ಬಳ್ಳಾರಿ: ಬಳ್ಳಾರಿಯ ಆರಾಧ್ಯದೈವ ಕೋಟೆ ಮಲ್ಲೇಶ್ವರ ಜಾತ್ರಾ ಮಹೋತ್ಸವ ಭಾನುವಾರ ಸಂಜೆ ಅದ್ದೂರಿಯಾಗಿ ನಡೆಯಿತು.
ಬಳ್ಳಾರಿ ನಗರ, ಜಿಲ್ಲೆಯಲ್ಲದೆ, ಹೊರ ಜಿಲ್ಲೆಗಳಿಂದಲೂ ಬಂದಿದ್ದ ಸಾವಿರಾರು ಭಕ್ತರು ತಮ್ಮ ಆರಾಧ್ಯ ದೈವನಿಗೆ ಭಕ್ತಿ ಸಮರ್ಪಿಸಿ ಧನ್ಯತಾ ಭಾವ ಮೆರೆದರು.
ಡೊಳ್ಳು ಕುಣಿತ, ಗೊರವರ ಕುಣಿತ, ಗೊಂಬೆ ಕುಣಿತ, ಮಂಗಳ ವಾದ್ಯದ ತಂಡ ಹಾಗೂ ವಿವಿಧ ಕಲಾ ಪ್ರಕಾರಗಳನ್ನು ಪ್ರದರ್ಶಿಸುವ ಮೂಲಕ ಕಲಾವಿದರು ರಥೋತ್ಸವಕ್ಕೆ ಮೆರುಗು ತಂದರು.
ಮಕ್ಕಳು, ಮಹಿಳೆಯರು ಹಾಗೂ ಪುರುಷರೂ ಸೇರಿದಂತೆ ಎಲ್ಲ ವಯೋಮಾನದ ಜನರು ರಥೋತ್ಸವದಲ್ಲಿ ಭಾಗವಹಿಸಿ ಬಾಳೆಹಣ್ಣನ್ನು ರಥದಲ್ಲಿ ಪವಡಿಸಿದ್ದ ಪರಮಾತ್ಮನಿಗೆ ಎಸೆದರು.
ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು, ಬಳ್ಳಾರಿ ನಗರದ ಬಿಜೆಪಿ ಶಾಸಕ ಸೋಮಶೇಖರರೆಡ್ಡಿ ಸೇರಿದಂತೆ ಜನ ಪ್ರತಿನಿಧಿಗಳು, ಗಣ್ಯರು ರಥೋತ್ಸವದಲ್ಲಿ ಪಾಲ್ಗೊಂಡರು.
ಭಾರಿ ಸಂಖ್ಯೆಯಲ್ಲಿ ಸೇರಿದ್ದ ಜನರನ್ನು ನಿಯಂತ್ರಿಸಲು ಪೊಲೀಸರು ಪರದಾಡಬೇಕಾಯಿತು. ಒಂದು ವಾರದಿಂದಲೂ ಕೋಟೆ ಮಲ್ಲೇಶ್ವರ ಸ್ವಾಮಿಗೆ ಪೂಜೆ– ಪುನಸ್ಕಾರ ನಡೆದವು. ಇಂದು ಭರತ ಹುಣ್ಣಿಮೆ ರಥೋತ್ಸವದೊಂದಿಗೆ ಜಾತ್ರೆ ಕೊನೆಗೊಂಡಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.