ADVERTISEMENT

ವಿಜಯನಗರ ಜಿಲ್ಲೆಗೆ ಆಗ್ರಹಿಸಿ ರಸ್ತೆತಡೆ

ರೆಡ್ಡಿ ಸಹೋದರರ ವಿರುದ್ಧ ಮೊಳಗಿದ ಧಿಕ್ಕಾರ; ಪ್ರತಿಭಟನಾಕಾರರು ವಶಕ್ಕೆ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2019, 13:15 IST
Last Updated 2 ಅಕ್ಟೋಬರ್ 2019, 13:15 IST
ವಿಜಯನಗರ ಜಿಲ್ಲಾ ಹೋರಾಟ ಸಮಿತಿ ಕಾರ್ಯಕರ್ತರು ಬುಧವಾರ ಬಳ್ಳಾರಿ–ಅಂಕೋಲ ಹೆದ್ದಾರಿ ಮೇಲೆ ರಸ್ತೆತಡೆ ಚಳವಳಿ ನಡೆಸಿದರು
ವಿಜಯನಗರ ಜಿಲ್ಲಾ ಹೋರಾಟ ಸಮಿತಿ ಕಾರ್ಯಕರ್ತರು ಬುಧವಾರ ಬಳ್ಳಾರಿ–ಅಂಕೋಲ ಹೆದ್ದಾರಿ ಮೇಲೆ ರಸ್ತೆತಡೆ ಚಳವಳಿ ನಡೆಸಿದರು   

ಹೊಸಪೇಟೆ: ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ನೂತನ ವಿಜಯನಗರ ಜಿಲ್ಲೆ ರಚಿಸಬೇಕೆಂದು ಆಗ್ರಹಿಸಿ ‘ವಿಜಯನಗರ ಜಿಲ್ಲಾ ಹೋರಾಟ ಸಮಿತಿ’ ಕಾರ್ಯಕರ್ತರು ಬುಧವಾರ ನಗರದ ಸಂಕ್ಲಾಪುರ ಬಳಿ ಬಳ್ಳಾರಿ–ಅಂಕೋಲ ರಾಷ್ಟ್ರೀಯ ಹೆದ್ದಾರಿ ಮೇಲೆ ರಸ್ತೆತಡೆ ಚಳವಳಿ ನಡೆಸಿದರು.

ನಗರದ ಟೌನ್‌ ರೀಡಿಂಗ್ ಬಳಿಯಿರುವ ಮಹಾತ್ಮ ಗಾಂಧಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಕಾರ್ಯಕರ್ತರು, ಬಳಿಕ ಹೆದ್ದಾರಿ ವರೆಗೆ ಜಾಥಾ ನಡೆಸಿದರು. ನಂತರ 15ರಿಂದ 20 ನಿಮಿಷಗಳ ವರೆಗೆ ರಸ್ತೆತಡೆ ನಡೆಸಿದರು.

‘ಆಗಲೇಬೇಕು.. ಆಗಲೇಬೇಕು.. ವಿಜಯನಗರ ಜಿಲ್ಲೆ ಆಗಲೇಬೇಕು’, ‘ವಿಜಯನಗರ ಜಿಲ್ಲೆಗೆ ವಿರೋಧಿಸುತ್ತಿರುವ ರೆಡ್ಡಿ ಸಹೋದರರಿಗೆ ಧಿಕ್ಕಾರ’, ‘ಹೋರಾಟ ಸಮಿತಿಗೆ ಜಯವಾಗಲಿ’ ಎಂದು ಘೋಷಣೆಗಳನ್ನು ಕೂಗಿದರು. ಬಳಿಕ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು, ಹೆದ್ದಾರಿಯನ್ನು ವಾಹನ ಸಂಚಾರಕ್ಕೆ ಮುಕ್ತಗೊಳಿಸಿದರು. ಬಹಳ ಕಡಿಮೆ ಅವಧಿಯಲ್ಲಿ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದರಿಂದ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಯಾವುದೇ ರೀತಿಯ ಸಮಸ್ಯೆ ಉಂಟಾಗಲಿಲ್ಲ.

ADVERTISEMENT

ಇದಕ್ಕೂ ಮುನ್ನ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಹೋರಾಟ ಸಮಿತಿ ಜಿಲ್ಲಾ ಸಂಚಾಲಕ ವೈ. ಯಮುನೇಶ್‌, ‘ವಿಜಯನಗರ ಜಿಲ್ಲೆ ಆಗಬೇಕೆಂಬುದು ಇತ್ತೀಚಿನ ಬೇಡಿಕೆಯಲ್ಲ. ಅದಕ್ಕಾಗಿ ದಶಕದಿಂದ ಹೋರಾಟ ನಡೆಸುತ್ತಿದ್ದೇವೆ. ಬಳ್ಳಾರಿ ಜಿಲ್ಲೆಯ ಎಲ್ಲಾ ಪಶ್ಚಿಮ ತಾಲ್ಲೂಕುಗಳು ವಿಜಯನಗರ ಜಿಲ್ಲೆ ಆಗಬೇಕು ಎನ್ನುವುದರ ಪರವಾಗಿವೆ. ಆದರೆ, ಶಾಸಕರಾದ ಜಿ. ಕರುಣಾಕರ ರೆಡ್ಡಿ, ಜಿ. ಸೋಮಶೇಖರ್‌ ರೆಡ್ಡಿ ಅದಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯಲ್ಲ. ಜನರ ಹಿತಾಸಕ್ತಿಗೆ ವಿರುದ್ಧವಾಗಿ ಅವರು ಕೊಟ್ಟಿರುವ ಹೇಳಿಕೆ ಖಂಡನಾರ್ಹ’ ಎಂದರು.

ಸಮಿತಿಯ ಮುಖಂಡರಾದ ಗುಜ್ಜಲ್‌ ನಾಗರಾಜ್‌, ನಿಂಬಗಲ್‌ ರಾಮಕೃಷ್ಣ, ಎಂ.ಸಿ. ವೀರಸ್ವಾಮಿ, ದುರುಗಪ್ಪ ಪೂಜಾರ, ಸ್ಲಂ ರಾಮಚಂದ್ರ, ಎನ್‌. ವೆಂಕಟೇಶ್‌, ಪಿ.ವಿ. ವೆಂಕಟೇಶ್‌, ತಾರಿಹಳ್ಳಿ ವೆಂಕಟೇಶ್‌, ಮೊಹಮ್ಮದ್‌ ಇಮಾಮ್‌ ನಿಯಾಜಿ, ವಿನಾಯಕ ಶೆಟ್ಟರ್‌, ಸಣ್ಣ ಮಾರೆಪ್ಪ, ರೋಫಿಯಾ, ಶಮಾ, ಸುಧಾ ಜೈನ್‌, ಗೀತಾ ತಿಮ್ಮಪ್ಪ, ತಿಮ್ಮಪ್ಪ ಯಾದವ್‌, ಅಬೂಬಕರ್‌, ಎಸ್‌. ಗಾಳೆಪ್ಪ, ಚಿದಾನಂದಪ್ಪ, ಮೊಹಮ್ಮದ್‌ ಗೌಸ್‌, ಅನೂಪ್, ಬಿ. ಮಾರೆಣ್ಣ, ಎಚ್‌.ಎಸ್‌. ವೆಂಕಪ್ಪ, ಯರ್ರಿಸ್ವಾಮಿ, ಮೀರ್‌ ಜಾಫರ್‌, ವಿ.ಟಿ. ಮಂಜುನಾಥ, ಮಧುರಚೆನ್ನ ಶಾಸ್ತ್ರಿ, ಜೆ.ಎನ್. ಕಾಳಿದಾಸ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.