ಬಳ್ಳಾರಿ: ಬಳ್ಳಾರಿ ಮಹಾನಗರ ಪಾಲಿಕೆಯ ನೂತನ ಆಯುಕ್ತರಾಗಿ ಕೆಎಎಸ್ ಅಧಿಕಾರಿ ಮಂಜುನಾಥ ಪಿ.ಎಸ್ ಅವರನ್ನು ನಿಯೋಜನೆ ಮಾಡಿ ಸರ್ಕಾರ ಆದೇಶಿಸಿದೆ.
ಮಂಜುನಾಥ ಅವರು ಬಳ್ಳಾರಿ ಜಿಲ್ಲಾ ಖನಿಜ ಪ್ರತಿಷ್ಠಾನದ ವಿಶೇಷಾಧಿಕಾರಿಯಾಗಿದ್ದರು. ಈ ಹಿಂದೆ ಪಾಲಿಕೆ ಆಯುಕ್ತರಾಗಿದ್ದ ಖಲೀಲ್ ಸಾಬ್ ಅವರಿಗೆ ಬಳ್ಳಾರಿ ಅಭಿವೃದ್ಧಿ ಪ್ರಾಧಿಕಾರ (ಬುಡಾ)ದ ಹೆಚ್ಚುವರಿ ಜವಾಬ್ದಾರಿ ನೀಡಲಾಗಿತ್ತು. ಸದ್ಯ ಅವರು ಬುಡಾದ ಆಯುಕ್ತರಾಗಿ ಮುಂದುವರಿಯಲಿದ್ದಾರೆ.
ಇದಕ್ಕೂ ಮೊದಲು ಬೆಳಗಾವಿಯ ಸ್ಮಾರ್ಟ್ ಸಿಟಿ ಯೋಜನೆಯ ವ್ಯವಸ್ಥಾಪಕ ನಿರ್ದೇಶಕಿ, ಕೆಎಎಸ್ ಹಿರಿಯ ಶ್ರೇಣಿಯ ಅಧಿಕಾರಿ ಸಯೀದಾ ಆಫ್ರೀನ್ ಬಾನು ಬಳ್ಳಾರಿ ಅವರನ್ನು ನೂತನ ಆಯುಕ್ತರಾಗಿ ಜೂನ್ 23ರಂದು ನಿಯೋಜನೆ ಮಾಡಲಾಗಿತ್ತು. ಜೂನ್ 27ರಂದು ಅಧಿಕಾರ ಸ್ವೀಕರಿಸಲೆಂದು ಬಳ್ಳಾರಿಗೆ ಬಂದಿದ್ದ ಅವರು, ಸ್ಥಳೀಯ ರಾಜಕೀಯ ನಾಯಕರೊಬ್ಬರ ವಿರೋಧದ ಹಿನ್ನೆಲೆಯಲ್ಲಿ ಅಧಿಕಾರ ವಹಿಸಿಕೊಳ್ಳದೇ ಹಿಂದಿರುಗಿದ್ದರು.
ಈ ಮಧ್ಯೆ ಮಂಜುನಾಥ್ ಅವರು ಆಯುಕ್ತರಾಗಲಿದ್ದಾರೆ ಎಂಬ ಸುದ್ದಿ ವ್ಯಾಪಕವಾಗಿ ಹರಿದಾಡಿತ್ತು. ಅದರಂತೆ ಸೋಮವಾರ ಆವರನ್ನು ಆಯುಕ್ತರನ್ನಾಗಿ ಸರ್ಕಾರ ನಿಯೋಜಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.