ADVERTISEMENT

ಕುರುಗೋಡು: ಗ್ರಾಮೀಣ ಕ್ರೀಡೆಗಳಲ್ಲಿ ಮಿಂದೆದ್ದ ರೈತರು

ನೇತಾಜಿ ಸುಭಾಷ್‌ಚಂದ್ರ ಬೋಸ್ ಜನ್ಮದಿನದ ಅಂಗವಾಗಿ ಕ್ರೀಡಾಕೂಟ

​ಪ್ರಜಾವಾಣಿ ವಾರ್ತೆ
Published 19 ಜುಲೈ 2023, 5:52 IST
Last Updated 19 ಜುಲೈ 2023, 5:52 IST
ಕುರುಗೋಡು ತಾಲ್ಲೂಕಿನ ಮದಿರೆ ಗ್ರಾಮದಲ್ಲಿ ಜರುಗಿದ ಗ್ರಾಮೀಣ ಕ್ರೀಡಾಕೂಟದ ಮರಳಿನ ಚೀಲ ಎತ್ತುವ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಕೆ.ಮಲ್ಲಿಕಾರ್ಜುನ
ಕುರುಗೋಡು ತಾಲ್ಲೂಕಿನ ಮದಿರೆ ಗ್ರಾಮದಲ್ಲಿ ಜರುಗಿದ ಗ್ರಾಮೀಣ ಕ್ರೀಡಾಕೂಟದ ಮರಳಿನ ಚೀಲ ಎತ್ತುವ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಕೆ.ಮಲ್ಲಿಕಾರ್ಜುನ   

ಕುರುಗೋಡು: ಮಡಿಕೆ, ಕುಂಟೆ, ರಂಟೆ, ಕಳೆ, ಪೈರು ನಾಟಿ, ಕ್ರಿಮಿನಾಶಕ, ರಸಗೊಬ್ಬರ ಸಿಂಪರಣೆಯಂತ ಕೃಷಿ ಚಟುವಟಿಕೆ ಬಗ್ಗೆ ಚರ್ಚಿಸುತ್ತಿದ್ದ ರೈತರು ಎರಡು ಗುಂಪುಗಳಾಗಿ ಹಗ್ಗ ಜಗ್ಗಿದರು, ನೂರು ಕೆ.ಜಿ. ಮರಳು ತುಂಬಿದ ಚೀಲವನ್ನು ಎತ್ತಿ ಶಕ್ತಿ ಪ್ರದರ್ಶಿಸಿದರು, ಗೋಣಿಚೀಲದಲ್ಲಿ ನಿಂತು ಕುಣಿದು ಕುಪ್ಪಳಿಸಿ ಓಡಿ ಬಾಲ್ಯಕ್ಕೆ ಜಾರಿದರು, ಸೈಕಲ್ ಸವಾರಿ ಮಾಡಿ ಸಂಭ್ರಮಿಸಿ ಚಪ್ಪಾಳೆ ಗಿಟ್ಟಿಸಿಕೊಂಡರು.

ಈ ದೃಶ್ಯಗಳು ಕಂಡುಬಂದಿದ್ದು, ತಾಲ್ಲೂಕಿನ ಮದಿರೆ ಗ್ರಾಮದಲ್ಲಿ ಅಖಿಲ ಭಾರತ ಪ್ರಜಾಸತ್ತಾತ್ಮಕ ಯುವಜನ ಸಂಘಟನೆ ವತಿಯಿಂದ ನೇತಾಜಿ ಸುಭಾಷ್ ಚಂದ್ರಬೋಸ್ ಜನ್ಮದಿನದ ಸವಿನೆನಪಿಗಾಗಿ ಸೋಮವಾರ ಗ್ರಾಮದ ರೈತರು ಮತ್ತು ಯುವಕರಿಗಾಗಿ ಏರ್ಪಡಿಸಿದ್ದ ಗ್ರಾಮೀಣ ಕ್ರೀಡಾಕೂಟದಲ್ಲಿ.

ಕ್ರೀಡಾಕೂಟದಲ್ಲಿ ನೂರಕ್ಕೂ ಅಧಿಕ ಜನರು ಭಾಗವಹಿಸಿದ್ದರು.

ADVERTISEMENT

ಚಾಲನೆ ನೀಡಿ ಮಾತನಾಡಿದ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಕೋಳೂರು ಪಂಪಾಪತಿ, ಯುವಜನತೆ ಮೊಬೈಲ್ ಗೀಳಿಗೆ ದಾಸರಾಗಿ ಗ್ರಾಮೀಣ ಕ್ರೀಡೆಗಳನ್ನು ಮರೆತಿದ್ದಾರೆ. ಐಪಿಎಲ್, ರಮ್ಮಿಯಂತಹ ಜೂಜಾಟದಲ್ಲಿ ತೊಡಗಿ ಸಮಾಜಕ್ಕೆ ಮಾರಕವಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

ಮುಖಂಡ ಜಗದೀಶ್ ನೇಮಕಲ್ ಮಾತನಾಡಿ, ಕ್ರಿಕೆಟ್, ಹಾಕಿಯಂತ ಪ್ರಭಾವಿ ಆಟಗಳ ಮುಂದೆ ಗ್ರಾಮೀಣ ಕ್ರೀಡೆಗಳು ಕಣ್ಮರೆಯಾಗುತ್ತಿವೆ. ಅವುಗಳನ್ನು ಉಳಿಸಿ ಬೆಳೆಸಲು ಯುವಕರು ಮುಂದಾಗಬೇಕು ಎಂದು ಸಲಹೆ ನೀಡಿದರು.

ಮುಖಂಡರಾದ ರುದ್ರಪ್ಪ, ಜೆಡಿ.ಗೋವಿಂದಪ್ಪ, ಡಿಕೆ.ನಾಗರೆಡ್ಡಿ, ಕಾಡುಸಿದ್ದಪ್ಪ, ಪಂಪಾಪತಿ, ಲಿಂಗಪ್ಪ, ದೇವರಾಜ ಮತ್ತು ಸಿ.ನಾಗರಾಜ ಇದ್ದರು.

ಕ್ರೀಡಾ ವಿಜೇತರು:

ಗೋಣಿ ಚೀಲದ ಓಟ: ಯಶವಂತ ಪ್ರಥಮ, ಮಾಳಪ್ಪ ದ್ವಿತೀಯ, ಮತ್ತು ಸಿ,ಕಾರ್ತಿಕ ತೃತೀಯ.

ಸೈಕಲ್ ರೇಸ್: ಅನಂತ ಕುಮಾರ್ ಪ್ರಥಮ, ಕಾರ್ತಿಕ ದ್ವಿತೀಯ ಮತ್ತು ಕೆಂಚಮಾಳಪ್ಪ ತೃತೀಯ.

ಮರಳು ಚೀಲ ಎತ್ತು ಸ್ಪರ್ಧೆ: ಕೆ.ಮಲ್ಲಿಕಾರ್ಜುನ ಪ್ರಥಮ, ಪ್ರಭಾಕರ ದ್ವಿತೀಯ ಮತ್ತು ಗೂಳಪ್ಪ ತೃತೀಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.