
ಹೂವಿನಹಡಗಲಿ: ‘ಮನರೇಗಾ ಬದಲಾವಣೆ ಹಾಗೂ ಟ್ರಂಪ್ ಸುಂಕಾಸ್ತ್ರದ ಕುರಿತು ಸಂಸತ್ನಲ್ಲಿ ವಿರೋಧ ಪಕ್ಷಗಳ ಪ್ರಶ್ನೆಗಳಿಗೆ ಉತ್ತರಿಸಲಾಗದೇ ಪ್ರಧಾನಿ ನರೇಂದ್ರ ಮೋದಿ ಪಲಾಯನ ಮಾಡುತ್ತಿದ್ದಾರೆ’ ಎಂದು ಸಂಸದ ಇ.ತುಕಾರಾಂ ಟೀಕಿಸಿದರು.
ತಾಲ್ಲೂಕಿನ ಹೊಳಲು ಗ್ರಾಮದ ಮಹಾತ್ಮ ಗಾಂಧಿ ವೃತ್ತದಲ್ಲಿ ಸೋಮವಾರ ಕಾಂಗ್ರೆಸ್ ಹಮ್ಮಿಕೊಂಡಿದ್ದ ನರೇಗಾ ಉಳಿವಿಗಾಗಿ ಪಾದಯಾತ್ರೆಯ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.
‘ಸಂಸತ್ನಲ್ಲಿ ಸಂವಿಧಾನ, ಪ್ರಜಾಪ್ರಭುತ್ವ ನೀತಿಗಳನ್ನು ಗಾಳಿಗೆ ತೂರಿ, ಆರ್ಎಸ್ಎಸ್ ಅಜೆಂಡಾ ಮಾತ್ರ ಪಾಲಿಸಲಾಗುತ್ತಿದೆ. ಮನರೇಗಾ ರದ್ದತಿಯಿಂದ ಬಡ ಕೂಲಿಕಾರ್ಮಿಕರ ಕನಸುಗಳು ಕಮರಿವೆ. ಇದನ್ನು ವಿರೋಧಿಸಿ ಕಾಂಗ್ರೆಸ್ ಹಮ್ಮಿಕೊಂಡಿರುವ ಪಾದಯಾತ್ರೆಯ ಒಂದೊಂದು ಹೆಜ್ಜೆಯೂ ಬಿಜೆಪಿ ದುರಾಡಳಿತ ಅಂತ್ಯಗೊಳಿಸುವ ಹೆಜ್ಜೆಯಾಗಿದೆ. ದೇಶಕ್ಕೆ ಒಳ್ಳೆಯ ದಿನ ಬರಬೇಕಾದರೆ ಬಿಜೆಪಿಯ ಗುಲಾಮಗಿರಿ ಆಡಳಿತವನ್ನು ಜನರು ಕೊನೆಗಾಣಿಸಬೇಕು’ ಎಂದು ಹೇಳಿದರು.
ದಾವಣಗೆರೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ ಮಾತನಾಡಿ, ಬಡವರು, ಕೂಲಿಕಾರರಿಗೆ ಆಸರೆಯಾಗಿದ್ದ ನರೇಗಾ ಯೋಜನೆಯನ್ನು ಕೇಂದ್ರ ಸರ್ಕಾರ ಹಂತ ಹಂತವಾಗಿ ಮುಚ್ಚುವ ಹುನ್ನಾರ ನಡೆಸಿದೆ. ಯೋಜನೆಯಲ್ಲಿ ಶೇ 60ರಷ್ಟು ಮಹಿಳಾ ಫಲಾನುಭವಿಗಳಿದ್ದಾರೆ. 6 ಕೋಟಿ ಜನರು ಬದುಕು ಕಟ್ಟಿಕೊಂಡಿದ್ದಾರೆ. ಯುಪಿಎ ಸರ್ಕಾರದ ಮಹತ್ವಾಕಾಂಕ್ಷಿ ಈ ಯೋಜನೆಯನ್ನು ರದ್ದುಗೊಳಿಸುವ ಮೂಲಕ ಕೇಂದ್ರ ಸರ್ಕಾರ ಗ್ರಾಮೀಣ ಜನರ ಬದುಕನ್ನು ನಾಶ ಮಾಡಲು ಹೊರಟಿದೆ ಎಂದು ವಾಗ್ದಾಳಿ ನಡೆಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ವಿ. ಶಿವಯೋಗಿ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ. ವಿಜಯಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಿ.ಹನುಮಂತಪ್ಪ, ಅಟವಾಳಗಿ ಕೊಟ್ರೇಶ, ಮುಖಂಡರಾದ ಚಂದ್ರಶೇಖರ ಭಟ್, ಅರವಳ್ಳಿ ವೀರಣ್ಣ, ಕೆ.ಎಸ್.ಶಾಂತನಗೌಡ, ಜಿ.ವಸಂತ, ಗುರುವಿನ ರಾಜು, ಶೋಭಾ ಬೆಂಡಿಗೇರಿ, ಎಸ್.ದೂದನಾಯ್ಕ, ಕೆ. ಗೌಸ್ ಮೊಹಿದ್ದೀನ್, ಕೊಟ್ರಗೌಡ ಪಾಟೀಲ್, ಚಂದ್ರನಾಯ್ಕ, ಬಸವನಗೌಡ ಪಾಟೀಲ್, ಜ್ಯೋತಿ ಮಲ್ಲಣ್ಣ, ನವಲಿ ಗುಡುದಯ್ಯ, ಗುಡಗೂರು ಜಯಣ್ಣ, ಎಚ್.ಡಿ.ಜಗ್ಗಿನ, ಚನ್ನವೀರಗೌಡ ಇದ್ದರು.
ದುರಳರ ಬಗ್ಗೆ ಎಚ್ಚರವಹಿಸಿ:
‘ಹಡಗಲಿ ಕ್ಷೇತ್ರದಲ್ಲಿ ಬೇಲಿಯೇ ಎದ್ದು ಹೊಲ ಮೇಯುತ್ತಿದೆ. ಹೆಬಿಟೇಟ್ ಕಂಪೆನಿಗೆ ಕಾಮಗಾರಿಗಳನ್ನು ಹರಾಜು ಹಾಕಲಾಗಿದೆ. ಕ್ಷೇತ್ರದಲ್ಲಿ ಈಗ ಏನೂ ಉಳಿದಿಲ್ಲ, ಉಂಡ ಗಂಗಾಳ ಆಗಿದೆ’ ಎಂದು ಮಾಜಿ ಸಚಿವ ಪಿ.ಟಿ.ಪರಮೇಶ್ವರನಾಯ್ಕ ಟೀಕಿಸಿದರು.
‘ಮೈಲಾರ ಜಾತ್ರೆಗೆ ಬಂದಿದ್ದ ಏಳೆಂಟು ಜಿಲ್ಲೆಯ ಜನರು ಧೂಳಿನ ರಸ್ತೆ ಕಂಡು ಶಪಿಸಿದ್ದಾರೆ. ಜನರು ಇಂತಹ ದುರುಳರಿಗೆ ಪಾಠ ಕಲಿಸದಿದ್ದರೆ ಮುಂದೊಂದು ದಿನ ತಾಲ್ಲೂಕನ್ನೇ ಮಾರಿ ಬಿಡುತ್ತಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.