
ಬಳ್ಳಾರಿ: ಬಳ್ಳಾರಿ ಕೇಂದ್ರ ರೈಲು ನಿಲ್ದಾಣದ ಮೂಲಕ ತೆರಳುತ್ತಿದ್ದ ವಾಸ್ಕೊ–ಡಿ–ಗಾಮ – ಅಮರಾವತಿ ಎಕ್ಸ್ಪ್ರೆಸ್ ರೈಲಿನಲ್ಲಿ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ₹4.20 ಲಕ್ಷ ಮೌಲ್ಯದ 8.4 ಕೆ.ಜಿ ಗಾಂಜಾವನ್ನು ರೈಲ್ವೆ ಪೊಲೀಸರು ಸೋಮವಾರ ವಶಪಡಿಸಿಕೊಂಡಿದ್ದಾರೆ.
ಅಮರಾವತಿ ಎಕ್ಸ್ಪ್ರೆಸ್ ರೈಲಿನಲ್ಲಿ ಗಾಂಜಾ ಸಾಗಣೆ ಮಾಡುತ್ತಿರುವ ಬಗ್ಗೆ ಗಣರಾಜ್ಯೋತ್ಸವದ ಹಿಂದಿನ ದಿನ ರೈಲ್ವೆ ಪೊಲೀಸರಿಗೆ ಖಚಿತ ಮಾಹಿತಿ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ರೈಲಿನಲ್ಲಿ ಪರಿಶೀಲನೆ ನಡೆಸುವಂತೆ ರೈಲ್ವೆ ಪೊಲೀಸ್ ವರಿಷ್ಠಾಧಿಕಾರಿ ಸಾರಾ ಫಾತೀಮಾ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಜ. 26ರಂದು ಬೆಳಿಗ್ಗೆ 5 ಗಂಟೆಗೆ ಬಳ್ಳಾರಿ ಕೇಂದ್ರ ರೈಲು ನಿಲ್ದಾಣಕ್ಕೆ ಬಂದ ಅಮರಾವತಿ ಎಕ್ಸ್ಪ್ರೆಸ್ನಲ್ಲಿ ಠಾಣಾಧಿಕಾರಿ ನಾಗರಾಜ್ ಅವರು ಪರಿಶೀಲನೆ ಕೈಗೊಂಡಿದ್ದರು.
ರೈಲಿನ ಬೋಗಿಯೊಂದರಲ್ಲಿ ದೊಡ್ಡ ಪೊಟ್ಟಣವೊಂದು ಪತ್ತೆಯಾಗಿತ್ತು. ಆದರೆ, ಅಲ್ಲಿ ಅದರ ವಾರಸುದಾರರು ಯಾರೂ ಪತ್ತೆಯಾಗಿರಲಿಲ್ಲ. ಪೊಟ್ಟಣವನ್ನು ಠಾಣೆಗೆ ತಂದು ನೋಡಿದಾಗ ಅದರಲ್ಲಿ 8.4 ಕೆ.ಜಿ ಗಾಂಜಾ ಪತ್ತೆಯಾಗಿದೆ. ಈ ಕುರಿತು ರೈಲ್ವೆ ಪೊಲೀಸರು ಅಪರಿಚಿತರ ವಿರುದ್ಧ ಎಫ್ಐಆರ್ ದಾಖಲು ಮಾಡಿಕೊಂಡಿದ್ದಾರೆ.