ಹೊಸಪೇಟೆ (ವಿಜಯನಗರ): ನಗರಸಭೆ ವಿಶೇಷ ಸಾಮಾನ್ಯ ಸಭೆ ಬುಧವಾರ 20 ನಿಮಿಷಗಳಲ್ಲೇ ಕೊನೆಗೊಂಡಿತು.
2019–20ನೇ ಸಾಲಿನ 14ನೇ ಹಣಕಾಸು ಅನುದಾನದ ಉಳಿತಾಯ ಮೊತ್ತ ಹಾಗೂ ಎಸ್.ಎಫ್.ಸಿ. ಅನುದಾನದಲ್ಲಿ ವಿವಿಧ ಕಾಮಗಾರಿಗಳಿಗೆ ಗುತ್ತಿಗೆ ಆದೇಶ ನೀಡುವುದರ ಬಗ್ಗೆ ಸಭೆಯ ಅನುಮೋದನೆ ಪಡೆಯಲು ವಿಶೇಷ ಸಭೆ ಕರೆಯಲಾಗಿತ್ತು. ಆದರೆ, ಹೆಚ್ಚಿನ ಚರ್ಚೆಯಿಲ್ಲದೆ ಸಭೆ 20 ನಿಮಿಷಗಳಲ್ಲೇ ಕೊನೆಗೊಂಡಿತು.
ನಗರಸಭೆ ಅಧಿಕಾರಿಗಳಿಗೆ ಕಚೇರಿ ಕೆಲಸಕ್ಕಾಗಿ ಓಡಾಡಲು ಗುತ್ತಿಗೆ ಆಧಾರದ ಮೇಲೆ ವಾಹನಕ್ಕಾಗಿ ಟೆಂಡರ್ ಕರೆಯಲು ಸಭೆ ಅನುಮೋದಿಸಿತು. ಬೀದಿ ನಾಯಿಗಳ ಉಪಟಳ ತಡೆಯಲು ಸಂತಾನಹರಣ ಶಸ್ತ್ರಚಿಕಿತ್ಸೆ ಕೈಗೊಳ್ಳುವುದರ ಬಗ್ಗೆ ನಿರ್ಧಾರಕ್ಕೆ ಬರಲಾಯಿತು.
ಉಪಾಧ್ಯಕ್ಷ ಎಲ್.ಎಸ್. ಆನಂದ್ ಮಾತನಾಡಿ, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದವರಿಗೆ ಸರ್ಕಾರದ ವಿವಿಧ ಇಲಾಖೆಗಳಿಂದ ನಡೆಸಲಾಗುವ ರಾಷ್ಟ್ರ/ರಾಜ್ಯ ಮಟ್ಟದ ಕ್ರೀಡೆ, ಕಲೆ, ಭಾಷಣ ಹಾಗೂ ಇತರೆ ಸಾಂಸ್ಕೃತಿಕ ಚಟುವಟಿಕೆಗಳ ಸ್ಪರ್ಧೆಗಳಲ್ಲಿ ಭಾಗವಹಿಸಿ ಜಯ ಗಳಿಸಿದವರಿಗೆ ಆಯಾ ವರ್ಷ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಅದಕ್ಕೆ ಈ ವರ್ಷ ಕಡಿಮೆ ಅರ್ಜಿಗಳು ಬಂದಿವೆ. ಏಕೆ ಹೀಗಾಗಿದೆ ಎನ್ನುವುದು ಪರಿಶೀಲಿಸಬೇಕಿದೆ ಎಂದರು.
ಅಧ್ಯಕ್ಷೆ ಸುಂಕಮ್ಮ, ಪೌರಾಯುಕ್ತ ಮನೋಹರ್ ನಾಗರಾಜ, ಸ್ಥಾಯಿ ಸಮಿತಿ ಅಧ್ಯಕ್ಷ ತಾರಿಹಳ್ಳಿ ಜಂಭುನಾಥ ಇತರರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.