ಸಿರುಗುಪ್ಪ ತಾಲ್ಲೂಕಿನ ಕೊಂಚಿಗೇರಿ ಗ್ರಾಮದಲ್ಲಿ ಕೃಷಿ ಸಂಸ್ಕರಣೆಗಾಗಿ ರೈತರ ತರಬೇತಿ ಮತ್ತು ಸಾಮಾನ್ಯ ಸೌಲಭ್ಯ ಕೇಂದ್ರ ಅಡಿಯಲ್ಲಿ ಮೆಣಸಿನಕಾಯಿ ಸಂಸ್ಕರಣಾ ಘಟಕದ ಉದ್ಘಾಟನೆಯನ್ನು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ನೆರವೇರಿಸಿದರು
ಬಳ್ಳಾರಿ: ‘ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳಲ್ಲಿ ಸರ್ಕಾರ ಖಾಸಗಿ ಪ್ರಾಯೋಜಕತ್ವದ ಅಡಿಯಲ್ಲಿ ಕೃಷಿ ಉತ್ಪನ್ನ ಸಂಸ್ಕೃರಣಾ ಘಟಕ ಪ್ರಾರಂಭಿಸಲಾಗಿದ್ದರೂ, ಬಳ್ಳಾರಿಯ ಮೆಣಸಿನಕಾಯಿ ಸಂಸ್ಕಾರಣಾ ಘಟಕದಲ್ಲಿ ರೈತರು ನೇರವಾಗಿ ಬಂಡವಾಳ ತೊಡಿಗಿಸಿರುವುದು ವಿಶೇಷ’ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
ಕೊಂಚಿಗೇರಿ ಗ್ರಾಮದಲ್ಲಿ ಮೆಣಸಿನಕಾಯಿ ಸಂಸ್ಕರಣಾ ಘಟಕವನ್ನು ಗುರುವಾರ ಅವರು ಉದ್ಘಾಟಿಸಿದರು.
‘ಸಿದ್ದಗಂಗಾ ಶ್ರೀ ರೈತ ಉತ್ಪನ್ನ ಕೇಂದ್ರದವರು ₹12 ಲಕ್ಷ ಬಂಡವಾಳ ತೊಡಗಿಸಿರುವುದು ಮಾದರಿ ನಡೆ’ ಎಂದು ಅವರು ಪ್ರಶಂಸಿದರು.
‘ಈ ಘಟಕವು ಕೃಷಿ ಮತ್ತು ಗ್ರಾಮೀಣಭಿವೃದ್ಧಿ ರಾಷ್ಟ್ರೀಯ ಬ್ಯಾಂಕ್ (ನಬಾರ್ಡ್) ಸ್ಥಳೀಯ ಸಂಸದರ ಅಭಿವೃದ್ಧಿ ನಿಧಿ ಹಾಗೂ ಕೇಂದ್ರ ಹಣಕಾಸು ಸಚಿವರ ಸಹಯೋಗದಲ್ಲಿ ₹2.63 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿದೆ’ ಎಂದು ತಿಳಿಸಿದರು.
‘ಸಿರುಗುಪ್ಪ, ಬಳ್ಳಾರಿ ಹಾಗೂ ಕುರುಗೋಡು ತಾಲ್ಲೂಕುಗಳಲ್ಲಿ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಸುಮಾರು 1.03 ಮೆಟ್ರಿಕ್ ಟನ್ ಮೆಣಸಿನಕಾಯಿ ಉತ್ಪಾದನೆಯಾಗುತ್ತಿದ್ದು, ದೇಶದಲ್ಲಿ ಅತಿ ಹೆಚ್ಚು ಮೆಣಸಿನ ಕಾಯಿ ಉತ್ಪಾದನೆ ಮಾಡುವ ಪ್ರದೇಶವಾಗಿದೆ’ ಎಂದರು.
'ರೈತರ ಏಳಿಗೆಗಾಗಿ ಪ್ರಧಾನ ಮಂತ್ರಿಗಳು ದೇಶದ 100 ಜಿಲ್ಲೆಗಳಲ್ಲಿ 'ಪ್ರಧಾನಮಂತ್ರಿ ಕೃಷಿ ಧನ-ಧಾನ್ಯ ಯೋಜನೆ' ಎಂಬ ಉತ್ತಮ ಯೋಜನೆಯನ್ನು ಜಾರಿಗೆ ತಂದಿದ್ದಾರೆ' ಎಂದು ಹೇಳಿದರು.
'ರೈತರು ಎಷ್ಟೇ ಉತ್ಪಾದನೆ ಮಾಡಿದರೂ ಮಾರುಕಟ್ಟೆಗಾಗಿ ನೂರಾರು ಕಿ.ಮೀ ಅಲೆಯಬೇಕಾಗುತ್ತದೆ. ಆದರೆ ಈ ಘಟಕಗಳ ಸ್ಥಾಪನೆಯಿಂದ ರೈತರಿಗೆ ಮಾರುಕಟ್ಟೆ ದೊರೆಯುವಂತಾಗುತ್ತದೆ’ ಎಂದು ಹೇಳಿದರು.
'ಕಲ್ಯಾಣ ಸಂಪದ': ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳಲ್ಲಿ ಉತ್ಪದನೆಯಾಗುವ ರೈತ ಉತ್ಪನ್ನಗಳಿಗೆ 'ಕಲ್ಯಾಣ ಸಂಪದ' ಬ್ರಾಂಡ್ ಅಡಿಯಲ್ಲಿ ಮಾರುಕಟ್ಟೆ ವ್ಯವಸ್ಥೆ ಮಾಡಲಾಗುತ್ತದೆ. ಅಲ್ಲದೆ ಕೊಂಚೆಗೇರಿಯ ಮೆಣಸಿನಕಾಯಿ ಪುಡಿ ಮತ್ತು ಫ್ಲೆಕ್ಸ್ ಗಳಿಗೆ ರಾಜ್ಯ, ರಾಷ್ಟ ಅಲ್ಲದೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾರುಕಟ್ಟೆ ದೊರೆಯಲಿದೆ ಎಂದರು.
ಈ ಸಂದರ್ಭದಲ್ಲಿ ಸಿರುಗುಪ್ಪ ಶಾಸಕ ಬಿ. ಎಂ. ನಾಗರಾಜ, ವಿಧಾನ ಪರಿಷತ್ ಸದಸ್ಯರಾದ ವೈ. ಎಂ. ಸತೀಶ, ರಾಜ್ಯ ಪಂಚಾಯತ್ ರಾಜ್ ಸಹಾಯಕ ಆಯುಕ್ತೆ ಉಮಾ ಮಹಾದೇವನ್, ನಬಾರ್ಡ್ ನ ಸಿಇಒ ಶಾಜಿ ಕೆ.ವಿ, ಐಟಿಸಿ ಕಂಪನಿಯ ಮುಖ್ಯಸ್ಥ ಸಂಜಯ ಪುರಿ, ಬಿ. ರವಿಕುಮಾರ್ ಕೊಂಚೆಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಇ ಮುತ್ತಮ್ಮ, ಉಪಾಧ್ಯಕ್ಷೆ ಮುದ್ದವಾರದ ಹಾಜರಿದ್ದರು.
ರಾಷ್ಟ್ರೀಯ ಹೆದ್ದಾರಿ 150ಎ ಕಾಮಗಾರಿ ವಿಳಂಬ ಕುರಿತು ಸಿರುಗುಪ್ಪ ಶಾಸಕ ಬಿ.ಎಂ ನಾಗರಾಜ ವೇದಿಕೆಯಲ್ಲಿ ಪ್ರಸ್ತಾಪಿಸಿದರು. ಧಡೇಸೂಗೂರಿನಿಂದ ಬಾಗೇವಾಡಿ ಹಾಗೂ ತೆಕ್ಕಲಕೋಟೆ ಮಾರ್ಗವಾಗಿ ಬರುವಾಗ ತಾವು ಸಮಸ್ಯೆಯನ್ನು ಗಮನಿಸಿದ್ದೀರಿ, ಆದ್ದರಿಂದ ಶೀರ್ಘವಾಗಿ ಕಾಮಗಾರಿ ಮುಗಿಸುವಂತೆ ಕೇಂದ್ರ ಸರ್ಕಾರಕ್ಕೆ ತಿಳಿಸುವಂತೆ ಮನವಿ ಮಾಡಿದರು. ಆದರೆ ವಿತ್ತ ಸಚಿವರು ವೇದಿಕೆಯಲ್ಲಿ ಯಾವುದೆ ಉತ್ತರ ನೀಡಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.