ಬಳ್ಳಾರಿ:2019ರ ಕೇಂದ್ರ ಬಜೆಟ್ಗೆ ಸಂಬಂಧಿಸಿದಂತೆ ಹಲವು ಮಂದಿ ಪ್ರತಿಕ್ರಿಯೆ ನೀಡಿದ್ದಾರೆ. ಕೆಲವರು ನಿರಾಶೆ ವ್ಯಕ್ತಪಡಿಸಿದರೆ, ಇನ್ನು ಕೆಲವರು ಆಶಾದಾಯಕವಾಗಿದೆ ಎಂದಿದ್ದಾರೆ.
* ದೇಶದ ಜ್ವಲಂತ ಸಮಸ್ಯೆಗಳಾದ ಕೃಷಿ ಸಂಕಟ, ನಿರುದ್ಯೋಗ ತಾಂಡವವಾಡುತ್ತಿದೆ. ಆದರೆ, ಎರಡರ ಬಗ್ಗೆ ಬಜೆಟ್ನಲ್ಲಿ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ. ರಾಜಕೀಯ ದೃಷ್ಟಿಕೋನ ಒಳಗೊಂಡಿರುವ ಬಜೆಟ್ ಆಗಿದೆ. ಸಮಸ್ಯೆ ಬಗೆಹರಿಸುವ ಯಾವ ಉದ್ದೇಶವೂ ಇಲ್ಲ.
–ಶಿವಕುಮಾರ ಮಾಳಗಿ, ಪರಿಸರ ಹೋರಾಟಗಾರ
* ವಾರ್ಷಿಕ ₹5 ಲಕ್ಷ ಆದಾಯ ಹೊಂದಿರುವವರಿಗೆ ತೆರಿಗೆಯಲ್ಲಿ ವಿನಾಯಿತಿ ನೀಡಿರುವುದು ಒಳ್ಳೆಯ ಬೆಳವಣಿಗೆ. 60 ವರ್ಷ ವಯಸ್ಸಿನ ಮೇಲಿನವರಿಗೆ ಮಾಸಿಕ ₹3 ಸಾವಿರ ಪಿಂಚಣಿ ಘೋಷಿಸಿ ಅವರ ನೆರವಿಗೆ ಬರಲಾಗಿದೆ. ಇದು ಮಧ್ಯಮ ವರ್ಗದ ಬಜೆಟ್.
–ಅಶ್ವಿನ್ ಕೋತಂಬ್ರಿ, ಅಧ್ಯಕ್ಷ, ತಾಲ್ಲೂಕು ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ
* ಇದು ಚುನಾವಣಾ ಪೂರ್ವ ಬಜೆಟ್ ಆಗಿರುವುದರಿಂದ ಸಮಾಜದ ಎಲ್ಲ ವರ್ಗಗಳನ್ನು ತೃಪ್ತಿಪಡಿಸಲಾಗಿದೆ. ಜನಪರ ಹಾಗೂ ಜನಪ್ರಿಯ ಹೌದು. ಕಿಸಾನ್ ಸಮ್ಮಾನ ಯೋಜನೆ ಜಾರಿಗೆ ತಂದಿರುವುದು ಒಳ್ಳೆಯ ಬೆಳವಣಿಗೆ. ಅಸಂಘಟಿತ ಕಾರ್ಮಿಕರ ನೆರವಿಗೆ ಬರಲಾಗಿದೆ.
–ವೈ. ಯಮುನೇಶ್, ಅಧ್ಯಕ್ಷ, ವಿಜಯನಗರ ರೈಲ್ವೆ ಅಭಿವೃದ್ಧಿ ಸಮಿತಿ
* ಇದು ಚುನಾವಣೆಯ ವರ್ಷ ಆಗಿರುವುದರಿಂದ ರೈತರು, ಅಸಂಘಟಿತ ವರ್ಗದವರನ್ನು ಓಲೈಸುವ ಕೆಲಸ ಮಾಡಲಾಗಿದೆ. ಅಂಗನವಾಡಿ ಕಾರ್ಯಕರ್ತೆಯರ ಗೌರವ ಧನ ಹೆಚ್ಚಿಸಲಾಗಿದೆ. ಇದು ಪಕ್ಕಾ ಮತ ಗಳಿಕೆಯ ಉದ್ದೇಶ ಹೊಂದಿರುವ ಬಜೆಟ್ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.
–ಆರ್. ಭಾಸ್ಕರ್ ರೆಡ್ಡಿ, ಕಾರ್ಮಿಕ ಮುಖಂಡ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.