ಕಂಪ್ಲಿ: ‘2024-25ನೇ ಸಾಲಿನಲ್ಲಿ ಎಮ್ಮಿಗನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮೂಲಕ ಬೆಂಬಲ ಬೆಲೆ ಯೋಜನೆಯಡಿ 1,128ರೈತರಿಂದ 74,162ಕ್ವಿಂಟಲ್ ಜೋಳ ಖರೀದಿಸಲಾಗಿದೆ. ಈಗಾಗಲೇ ಶೇ 90ರಷ್ಟು ರೈತರಿಗೆ ಡಿಬಿಟಿ ಮೂಲಕ ಹಣ ಜಮೆಯಾಗಿದೆ’ ಎಂದು ಶಾಸಕ ಜೆ.ಎನ್. ಗಣೇಶ್ ತಿಳಿಸಿದರು.
ತಾಲ್ಲೂಕಿನ ಎಮ್ಮಿಗನೂರು ಗ್ರಾಮದಲ್ಲಿ ಜೋಳ ಖರೀದಿ ಕೇಂದ್ರ ಆರಂಭಿಸಲು ಸಹಕರಿಸಿದ ಶಾಸಕರಿಗೆ ಗ್ರಾಮದ ರೈತರು, ಮುಖಂಡರು ಎಪಿಎಂಸಿ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಪ್ರತಿ ವರ್ಷ ಜೋಳ ಬೆಳೆದ ಗ್ರಾಮದ ರೈತರು ಪಡುತ್ತಿರುವ ಸಂಕಷ್ಟ ಅರಿತು ಸರ್ಕಾರದ ಮೇಲೆ ಒತ್ತಡ ಹೇರಿ ಸ್ಥಳೀಯವಾಗಿ ಖರೀದಿ ಕೇಂದ್ರ ಆರಂಭಿಸಿದ್ದೆ. ಹೊರ ರಾಜ್ಯಗಳ ಜೋಳ ಖರೀದಿಸಿ ಇಲ್ಲಿನ ರೈತರಿಗೆ ತೊಂದರೆಯನ್ನುಂಟು ಮಾಡುವ ದಲ್ಲಾಳಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಗ್ರಾಮದ ಎಪಿಎಂಸಿಯಲ್ಲಿ ಸಿಸಿ ರಸ್ತೆ, ಶೌಚಾಲಯ, ವೇಬ್ರಿಡ್ಜ್, ಶೆಡ್, ಆವರಣ ಗೋಡೆ ನಿರ್ಮಾಣ, ಸಂಸ್ಕರಣಾ ಘಟಕ, ಧಾನ್ಯ ಶೇಖರಣೆಗೆ 2,500ಎಂ.ಟಿ ಸಾಮರ್ಥ್ಯದ ಗೋದಾಮು ನಿರ್ಮಿಸಲು ಹಾಗೂ ಕಂಪ್ಲಿ ಉಪ ಮಾರುಕಟ್ಟೆಯನ್ನಾಗಿ ರೂಪಿಸಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ವಿವರಿಸಿದರು.
ಎಮ್ಮಿಗನೂರು ಗ್ರಾಮದ ತರಕಾರಿ ಮಾರುಕಟ್ಟೆ ನಿರ್ಮಾಣಕ್ಕೆ ₹2ಕೋಟಿ ಮಂಜೂರಾಗಿದೆ. 30ಹಾಸಿಗೆ ಆಸ್ಪತ್ರೆಗೆ ಪ್ರಸ್ತಾವ ಸಲ್ಲಿಸಿದೆ ಎಂದರು.
ಜೋಳ ಖರೀದಿ ಕೇಂದ್ರ ಆರಂಭಿಸಲು ಶ್ರಮಿಸಿದ ಶಾಸಕರು, ಅಧಿಕಾರಿಗಳು, ಜನಪ್ರತಿನಿಧಿಗಳನ್ನು ಗೌರವಿಸಲಾಯಿತು.
ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಬಿ. ಖಾಸಿಂಸಾಬ್, ಉಪಾಧ್ಯಕ್ಷ ಎಸ್. ಅಲ್ಲಾಸಾಬ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎಚ್.ಜೆ. ಶಾರದಾ, ಉಪಾಧ್ಯಕ್ಷ ದೊಡ್ಡ ಗಾದಿಲಿಂಗಪ್ಪ, ಎಪಿಎಂಸಿ ಅಧ್ಯಕ್ಷ ಎನ್. ಹಬೀಬ್ ರೆಹಮಾನ್, ಜಿಲ್ಲಾ ವ್ಯವಸ್ಥಾಪಕ ಶಿವಬಸವರಾಜ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ. ಮೂಕಯ್ಯಸ್ವಾಮಿ, ಪ್ರಮುಖರಾದ ಬೇರ್ಗಿ ಮಹೇಶಗೌಡ, ಬಿ. ಸದಾಶಿವಪ್ಪ, ಕೆ. ಕಾಶಿಮ್ಸಾಬ್, ವಿ. ವೀರೇಶ್, ಹೊನ್ನಳ್ಳಿ ಗಂಗಾಧರ, ಸಣ್ಣ ಜಡೆಪ್ಪ, ಜೀರ್ ಉಮೇಶ, ಸಂಘದ ನಿರ್ದೇಶಕರು, ಗ್ರಾ.ಪಂ ಸದಸ್ಯರು, ರೈತರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.