ADVERTISEMENT

ಮಹಿಳಾ ಮತದಾರರಿಗೆ ಬಿಂದಿ ಇರುವ ಪತ್ರಿಕೆ ನೀಡುತ್ತಿರುವ ಅನಂದ್ ಸಿಂಗ್‌

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2019, 15:16 IST
Last Updated 29 ನವೆಂಬರ್ 2019, 15:16 IST
   

ಹೊಸಪೇಟೆ: ವಿಜಯನಗರ ಕ್ಷೇತ್ರದ ಉಪಚುನಾವಣೆ ಕಣದಲ್ಲಿರುವ ಬಿಜೆಪಿ ಅಭ್ಯರ್ಥಿ ಆನಂದ್‌ ಸಿಂಗ್‌ ಅವರು ಮಹಿಳಾ ಮತದಾರರಿಗೆ ಬಿಂದಿಯಾ ಕಳುಹಿಸಿ, ಆಮಿಷ ಒಡ್ಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಚುನಾವಣೆ ಪ್ರಚಾರದ ಪ್ರಯುಕ್ತ ಕಾರ್ಡುಗಳನ್ನು ಮುದ್ರಿಸಲಾಗಿದೆ. ಅದರಲ್ಲಿ ಆನಂದ್‌ ಸಿಂಗ್‌ ಹಾಗೂ ಅವರ ಪಕ್ಷದ ಮುಖಂಡರುಗಳ ಭಾವಚಿತ್ರವಿದೆ. ಮತದಾನದ ದಿನಾಂಕ, ಸಮಯ ನಮೂದಿಸಲಾಗಿದೆ. ಒಳಭಾಗದಲ್ಲಿ ‘ದೀರ್ಘ ಸುಮಂಗಲಿ’ ಎಂಬ ಬರಹವಿದ್ದು, ಅದರೊಂದಿಗೆ ಬಿಂದಿಯಾ ಅಂಟಿಸಿ ಕೊಡಲಾಗುತ್ತಿದೆ ಎಂದು ಕಾಂಗ್ರೆಸ್‌ ಆರೋಪ ಮಾಡಿದೆ.

‘ಡಿ. 1ರಂದು ಆನಂದ್‌ ಸಿಂಗ್‌ ಮಗನ ಅದ್ದೂರಿ ಮದುವೆ ನಡೆಯಲಿದ್ದು, ಮತದಾರರಿಗೆ ಆಮಿಷವೊಡ್ಡುತ್ತಿದ್ದಾರೆ ಎಂದು ಚುನಾವಣಾ ಆಯೋಗಕ್ಕೆ ದೂರು ಕೊಟ್ಟರು ಅಧಿಕಾರಿಗಳು ಮೈಮರೆತು ಕೂತಿದ್ದಾರೆ. ಅವರು ಬಿಜೆಪಿಗೆ ಸಹಾಯವಾಗುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ. ಇದರಿಂದ ಚುನಾವಣೆ ನಿಷ್ಪಕ್ಷಪಾತವಾಗಿ ನಡೆಯುವುದು ಅನುಮಾನ’ ಎಂದು ಕಾಂಗ್ರೆಸ್‌ ಮುಖಂಡ ನಿಂಬಗಲ್‌ ರಾಮಕೃಷ್ಣ ತಿಳಿಸಿದ್ದಾರೆ.

ADVERTISEMENT

‘ಈ ವಿಷಯ ನನ್ನ ಗಮನಕ್ಕೆ ಬಂದಿಲ್ಲ. ಏನಾಗಿದೆ ಎಂಬುದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇನೆ’ ಎಂದು ಚುನಾವಣಾಧಿಕಾರಿ ಶೇಖ್‌ ತನ್ವೀರ್‌ ಆಸಿಫ್‌ ತಿಳಿಸಿದ್ದಾರೆ. ಪ್ರತಿಕ್ರಿಯೆಗೆ ಆನಂದ್‌ ಸಿಂಗ್‌ ಸಿಕ್ಕಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.