ಹೊಸಪೇಟೆ(ವಿಜಯನಗರ): ‘ನಗರಸಭೆ ಚುನಾವಣೆಯಲ್ಲಿ ಸಿಪಿಎಂ ಪಕ್ಷವು ಮೂವರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ನಾಲ್ಕು ವಾರ್ಡ್ಗಳಲ್ಲಿ ಪಕ್ಷೇತರರನ್ನು ಬೆಂಬಲಿಸುತ್ತಿದೆ’ ಎಂದು ಪಕ್ಷದ ಜಿಲ್ಲಾ ಕಾರ್ಯದರ್ಶಿ ಆರ್.ಭಾಸ್ಕರ್ ರೆಡ್ಡಿ ತಿಳಿಸಿದರು.
‘ಸಿಪಿಎಂನಿಂದ 12, 20 ಹಾಗೂ 35ನೇ ವಾರ್ಡಿನಿಂದ ಅಭ್ಯರ್ಥಿಗಳನ್ನು ಚುನಾವಣೆಗೆ ನಿಲ್ಲಿಸಲಾಗಿದೆ. 7, 8, 10 ಹಾಗೂ 23ನೇ ವಾರ್ಡಿನಲ್ಲಿ ಸ್ವತಂತ್ರವಾಗಿ ಸ್ಪರ್ಧಿಸುತ್ತಿರುವ ನಾಲ್ಕು ಜನರನ್ನು ಬೆಂಬಲಿಸಲು ತೀರ್ಮಾನಿಸಲಾಗಿದೆ’ ಎಂದು ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡರು.
‘ಪಕ್ಷದ ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆದ್ದರೆ ಆಯಾ ವಾರ್ಡುಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುತ್ತದೆ. ರಾಷ್ಟ್ರೀಯ ಪಕ್ಷಗಳಿಂದ ಜನರಿಗೆ ಅನ್ಯಾಯವಾಗುವುದನ್ನು ತಪ್ಪಿಸಲಾಗುತ್ತದೆ’ ಎಂದು ತಿಳಿಸಿದರು.
12ನೇ ವಾರ್ಡಿನಿಂದ ಸಿಪಿಎಂನಿಂದ ಸ್ಪರ್ಧಿಸಿರುವ ಎ. ಕರುಣಾನಿಧಿ ಮಾತನಾಡಿ, ‘ತೆರಿಗೆ ಹೆಚ್ಚಳದಿಂದ ಜನಸಾಮಾನ್ಯರ ಮೇಲೆ ಬಹಳ ಹೊರೆ ಬಿದ್ದಿದೆ. ಚುನಾವಣೆಯಲ್ಲಿ ಗೆದ್ದರೆ ತೆರಿಗೆ ಇಳಿಸಲು ಶ್ರಮಿಸುವೆ’ ಎಂದು ಹೇಳಿದರು. ಮುಖಂಡರಾದ ಬಿಸಾಟಿ ಮಹೇಶ್, ಎನ್.ಯಲ್ಲಾಲಿಂಗ, ಈಡಿಗರ ಮಂಜುನಾಥ, ಮಂಜುಳಾ, ಬೀಯಮ್ಮ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.