ADVERTISEMENT

ಯುವಜನ ಆಯೋಗಕ್ಕೆ ಆಗ್ರಹಿಸಿ ಯುವಾಂದೋಲನ

​ಪ್ರಜಾವಾಣಿ ವಾರ್ತೆ
Published 29 ಜನವರಿ 2019, 12:12 IST
Last Updated 29 ಜನವರಿ 2019, 12:12 IST

ಹೊಸಪೇಟೆ: ‘ಕೇರಳದ ಮಾದರಿಯಲ್ಲಿ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಯುವಜನ ಆಯೋಗ ಸ್ಥಾಪಿಸಬೇಕು ಎಂದು ಆಗ್ರಹಿಸಿ ಯುವ ಆಂದೋಲನ ಅಭಿಯಾನ ಹಮ್ಮಿಕೊಳ್ಳಲಾಗಿದೆ’ ಎಂದು ಯುವಧ್ವನಿ ಯುವಜನರ ಒಕ್ಕೂಟದ ಸದಸ್ಯೆ ಮೇಘನಾ ತಿಳಿಸಿದರು.

ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜ. 5ರಂದೇ ಈ ಅಭಿಯಾನ ಆರಂಭಗೊಂಡಿದ್ದು, ಫೆ. 15ರ ವರೆಗೆ ನಡೆಯಲಿದೆ. ಅಭಿಯಾನದ ಭಾಗವಾಗಿ ಕಾಲೇಜುಗಳಲ್ಲಿ ಬೀದಿ ನಾಟಕದ ಮೂಲಕ ಅರಿವು ಮೂಡಿಸಲಾಗುವುದು. ಯುವಜನ ಆಯೋಗ ರಚನೆಯಿಂದ ಯುವಕರಿಗೆ ಆಗುವ ಪ್ರಯೋಜನದ ಕುರಿತು ತಿಳಿವಳಿಕೆ ಮೂಡಿಸಲಾಗುತ್ತಿದೆ’ ಎಂದು ಮಾಹಿತಿ ಹಂಚಿಕೊಂಡರು.

‘ರಾಜ್ಯದಲ್ಲಿ ಪ್ರತಿಯೊಂದಕ್ಕೂ ಒಂದೊಂದು ಆಯೋಗವಿದೆ. ಆದರೆ, ದೊಡ್ಡ ಸಂಖ್ಯೆಯಲ್ಲಿರುವ ಯುವಜನಾಂಗದ ಅಹವಾಲು ಆಲಿಸಲು ಯಾವುದೇ ಆಯೋಗ ಇಲ್ಲ. ಅದು ರಚನೆಯಾಗಬೇಕು. ಅದು ಯುವಕರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ಒದಗಿಸಿಕೊಡುವ ಕೆಲಸ ಮಾಡಬೇಕು. ಈಗಾಗಲೇ ಇಂತಹದ್ದೊಂದು ಆಯೋಗ ಕೇರಳದಲ್ಲಿ ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸುತ್ತಿದೆ’ ಎಂದು ನಿದರ್ಶನ ನೀಡಿದರು.

ADVERTISEMENT

‘ನಮ್ಮ ಸಂಸ್ಥೆಯಿಂದಲೇ ನಾಟಕವನ್ನು ರಚಿಸಿ, ಅದನ್ನು ಪ್ರದರ್ಶಿಸಿ ಅರಿವು ಮೂಡಿಸಲಾಗುತ್ತಿದೆ. ನಮ್ಮ ಜತೆ ಕೈಜೋಡಿಸಿರುವ ಸಮಾನ ಮನಸ್ಕ ಸಂಸ್ಥೆಗಳು ಈ ನಿಟ್ಟಿನಲ್ಲಿ ಬೆಂಗಳೂರು, ತುಮಕೂರು, ಮಂಗಳೂರು, ಕೋಲಾರ, ಚಿತ್ರದುರ್ಗ, ಕಲಬುರ್ಗಿಯಲ್ಲಿ ಕೆಲಸ ನಿರ್ವಹಿಸುತ್ತಿವೆ’ ಎಂದು ತಿಳಿಸಿದರು.

‘ಜಿಲ್ಲೆಯ ಕಂಪ್ಲಿಯಲ್ಲಿ ಈಗಾಗಲೇ ಕಾರ್ಯಕ್ರಮ ಪೂರ್ಣಗೊಂಡಿದೆ. ಫೆ. 2ರಂದು ಸಂಡೂರಿನಲ್ಲಿ ಅಭಿಯಾನ ನಡೆಯಲಿದೆ. ನಂತರ ಹಂತ ಹಂತವಾಗಿ ಬೇರೆ ಊರುಗಳಲ್ಲಿ ಜರುಗಲಿದೆ. ಬೀದಿನಾಟಕದ ಜತೆಗೆ ಹಾಡು, ಚರ್ಚೆ, ಸಂವಾದ, ಕವನ ವಾಚನ ಕೂಡ ಇರಲಿದೆ. ಕೊನೆಯಲ್ಲಿ ಯುವಕ–ಯುವತಿಯರಿಂದ ಸಹಿ ಸಂಗ್ರಹಿಸಿ, ಫೆ. 18ಕ್ಕೆ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿ, ಆಯೋಗ ರಚಿಸುವಂತೆ ಕೋರಲಾಗುವುದು’ ಎಂದು ವಿವರಿಸಿದರು.

ಸಂಸ್ಥೆಯ ನೀಲಮ್ಮ, ಅಶ್ವಿನಿ, ವೆಂಕಟೇಶ, ರಾಧಿಕಾ, ಚಾಂದಿನಿ, ರವಿಕಿರಣ, ನೀಲಪ್ಪ, ಮಲ್ಲಿಕಾರ್ಜುನ, ಪ್ರತಾಪ, ಲಾವಣ್ಯ, ಸಲ್ಮಾ, ಸುನೀತಾ, ಶಿವು, ಸೊಹೆಲ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.