ಹೊಸಪೇಟೆ: ಅಖಿಲ ಭಾರತ ಅಂಚೆ ನೌಕರ ಸಂಘವು ಭಾನುವಾರ ನಗರದಲ್ಲಿ ’ಸಿ‘ ಹಾಗೂ ’ಡಿ‘ ದರ್ಜೆ ನೌಕರರು ಹಾಗೂ ಗ್ರಾಮೀಣ ಅಂಚೆ ನೌಕರರ ದ್ವಿತೀಯ ವಾರ್ಷಿಕ ಬಹಿರಂಗ ಜಂಟಿ ಸಮಾವೇಶ ಹಮ್ಮಿಕೊಂಡಿತ್ತು.
ಜಿಲ್ಲಾ ಅಂಚೆ ವಿಭಾಗದ ಅಂಚೆ ಸೂಪರಿಟೆಂಡೆಂಟ್ ಕೆ.ಮಹಾದೇವಪ್ಪ ಉದ್ಘಾಟಿಸಿ, ’ಇಡೀ ರಾಜ್ಯದಲ್ಲಿಯೇ ಬಳ್ಳಾರಿ ಜಿಲ್ಲೆ ಅಂಚೆ ಸೇವೆಯಲ್ಲಿ ಮೊದಲ ಸ್ಥಾನದಲ್ಲಿದೆ. ಅದಕ್ಕೆ ಎಲ್ಲ ನೌಕರರ ಪರಿಶ್ರಮವೇ ಕಾರಣ‘ ಎಂದು ಹೇಳಿದರು.
’ಯಶಸ್ಸು ಸಿಗಬೇಕಾದರೆ ಆಡಳಿತ ವರ್ಗ ಹಾಗೂ ನೌಕರರ ನಡುವೆ ಸೌಹಾರ್ದ, ಸಹಕಾರದ ವಾತಾವರಣ ಇರಬೇಕು. ಎಲ್ಲರೂ ಅವರವರ ಜವಾಬ್ದಾರಿ ಅರಿತು ಕೆಲಸ ಮಾಡಬೇಕು. ಹೀಗೆ ಮಾಡುತ್ತಿರುವುದರಿಂದಲೇ ಆದಾಯದಲ್ಲಿ ಜಿಲ್ಲೆ ಮೊದಲ ಸ್ಥಾನದಲ್ಲಿದೆ. ಗ್ರಾಮೀಣ ಪ್ರದೇಶಗಳಿಗೆ ಉತ್ತಮ ಸೇವೆ ಕಲ್ಪಿಸಲಾಗುತ್ತಿದೆ. ಸರ್ಕಾರದ ಎಲ್ಲ ಸೇವೆಗಳು ಸಮರ್ಪಕವಾಗಿ ಅನುಷ್ಠಾನಗೊಳ್ಳುತ್ತಿವೆ. ಈ ಕೆಲಸ ಹೀಗೆಯೇ ಮುಂದುವರೆಯಲಿ‘ ಎಂದು ಹೇಳಿದರು.
’ಬದಲಾದ ಕಾಲಘಟ್ಟದಲ್ಲಿ ನೌಕರ ವರ್ಗದ ಮೇಲೆ ಕೆಲಸದ ಒತ್ತಡವಿದೆ. ಆ ಒತ್ತಡದ ನಡುವೆಯೂ ಕೆಲಸ ನಿರ್ವಹಿಸುವ ಅನಿವಾರ್ಯತೆ ಇದೆ. ಆರೋಗ್ಯದ ಕಡೆಗೆ ಹೆಚ್ಚು ಮುತುವರ್ಜಿ ವಹಿಸಿ ಕೆಲಸ ಮಾಡಬೇಕು‘ ಎಂದು ತಿಳಿಸಿದರು.
ದ್ವೈವಾರ್ಷಿಕ ವರದಿ ವಾಚನ ಮಾಡಲಾಯಿತು.ಅಖಿಲ ಭಾರತ ಅಂಚೆ ನೌಕರರ ಒಕ್ಕೂಟದ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ರಾಮರಾವ್, ಅಂಚೆ ಇಲಾಖೆ ಅಧಿಕಾರಿಗಳಾದ ಶ್ರೀನಿಧಿ, ಗಂಗಣ್ಣ, ಚಂದ್ರು ಸ್ವಾಮಿ, ’ಸರ್ವೇಜನ ಸುಖಿನೋ ಭವಂತು ಟ್ರಸ್ಟ್‘ನ ಕೆ.ಮಹೇಶ ಕುಮಾರ, ಮುಖಂಡರಾದಸೋಮಶೇಖರ, ಪ್ರಸಾದ ಬಾಬು, ಬಿ.ನಾಗರಾಜ, ಚೆನ್ನಬಸಪ್ಪ, ವಿ.ಬನ್ನೇಶ ಜವರಾಯಗೌಡ, ಜಾನಕೀರಾಮ್, ವಿ.ಕೃಷ್ಣಮೂರ್ತಿ, ಎಂ.ಸತೀಶ್, ಅಲ್ಲಾಸಾಬ್, ಪಿ.ಮಲ್ಲಿಕಾರ್ಜುನ, ಬಿ.ಆರ್.ಜಗದೀಶ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.