ಹೊಸಪೇಟೆ: ‘ರಸ್ತೆಯ ಒಂದು ಬದಿಯಲ್ಲಿ ಕೆಲಸ ನಡೆಯುತ್ತಿದ್ದರಿಂದ ಇಕ್ಕಟ್ಟಾದ ರಸ್ತೆಯಲ್ಲಿ ವಾಹನಗಳು ಓಡಾಡುತ್ತಿದ್ದವು. ನಾನು ಹೋಗುತ್ತಿದ್ದ ಒಂದು ಬದಿಯಲ್ಲಿ ಸಾಲಾಗಿ ವಾಹನಗಳು ನಿಂತಿದ್ದವು. ನಾನು ಅವುಗಳನ್ನು ದಾಟಿಕೊಂಡು ಹೋಗುವಾಗ ಎದುರಿನಿಂದ ಕಾರು ಬಂದು ಡಿಕ್ಕಿ ಸಂಭವಿಸಿದೆ’
ತಾಲ್ಲೂಕಿನ ಮರಿಯಮ್ಮನಹಳ್ಳಿ ಸಮೀಪದ ರಾಷ್ಟ್ರೀಯ ಹೆದ್ದಾರಿ 50ರ ಮೇಲೆ ಭಾನುವಾರ ಮಧ್ಯಾಹ್ನ ಶಾಸಕ ಭೀಮಾ ನಾಯ್ಕ ಅವರ ಮಗ ಅಶೋಕ ಸೇರಿದಂತೆ ಮೂವರು ತೆರಳುತ್ತಿದ್ದ ಕಾರಿಗೆ ಎದುರಿನಿಂದ ಡಿಕ್ಕಿ ಹೊಡೆದು ಸದ್ಯ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಟಾಟಾ ಏಸ್ ಚಾಲಕ ಚಾಂದ್ ಬಾಷ ಮೇಲಿನಂತೆ ಹೇಳಿದರು.
‘ಒಂದು ಬದಿಯಲ್ಲಿ ವಾಹನಗಳು ನಿಂತಿದ್ದರಿಂದ ನಾನು ವೇಗವಾಗಿ ಅವುಗಳನ್ನು ದಾಟಿಕೊಂಡು ಹೋಗಬೇಕಾಯಿತು. ಎದುರಿನಿಂದ ಕಾರು ಬರುವುದು ಗೊತ್ತಾದ ಕೂಡಲೇ ಲೈಟ್ ಹಾಕಿ ಎಚ್ಚರಿಸುವ ಕೆಲಸ ಮಾಡಿದ್ದೆ. ಆದರೆ, ಅವರು ಸಹ ಎದುರಿನಿಂದ ವೇಗದಲ್ಲಿ ಬಂದದ್ದರಿಂದ ಡಿಕ್ಕಿ ಸಂಭವಿಸಿಯೇ ಬಿಟ್ಟಿತು. ಘಟನೆಯಲ್ಲಿ ಇಬ್ಬರದೂ ತಪ್ಪಿದೆ’ ಎಂದು ನೋವಿನಲ್ಲಿ ನರಳಾಡುತ್ತಿದ್ದ ಚಾಂದ್ ಬಾಷ ‘ಪ್ರಜಾವಾಣಿ’ಗೆ ತಿಳಿಸಿದರು.
‘ನನ್ನದು ಮೂಲತಃ ವಿಜಯಪುರ. ಟೊಮ್ಯಾಟೊ ಖರೀದಿಗೆಂದು ದಾವಣಗೆರೆಗೆ ಹೊರಟಿದ್ದೆ. ಆದರೆ, ವಿಧಿ ಬೇರೆಯದು ಬರೆದಿತ್ತು. ನಮ್ಮಂತಹ ದುಡಿದು ತಿನ್ನುವ ಜನರಿಗೆ ಈ ರೀತಿ ಆಗಬಾರದು’ ಎಂದರು.
ಘಟನೆಯಲ್ಲಿ ಶಾಸಕರ ಮಗ ಅಶೋಕ್, ಅವರ ಕಾರಿನ ಚಾಲಕ ಹುಲುಗಪ್ಪ ಅವರಿಗೆ ಸಣ್ಣ ಪ್ರಮಾಣದ ಗಾಯಗಳಾಗಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.