ಕೊಟ್ಟೂರು: ‘ಪಟ್ಟಣ ಪಂಚಾಯಿತಿ ಆವರಣದಲ್ಲಿರುವ ಬಾಲಭವನ ಕಟ್ಟಡವನ್ನು ಸೂಕ್ತ ರೀತಿಯಲ್ಲಿ ನವೀಕರಣಗೊಳಿಸಿದರೆ ನ್ಯಾಯಾಲಯ ಸ್ಥಾಪನೆಗಾಗಿ ಹೈಕೋರ್ಟ್ಗೆ ಸಮಗ್ರ ವರದಿ ಸಲ್ಲಿಸುತ್ತೇವೆ’ ಎಂದು ಹೊಸಪೇಟೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಡಿ.ಪಿ.ಕುಮಾರಸ್ವಾಮಿ ಹೇಳಿದರು.
ಕೂಡ್ಲಿಗಿ ಹಿರಿಯ ಸಿವಿಲ್ ನ್ಯಾಯಾಧೀಶ ಜೆ.ಯೋಗೀಶ್ ಅವರೊಂದಿಗೆ ಶುಕ್ರವಾರ ಕಟ್ಟಡ ವೀಕ್ಷಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಶೀಘ್ರದಲ್ಲಿಯೇ ನವೀಕರಣ ಕಾರ್ಯ ಪೂರ್ಣಗೊಳಿಸಿದರೆ ಪುನಃ ಕಟ್ಟಡವನ್ನು ಪರಿಶೀಲಿಸಿ ಹೈಕೋರ್ಟ್ ಆಡಳಿತಾತ್ಮಕ ನ್ಯಾಯಾಧೀಶರಿಗೆ ವರದಿ ಸಲ್ಲಿಸುತ್ತೇವೆ. ಕಟ್ಟಡದ ವರದಿ ಸೂಕ್ತವೆಂದು ಪರಿಗಣಿಸಿದ ನಂತರ ನ್ಯಾಯಾಲಯ ಆರಂಭಕ್ಕೆ ಹೈಕೋರ್ಟ್ ಅನುಮತಿ ನೀಡುತ್ತದೆ’ ಎಂದು ತಿಳಿಸಿದರು.
ಹೋರಾಟ ಸಮಿತಿ ಅಧ್ಯಕ್ಷ ಎಂ.ಗುರುಸಿದ್ಧನಗೌಡ ಮಾತನಾಡಿ, ‘ಕೊಟ್ಟೂರು ತಾಲ್ಲೂಕಿನ ಅತಿ ಹೆಚ್ಚು ಪ್ರಕರಣಗಳು ಕೂಡ್ಲಿಗಿ ನ್ಯಾಯಾಲಯದಲ್ಲಿ ದಾಖಲಾಗಿರುತ್ತವೆ. ಹಾಗಾಗಿ ಕಕ್ಷಿದಾರರಿಗೆ ವಿಳಂಬವಾಗದಂತೆ ನ್ಯಾಯ ದೊರಕಿಸಿಕೊಡಲು ನ್ಯಾಯಾಲಯ ಸ್ಥಾಪನೆಯಿಂದ ಸಹಕಾರಿ ಆಗುತ್ತದೆ. ಈ ಭಾಗದ ವಕೀಲರಿಗೂ ಅನುಕೂಲ ಆಗುತ್ತದೆ’ ಎಂದು ನ್ಯಾಯಾಧೀಶರಲ್ಲಿ ಮನವರಿಕೆ ಮಾಡಿಕೊಟ್ಟರು.
ನ್ಯಾಯಾಲಯ ಹೋರಾಟ ಸಮಿತಿ ಉಪಾಧ್ಯಕ್ಷ ಪಿ.ಪ್ರಭುದೇವ್, ಕಾರ್ಯದರ್ಶಿ ಶಿವಾನಂದ ಬಾವಿಕಟ್ಟಿ, ಜಂಟಿ ಕಾರ್ಯದರ್ಶಿಗಳಾದ ಕೆ.ಗುರುಬಸವರಾಜ್, ಟಿ.ಹನುಮಂತಪ್ಪ ಖಜಾಂಚಿ ಟಿ.ಎಂ.ಸೋಮಯ್ಯ ಹಾಗೂ ಸದಸ್ಯರು, ಹಿರಿಯ ವಕೀಲ ಹೋ.ಮ.ಪಂಡಿತಾರಾಧ್ಯ, ಕೂಡ್ಲಿಗಿ ವಕೀಲರ ಸಂಘದ ಅಧ್ಯಕ್ಷ ಹೊನ್ನೂರಪ್ಪ ಹಾಗೂ ಪದಾಧಿಕಾರಿಗಳು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಿ.ಆನಂದಕುಮಾರ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎ.ನಸರುಲ್ಲಾ, ಸಿಪಿಐ ದುರ್ಗಪ್ಪ, ಪಿಎಸ್ಐ ಗೀತಾಂಜಲಿ ಶಿಂಧೆ, ಲೋಕೋಪಯೋಗಿ ಇಲಾಖೆ ಎಇ ದೊಡ್ಡಮನೆ ಕೊಟ್ರೇಶ್, ವಕೀಲರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.