ಕೂಡ್ಲಿಗಿ: ಪಟ್ಟಣದ ಕೊಟ್ಟೂರು ಮಾರ್ಗದ ಕುಪ್ಪಿನಕೆರೆ ಕ್ರಾಸ್ ಬಳಿ ಶಾಲಾ ಬಸ್ ಮತ್ತು ಬೈಕ್ ಮಧ್ಯ ಸೋಮವಾರ ಡಿಕ್ಕಿಯಾಗಿ ಉಂಟಾಗಿದ್ದು, ಘಟನೆಯಲ್ಲಿ ಬೈಕ್ ಸವಾರ ಶಿಕ್ಷಕ ಕೆ.ಮುನಿಯಪ್ಪ(56) ಮೃತಪಟ್ಟಿದ್ದಾರೆ.
ತಾಲ್ಲೂಕಿನ ಅಮ್ಮನಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಿಂದಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಪ್ರತಿದಿನ ಕೊಟ್ಟೂರು ಪಟ್ಟಣದಿಂದ ಬಂದು ಹೋಗುತ್ತಿದ್ದರು. ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ನಡೆಯುತ್ತಿರುವ ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷಾ ಕೊಠಡಿಗೆ ಮೇಲ್ವಿಚಾರಕರಾಗಿ ಅವರನ್ನು ನೇಮಕ ಮಾಡಲಾಗಿತ್ತು. ಇದಕ್ಕಾಗಿ ಅವರು ಬೆಳಿಗ್ಗೆ 9.30ರ ಸುಮಾರಿಗೆ ಕೊಟ್ಟೂರಿನಿಂದ ಬೈಕಿನಲ್ಲಿ ಬರುತ್ತಿದ್ದರು. ಕುಪ್ಪಿನಕೆರೆ ಕ್ರಾಸ್ ಬಳಿ ಬಡೇಲಡಕು ಗ್ರಾಮದ ಖಾಸಗಿ ಶಾಲಾ ಬಸ್ ಎದುರಿಗೆ ಬಂದಿದ್ದು, ಡಿಕ್ಕಿ ಸಂಭವಿಸಿದೆ. ಈ ಕುರಿತು ಕೂಡ್ಲಿಗಿ ಪೊಲೀಸರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಷಯ ತಿಳಿದು ಶಾಸಕ ಶ್ರೀನಿವಾಸ್ ಎನ್.ಟಿ. ಅವರು ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಭೇಟಿ ನೀಡಿದರು. ಮೃತ ಶಿಕ್ಷಕರ ಕುಟುಂಬಕ್ಕೆ ಸಾಂತ್ವನ ಹೇಳಿದರು. ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಅನೇಕ ಶಿಕ್ಷಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.