೆ.

ಗ್ರಾಮದಲ್ಲಿನ ಎರಡು ಅಂಗನವಾಡಿ ಕೇಂದ್ರಗಳ ಹಳೆಯ ಕಟ್ಟಡಗಳಾಗಿದ್ದು, ಮಳೆ ಬಂದಾಗ ನಿರಂತರವಾಗಿ ಸೋರುತ್ತವೆ. ಕಟ್ಟಡಗಳ ಗೋಡೆಗಳು ಬಿರುಕು ಬಿಟ್ಟು ಸಿಮೆಂಟ್‍ನ ಪದರುಗಳು ಕಳಚಿ ಬೀಳುವುದರ ಜೊತೆಗೆ ಕಟ್ಟಡಗಳ ಚಾವಣಿಯು ಸಿಮೆಂಟ್ ಕಿತ್ತು ಕಬ್ಬಿಣದ ಸರಳುಗಳು ಹೊರ ಚಾಚಿ ಕೊಂಡು ಆಪಾಯ ಆಹ್ವಾನಿಸಿ ಕುಸಿದು ಬೀಳುವ ಹಂತಕ್ಕೆ ತಲುಪಿದ್ದು, ಕಟ್ಟಡಗಳ ಬದಿಯಲ್ಲಿ ವಾಸವಿರುವ ನಿವಾಸಿಗಳು ಆತಂಕದಲ್ಲಿಯೇ  ದಿನ ದೂಡುವಂತೆ ಆಗಿದೆ.

ಗ್ರಾಮದಲ್ಲಿನ ಎರಡು ಕಟ್ಟಡಗಳು ಸಂಪೂರ್ಣವಾಗಿ ಶಿಥಿಲಾವಸ್ಥೆಗೆ ತಲುಪಿದ್ದರಿಂದ ಮಕ್ಕಳು, ಕೇಂದ್ರದ ಸಿಬ್ಬಂದಿ ನಿತ್ಯ ಜೀವ ಭಯದಲ್ಲಿಯೇ ಕಾಲ ಕಳೆಯುತ್ತಿದ್ದರು. ಪಾಲಕರು, ಸಾರ್ವಜನಿಕರ ಒತ್ತಾಯದ ಮೇರೆಗೆ ಅಧಿಕಾರಿಗಳು ಕೇಂದ್ರದಲ್ಲಿನ ಮಕ್ಕಳನ್ನು ಕೆಲ ತಿಂಗಳಗಳ ಕಾಲ ಸೌಲಭ್ಯವಂಚಿತ ಬಾಡಿಗೆ ಕಟ್ಟಡಗಳಿಗೆ ಸ್ಥಳಾಂತರ ಮಾಡಲಾಗಿತ್ತು. ಬಾಡಿಗೆಯ ಹೊರೆ ತಪ್ಪಿಸಲು, ಮಕ್ಕಳ ಸಂರಕ್ಷಣೆಯ ದೃಷ್ಠಿಯಿಂದ ಪ್ರಸ್ತುತವಾಗಿ ಒಂದನೇ ಕೇಂದ್ರವನ್ನು ಗ್ರಾಮದಲ್ಲಿನ ರಂಗಮಂದಿರಕ್ಕೆ, ಎರಡನೇ ಕೇಂದ್ರವನ್ನು ನಾಲ್ಕನೇ ಅಂಗನವಾಡಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.

ADVERTISEMENT

ಎರಡನೇ ಕೇಂದ್ರದಲ್ಲಿ ಗಂಡು – 10, ಹೆಣ್ಣು – 16 ಒಟ್ಟು 26 ಮಕ್ಕಳು ದಾಖಲಾಗಿದ್ದಾರೆ. ಶಾಲೆಯು ದೂರದ ಕೇಂದ್ರಕ್ಕೆ ಸ್ಥಳಾಂತರವಾಗಿದ್ದರಿಂದ ಪಾಲಕರು ಮಕ್ಕಳನ್ನು ನಿತ್ಯ ಶಾಲೆಗೆ ಕಳಿಸಲು ಹಿಂದೇಟು ಹಾಕುತ್ತಿದ್ದು, ಮಕ್ಕಳು ಪೂರ್ವ ಪ್ರಾಥಮಿಕ ಶಿಕ್ಷಣದಿಂದ ವಂಚಿತರಾಗುತ್ತಿರುವುದು ಖೇದಕರ ಸಂಗತಿಯಾಗಿದೆ.

ಅಂಗನವಾಡಿ ಕೇಂದ್ರವು ಬಹಳ ಹಳೆಯ ಕಟ್ಟಡ. ಯಾವ ಕ್ಷಣದಲ್ಲಾದರೂ ಕುಸಿದು ಬೀಳುವ ಅಪಾಯವಿದೆ. ಮಕ್ಕಳ ಅನುಕೂಲಕ್ಕಾಗಿ ಸುಸಜ್ಜಿತ ಆಧುನಿಕ ಮಾದರಿಯ ಕಟ್ಟಡವನ್ನು ನಿರ್ಮಿಸಬೇಕು
ಹನುಮಂತರೆಡ್ಡಿಗ್ರಾಮಸ್ಥ
ಸಂಡೂರು ತಾಲ್ಲೂಕಿನಲ್ಲಿ ಒಟ್ಟು 24 ನೂತನ ಅಂಗನವಾಡಿ ಕಟ್ಟಡ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಕೆಕೆಆರ್‌ಡಿ ಅನುದಾನ ಬಂದ ನಂತರ ಶೀಘ್ರದಲ್ಲಿ ನಿರ್ಮಿಸಲಾಗುವುದು
ನಾಗರಾಜ್ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ

ಸ್ಪಂದಿಸದ ಇಲಾಖೆ

ಗ್ರಾಮದ ಒಂದನೇ ಕೇಂದ್ರವು ಸಹ ಹಲವಾರು ವರ್ಷಗಳಿಂದ ಶಿಥಿಲಗೊಂಡು ಪಾಳುಬಿದ್ದರಿಂದ ಕೇಂದ್ರಕ್ಕೆ ಬೀಗ ಜಡಿಯಲಾಗಿದ್ದು ಗ್ರಾಮದಲ್ಲಿನ ಒಂದು ಎರಡನೇ ಕೇಂದ್ರಗಳು ಕಳೆದ ಒಂದು ವರ್ಷದಿಂದ ಸ್ವಂತ ಕಟ್ಟಡಗಳಿಲ್ಲದೆ ಬೇರೆ ಸ್ಥಳಗಲ್ಲಿ ನಡೆಯುತ್ತಿದ್ದು ನಿತ್ಯ ಮಕ್ಕಳು ಪೋಷಕರು ಪರದಾಡುವಂತಾಗಿದೆ. ಗ್ರಾಮದಲ್ಲಿನ ನಿವಾಸಿಗಳು ಮಕ್ಕಳ ಕಲಿಕೆಯ ಅನುಕೂಲಕ್ಕಾಗಿ ಗ್ರಾಮದ 12ನೇ ಕೇಂದ್ರಗಳ ಹಳೆಯ ಕಟ್ಟಡಗಳನ್ನು ತೆರವುಗೊಳಿಸಿ ಹೊಸ ಕಟ್ಟಡಗಳನ್ನು ನಿರ್ಮಿಸುವಂತೆ ಜಿಲ್ಲಾ ತಾಲ್ಲೂಕು ಮಟ್ಟದ ಶಿಶುಅಭಿವೃದ್ಧಿ ಇಲಾಖೆಯ ಅಧಿಕಾರಿಗಳಿಗೆ ಜನಪ್ರತಿನಿಧಿಗಳಿಗೆ ಹಲವಾರು ಬಾರಿ ಬರವಣಿಗೆಯ ಮೂಲಕ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಜನರು ಆಡಳಿತದ ವ್ಯವಸ್ಥೆಯ ವಿರುದ್ಧ ಆಕ್ರೋಶಗೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.