ADVERTISEMENT

ಬಿಜೆಪಿ ಪ್ರಚಾರಕ್ಕೆ ಚಕ್ಕಡಿ ಮೆರುಗು

150ಕ್ಕೂ ಹೆಚ್ಚು ಚಕ್ಕಡಿಗಳ ಮೆರವಣಿಗೆ; ಪ್ರಚಾರದಲ್ಲಿ ಗ್ರಾಮೀಣ ಸೊಗಡು

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2019, 9:18 IST
Last Updated 21 ಏಪ್ರಿಲ್ 2019, 9:18 IST
ಬಿಜೆಪಿ ಮುಖಂಡರು ಚಕ್ಕಡಿಗಳ ಮೆರವಣಿಗೆಯಲ್ಲಿ ಮತಯಾಚಿಸಿದರು
ಬಿಜೆಪಿ ಮುಖಂಡರು ಚಕ್ಕಡಿಗಳ ಮೆರವಣಿಗೆಯಲ್ಲಿ ಮತಯಾಚಿಸಿದರು   

ಹೊಸಪೇಟೆ: ಚಕ್ಕಡಿಗಳ ಮೆರವಣಿಗೆಯು ಭಾನುವಾರ ನಗರದಲ್ಲಿ ಬಿಜೆಪಿ ಅಭ್ಯರ್ಥಿ ಪರ ಕೈಗೊಂಡ ಪ್ರಚಾರ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ತಂದುಕೊಟ್ಟಿತ್ತು.

ಹಳ್ಳಿ ಭಾಗದ ಪಕ್ಷದ ಕಾರ್ಯಕರ್ತರು ಪಕ್ಕಾ ಗ್ರಾಮೀಣ ಸೊಗಡಿನಲ್ಲಿ ಚಕ್ಕಡಿಗಳ ಮೇಲೇರಿ, ಧ್ವಜ ಬೀಸುತ್ತ ಪಕ್ಷವನ್ನು ಬೆಂಬಲಿಸುವಂತೆ ಮನವಿ ಮಾಡಿ ಮತದಾರರನ್ನು ಆಕರ್ಷಿಸಿದರು. ವಿಶಿಷ್ಟ ರೀತಿಯಲ್ಲಿ ಅಲಂಕಾರಗೊಂಡಿದ್ದ ಚಕ್ಕಡಿಗಳು ಸಾಲು ಸಾಲಾಗಿ ಮುಂದೆ ಹೋಗುತ್ತಿದ್ದರೆ ದಾರಿ ಹೋಕರು ಕುತೂಹಲದಿಂದ ಅವುಗಳನ್ನು ನೋಡುತ್ತಿದ್ದರು. ದಾರಿಯುದ್ದಕ್ಕೂ ಅನೇಕ ಜನ ಅವುಗಳ ಛಾಯಾಚಿತ್ರ, ವಿಡಿಯೊ ತೆಗೆದುಕೊಳ್ಳುತ್ತಿರುವುದು ಕಂಡು ಬಂತು.

ನಗರದ ಮುನ್ಸಿಪಲ್‌ ಮೈದಾನದಿಂದ ಆರಂಭವಾದ ಮೆರವಣಿಗೆಯು ಕಾಲೇಜು ರಸ್ತೆ, ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತ, ರೋಟರಿ ವೃತ್ತ, ಬಸ್‌ ನಿಲ್ದಾಣ, ಮಹಾತ್ಮ ಗಾಂಧಿ ವೃತ್ತ, ಪಾದಗಟ್ಟೆ ಆಂಜನೇಯ ದೇವಸ್ಥಾನ, ಮೇನ್‌ ಬಜಾರ್‌ ಮೂಲಕ ಹಾದು ವಡಕರಾಯ ದೇವಸ್ಥಾನದ ಬಳಿ ಕೊನೆಗೊಂಡಿತು. ಮೆರವಣಿಗೆಯ ಮಾರ್ಗ ಮಧ್ಯದಲ್ಲಿ ಪ್ರಮುಖ ವೃತ್ತಗಳಲ್ಲಿ ಪಟಾಕಿ ಸಿಡಿಸಲಾಯಿತು. ಕಾರ್ಯಕರ್ತರು ಜಯಘೋಷಗಳನ್ನು ಕೂಗಿದರು. 150ಕ್ಕೂ ಹೆಚ್ಚು ಎತ್ತಿನ ಬಂಡಿಗಳು ಮೆರವಣಿಗೆಯಲ್ಲಿ ಇದ್ದವು. ಅವುಗಳೊಂದಿಗೆ ಕಾರ್ಯಕರ್ತರು ಕೂಡ ಹೆಜ್ಜೆ ಹಾಕಿದರು. ಇದರಿಂದ ಮೆರವಣಿಗೆ ಹಾದು ಹೋದ ಮಾರ್ಗದಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತ್ತು.

ADVERTISEMENT

ಇದಕ್ಕೂ ಮುನ್ನ ಪ್ರಚಾರಕ್ಕೆ ಚಾಲನೆ ನೀಡಿದ ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಘಟಕದ ಉಪಾಧ್ಯಕ್ಷೆ ರಾಣಿ ಸಂಯುಕ್ತಾ ಮಾತನಾಡಿ, ‘ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗುವುದು ಶತಃಸಿದ್ಧ. ಜಿಲ್ಲೆಯಲ್ಲಿ ವೈ. ದೇವೇಂದ್ರಪ್ಪನವರನ್ನು ಗೆಲ್ಲಿಸುವ ಮೂಲಕ ಮೋದಿಯವರ ಕೈ ಮತ್ತಷ್ಟು ಬಲಪಡಿಸಬೇಕು. ಈ ಚುನಾವಣೆ ಮೂಲಕ ಬಿಜೆಪಿಯು ಉಪಚುನಾವಣೆಯ ಸೋಲನ್ನು ಬಡ್ಡಿ ಸಮೇತ ತೀರಿಸಿಕೊಳ್ಳಲಿದೆ’ ಎಂದು ಹೇಳಿದರು.

ಮುಖಂಡರಾದ ಶ್ರೀನಿವಾಸ ರೆಡ್ಡಿ, ಮೃತ್ಯುಂಜಯ ಜಿನಗಾ, ದೇವರಮನಿ ಶ್ರೀನಿವಾಸ, ಜಂಬಾನಹಳ್ಳಿ ವಸಂತ, ಅಶೋಕ ಜೀರೆ, ರಾಮಣ್ಣ, ಚಂದ್ರಕಾಂತ್ ಕಾಮತ್, ಶಂಕರ್ ಮೇಟಿ, ಬಸವರಾಜ ನಾಲತ್ವಾಡ, ರಾಮಚಂದ್ರಗೌಡ, ಸಾಲಿ ಸಿದ್ದಯ್ಯ ಸ್ವಾಮಿ, ಗೋಸಲ ಭರಮಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.