ಹೊಸಪೇಟೆ: ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ‘ಭಾರತ್ ಜೋಡೋ’ ಯಾತ್ರೆ ನೋಡುವುದಕ್ಕಾಗಿ ಇಲ್ಲಿನ ನೆಹರೂ ಕಾಲೊನಿಯ ಶ್ರೀರಾಮ ಆನಂದ ನಂದನ ಮಕ್ಕಳ ಧಾಮ ಸೇವಾ ಸಮಿತಿಯ (ಅನಾಥಾಶ್ರಮ) 30 ಮಕ್ಕಳು ಶುಕ್ರವಾರ ಬಳ್ಳಾರಿಗೆ ಪಯಣ ಬೆಳೆಸಿದರು.
ಮಕ್ಕಳನ್ನು ಬಳ್ಳಾರಿಗೆ ಕರೆದುಕೊಂಡು ಹೋಗಿ ಪುನಃ ಅವರನ್ನು ತಂದು ಬಿಡುವ ಜವಾಬ್ದಾರಿಯನ್ನು ನಗರಸಭೆ ಸದಸ್ಯ ಕೆ. ಮಹೇಶ್ ವಹಿಸಿಕೊಂಡಿದ್ದಾರೆ. ಇಷ್ಟೇ ಅಲ್ಲ, ಅವರ ನಗರಸಭೆ ಸದಸ್ಯತ್ವದ ಒಂಬತ್ತು ತಿಂಗಳ ವೇತನವನ್ನು ಅನಾಥಾಶ್ರಮಕ್ಕೆ ದೇಣಿಗೆ ರೂಪದಲ್ಲಿ ನೀಡಿದ್ದಾರೆ.
‘ಅ. 15ರಂದು ಮಹೇಶ್ ಅವರ ಜನ್ಮದಿನವಿದೆ. ಶುಕ್ರವಾರ ಅನಾಥಾಶ್ರಮಕ್ಕೆ ಬಂದು ಅವರ 9 ತಿಂಗಳ ವೇತನದ ಹಣ ನೀಡಿದರು. ಮಕ್ಕಳಿಗೆ ಏನು ಬೇಕೆಂದು ಕೇಳಿದಾಗ, ಭಾರತ್ ಜೋಡೋ ಯಾತ್ರೆ ನಡೆಸುತ್ತಿರುವ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿಸುವಂತೆ ಕೋರಿದರು. ಅವರು ತಕ್ಷಣವೇ ಒಪ್ಪಿಕೊಂಡು ಮಕ್ಕಳಿಗೆ ಕರೆದೊಯ್ಯುವ ವ್ಯವಸ್ಥೆ ಮಾಡಿದರು’ ಎಂದು ಅನಾಥಾಶ್ರಮದ ಗಾಳೆಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.
‘ಮಕ್ಕಳಿಗೆ ರಾಹುಲ್ ಗಾಂಧಿಯವರನ್ನು ನೋಡುವ ಆಸೆ ವ್ಯಕ್ತಪಡಿಸಿದರು. ಹಾಗಾಗಿ ಅವರಿಗೆ ಬಳ್ಳಾರಿಗೆ ಕರೆದೊಯ್ಯಲು ವ್ಯವಸ್ಥೆ ಮಾಡಿರುವೆ’ ಎಂದು ಕೆ. ಮಹೇಶ್ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.