ಹಗರಿಬೊಮ್ಮನಹಳ್ಳಿ: ತಾಲ್ಲೂಕಿನ ಅಂಕಸಮುದ್ರ ಕೆರೆ ಸಂರಕ್ಷಿತ ಪಕ್ಷಿಧಾಮದ ಒತ್ತುವರಿ ತೆರವುಗೊಳಿಸುವ ಪ್ರಕ್ರಿಯೆ ವಿಳಂಬವಾಗುತ್ತಿದೆ.
75 ಎಕರೆಗೂ ಹೆಚ್ಚು ಪ್ರದೇಶವನ್ನು ಕೃಷಿ ಚಟುವಟಿಕೆಗೆ ಕೆಲ ರೈತರು ಒತ್ತುವರಿ ಮಾಡಿದ್ದಾರೆ. ಈಚೆಗೆ ಕಂದಾಯ ಇಲಾಖೆಯ ನಿರ್ದೇಶನದಂತೆ ಭೂಮಾಪನ ಇಲಾಖೆಯಿಂದ ಕೆರೆಯ ಗಡಿ ಗುರುತಿಸುವ ಕೆಲಸ ನಡೆಯಿತು. ಆದರೆ, ಅದು ಪೂರ್ಣ ಪ್ರಮಾಣದಲ್ಲಿ ನಡೆದಿಲ್ಲ. ‘ಈ ಕುರಿತು ಪ್ರಶ್ನಿಸಿದರೆ ಸಮಂಜಸವಾದ ಕಾರಣ ನೀಡುತ್ತಿಲ್ಲ’ ಎನ್ನುತ್ತಾರೆ ಯುವ ಬ್ರಿಗೇಡ್ ಸದಸ್ಯರು.
‘ಇದುವರೆಗೆ ಕೆರೆಯ ಸುತ್ತುಗೋಡೆ ನಿರ್ಮಿಸದ ಕಾರಣ ಕಿಡಿಗೇಡಿಗಳಿಂದ ಪಕ್ಷಿಗಳಿಗೆ ಸಂಪೂರ್ಣ ರಕ್ಷಣೆ ಇಲ್ಲದಾಗಿದೆ. ಪಕ್ಷಿಧಾಮದಲ್ಲಿ ಅಗತ್ಯ ಕಾವಲು ಪಡೆ ಇಲ್ಲದೆ ಕೆಲವು ಬೇಟೆಗಾರರು ಅಕ್ರಮವಾಗಿ ಮೀನುಗಳನ್ನು ಹಿಡಿಯಲು ಹೋಗಿ ಅಪರೂಪದ ಪಕ್ಷಿಗಳ ಸಂತಾನೋತ್ಪತ್ತಿ ಕಾರ್ಯಕ್ಕೆ ಅನವಶ್ಯಕ ತೊಂದರೆ ಕೊಡುತ್ತಿದ್ದಾರೆ’ ಎಂದು ಪಕ್ಷಿ ಪ್ರೇಮಿ ವಿಜಯಕುಮಾರ ಇಟ್ಟಿಗಿ ತಿಳಿಸಿದರು.
‘ಕೂಡಲೇ ಕೆರೆ ಸಂರಕ್ಷಣೆಗೆ ಕ್ರಮ ಜರುಗಿಸಬೇಕು. ಹೊರಗಿನಿಂದ ಬರುವ ಪ್ರವಾಸಿಗರಿಗೆ ಪಕ್ಷಿಗಳ ವೀಕ್ಷಣೆಗೆ ಬೈನಾಕ್ಯೂಲರ್ ಸೇರಿದಂತೆ ಅಗತ್ಯ ಸೌಕರ್ಯ ಕಲ್ಪಿಸಬೇಕು’ ಎಂದು ಆಗ್ರಹಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.