ADVERTISEMENT

‘₹6 ಕೋಟಿ ಸಾಲ ನೀಡುವ ಗುರಿ’

ಸಹಕಾರಿ ಕೃಷಿ, ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಸಭೆ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2024, 16:20 IST
Last Updated 12 ಸೆಪ್ಟೆಂಬರ್ 2024, 16:20 IST
ಹಗರಿಬೊಮ್ಮನಹಳ್ಳಿಯಲ್ಲಿ ನಡೆದ ತಾಲ್ಲೂಕು ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಮಹಾಜನ ಸಭೆಯಲ್ಲಿ ಕಾಸ್ಕರ್ಡ್ ಬ್ಯಾಂಕ್ ಜಿಲ್ಲಾ ವ್ಯವಸ್ಥಾಪಕ ಸಿ.ಮಂಜುನಾಥ ಮಾತನಾಡಿದರು. ಅಧ್ಯಕ್ಷ ಬಿ.ಗಂಗಾಧರ, ವ್ಯವಸ್ಥಾಪಕ ಶಿವಕವಿ ತಿಪ್ಪೇಸ್ವಾಮಿ ಭಾಗವಹಿಸಿದ್ದರು
ಹಗರಿಬೊಮ್ಮನಹಳ್ಳಿಯಲ್ಲಿ ನಡೆದ ತಾಲ್ಲೂಕು ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಮಹಾಜನ ಸಭೆಯಲ್ಲಿ ಕಾಸ್ಕರ್ಡ್ ಬ್ಯಾಂಕ್ ಜಿಲ್ಲಾ ವ್ಯವಸ್ಥಾಪಕ ಸಿ.ಮಂಜುನಾಥ ಮಾತನಾಡಿದರು. ಅಧ್ಯಕ್ಷ ಬಿ.ಗಂಗಾಧರ, ವ್ಯವಸ್ಥಾಪಕ ಶಿವಕವಿ ತಿಪ್ಪೇಸ್ವಾಮಿ ಭಾಗವಹಿಸಿದ್ದರು   

ಹಗರಿಬೊಮ್ಮನಹಳ್ಳಿ: ತಾಲ್ಲೂಕು ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‍ನಿಂದ ಈ ವರ್ಷದಲ್ಲಿ ಕೃಷಿ ವಿಭಾಗದಲ್ಲಿ ₹4 ಕೋಟಿ, ವ್ಯಾಪಾರ ಅಭಿವೃದ್ಧಿಗೆ ₹2 ಕೋಟಿ ಸೇರಿದಂತೆ ಒಟ್ಟು ₹6 ಕೋಟಿ ಸಾಲ ನೀಡುವ ಗುರಿ ಹೊಂದಲಾಗಿದೆ’ ಎಂದು ಬ್ಯಾಂಕ್‌ನ ವ್ಯವಸ್ಥಾಪಕ ಶಿವಕವಿ ತಿಪ್ಪೇಸ್ವಾಮಿ ತಿಳಿಸಿದರು.

ಪಟ್ಟಣದ ಹಳೇ ಊರಿನ ಸಮುದಾಯ ಭವನದಲ್ಲಿ ಗುರುವಾರ ನಡೆದ ವಾರ್ಷಿಕ ಮಹಾಜನ ಸಭೆಯಲ್ಲಿ ಮಾತನಾಡಿದ ಅವರು, ‘ಬ್ಯಾಂಕ್ ವಸೂಲಾತಿಯಲ್ಲಿ ಜಿಲ್ಲೆಯಲ್ಲಿಯೇ ಪ್ರಥಮ ಸ್ಥಾನದಲ್ಲಿದೆ. ಒಂದು ವರ್ಷದಲ್ಲಿ ₹69.92 ಲಕ್ಷ ನಿವ್ವಳ ಲಾಭ ಬಂದಿದೆ. ಶೇ.93ರಷ್ಟು ಸಾಲ ವಸೂಲಾತಿಯಾಗಿದೆ.  ಒಟ್ಟು 6,741 ಷೇರುದಾರರಿದ್ದಾರೆ’ ಎಂದರು.

ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಮಾಜಿ ಅಧ್ಯಕ್ಷ ಹುಡೇದ ಗುರುಬಸವರಾಜ ಮಾತನಾಡಿ, ‘ವ್ಯಾಪಾರಾಭಿವೃದ್ಧಿ ಅಡಿಯಲ್ಲಿ ಸಣ್ಣಪುಟ್ಟ ವ್ಯಾಪಾರಸ್ಥರಿಗೆ ನೀಡುವ ಬಳಕೆ ಸಾಲದ ಮಿತಿಯನ್ನು ₹50 ಸಾವಿರದಿಂದ ₹1ಲಕ್ಷಕ್ಕೆ ಹೆಚ್ಚಿಸಬೇಕು ಮತ್ತು ಎರಡು ಸಾಮಾನ್ಯ ಸಭೆ ಹಾಜರಿ ಮತ್ತು ವ್ಯವಹಾರದ ಕಡ್ಡಾಯದ ಮಿತಿಯನ್ನು ಸಡಿಲಗೊಳಿಸಿ ಚುನಾವಣೆ ಪ್ರಕ್ರಿಯೆಯಲ್ಲಿ ಎಲ್ಲರನ್ನು ಅರ್ಹಗೊಳಿಸಬೇಕು’ ಎಂದು ಮನವಿ ಮಾಡಿದರು.

ADVERTISEMENT

ಈ ಕುರಿತಂತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಬ್ಯಾಂಕ್ ಅಧ್ಯಕ್ಷ ಬಿ.ಗಂಗಾಧರ ತಿಳಿಸಿದರು. ಕಾಸ್ಕರ್ಡ್ ಜಿಲ್ಲಾ ವ್ಯವಸ್ಥಾಪಕ ಸಿ.ಮಂಜುನಾಥ, ‘ರೈತರಿಗೆ ಅನುಕೂಲ ಆಗುವಂತೆ ಯೋಜನೆಗಳನ್ನು ರೂಪಿಸಲಾಗಿದೆ, ಕೊಟ್ಟೂರು ತಾಲ್ಲೂಕಿನ ಬ್ಯಾಂಕ್‍ಗೆ ಸಂಬಂಧಿಸಿದ ಷೇರುದಾರರು ಮತ್ತು ಸದಸ್ಯರನ್ನು ವಿಂಗಡಣೆ ಪ್ರಕ್ರಿಯೆಗೆ ಶೀಘ್ರದಲ್ಲಿಯೆ ಚಾಲನೆ ನೀಡಲಾಗುವುದು’ ಎಂದರು. ‌

ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಪಿ.ಸೂರ್ಯಬಾಬು, ಪಿಎಲ್‍ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ವೈ.ಮಲ್ಲಿಕಾರ್ಜುನ, ಕಿನ್ನಾಳ್ ಸುಭಾಷ್, ಎಚ್.ಎಂ.ನಾಗರಾಜ್ ಮಾತನಾಡಿದರು. ಬ್ಯಾಂಕ್ ಉಪಾಧ್ಯಕ್ಷೆ ನಾಗಮ್ಮ, ನಿರ್ದೇಶಕರಾದ ಈ.ಕೃಷ್ಣಮೂರ್ತಿ, ಪಕ್ಕೀರಾಬಿ, ಜಿ.ಕೊಟ್ರಪ್ಪ, ದೇವಿಪ್ರಸಾದ್, ಬಿ.ಎಂ.ಗುರುವಯ್ಯ, ಡಿ.ಕೊಟ್ರೇಶಪ್ಪ, ಎಚ್.ಎಂ.ಮಲ್ಲಯ್ಯ, ಶಾಮಾಚಾರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.