ADVERTISEMENT

ಅಮೃತ ಜ್ಯೋತಿ ಯೋಜನೆ ವಿಸ್ತರಣೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2022, 13:43 IST
Last Updated 25 ನವೆಂಬರ್ 2022, 13:43 IST
ವಿಜಯನಗರ ನಾಗರಿಕ ವೇದಿಕೆ, ಹಿಂದುಳಿದ ವರ್ಗಗಳ ಒಕ್ಕೂಟ, ಗಂಗಾಪರಮೇಶ್ವರಿ ಮಹಿಳಾ ಕ್ಷೇಮಾಭಿವೃದ್ಧಿ ಸಂಘದ ಕಾರ್ಯಕರ್ತರು ಶುಕ್ರವಾರ ಹೊಸಪೇಟೆ ತಹಶೀಲ್ದಾರ್‌ ಕಚೇರಿ ಎದುರು ಪ್ರತಿಭಟನೆ ನಡೆಸಿದರು–ಪ್ರಜಾವಾಣಿ ಚಿತ್ರ
ವಿಜಯನಗರ ನಾಗರಿಕ ವೇದಿಕೆ, ಹಿಂದುಳಿದ ವರ್ಗಗಳ ಒಕ್ಕೂಟ, ಗಂಗಾಪರಮೇಶ್ವರಿ ಮಹಿಳಾ ಕ್ಷೇಮಾಭಿವೃದ್ಧಿ ಸಂಘದ ಕಾರ್ಯಕರ್ತರು ಶುಕ್ರವಾರ ಹೊಸಪೇಟೆ ತಹಶೀಲ್ದಾರ್‌ ಕಚೇರಿ ಎದುರು ಪ್ರತಿಭಟನೆ ನಡೆಸಿದರು–ಪ್ರಜಾವಾಣಿ ಚಿತ್ರ   

ಹೊಸಪೇಟೆ (ವಿಜಯನಗರ): ‘ಅಮೃತ ಜ್ಯೋತಿ’ ಯೋಜನೆಯಡಿ ಪರಿಶಿಷ್ಟ ಜಾತಿ/ಪಂಗಡದವರಿಗೆ ನೀಡಲಾಗುತ್ತಿರುವ 75 ಯೂನಿಟ್‌ ವರೆಗಿನ ಉಚಿತ ವಿದ್ಯುತ್‌ ಅನ್ನು ಎಲ್ಲ ವರ್ಗದ ಬಡವರಿಗೆ ಅನ್ವಯಿಸುವಂತೆ ವಿಸ್ತರಿಸಬೇಕೆಂದು ಆಗ್ರಹಿಸಿ ವಿವಿಧ ಸಂಘಟನೆಗಳವರು ಶುಕ್ರವಾರ ನಗರದ ತಹಶೀಲ್ದಾರ್‌ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ವಿಜಯನಗರ ನಾಗರಿಕ ವೇದಿಕೆ, ಹಿಂದುಳಿದ ವರ್ಗಗಳ ಒಕ್ಕೂಟ, ಗಂಗಾಪರಮೇಶ್ವರಿ ಮಹಿಳಾ ಕ್ಷೇಮಾಭಿವೃದ್ಧಿ ಸಂಘದ ಕಾರ್ಯಕರ್ತರು ಪಾಲ್ಗೊಂಡಿದ್ದರು. ವೇದಿಕೆಯ ಅಧ್ಯಕ್ಷ ವೈ.ಯಮುನೇಶ್ ಮಾತನಾಡಿ, ಅಮೃತ ಜ್ಯೋತಿಯಂಥ ಯೋಜನೆ ಜಾರಿಗೆ ತರುವಾಗ ಜಾತಿಯನ್ನು ಮಾತ್ರ ಪರಿಗಣಿಸದೇ ಎಲ್ಲಾ ಜಾತಿ, ಧರ್ಮಗಳಲ್ಲಿರುವ ಜನರ ಬಡತನವನ್ನು ಮಾನದಂಡವಾಗಿಟ್ಟುಕೊಂಡು ಯೋಜನೆ ರೂಪಿಸಿದರೆ ಉತ್ತಮ ಎಂದು ಹೇಳಿದರು.

ಸರ್ಕಾರವು ಬಡತನ ನಿರ್ಮೂಲನೆ ಕಾನೂನು ರೂಪಿಸುವಾಗ ಕೇವಲ ಜಾತಿಯನ್ನು ಮಾತ್ರ ಪರಿಗಣಿಸದೇ ಜನರ ಆರ್ಥಿಕ ಸ್ಥಿತಿಗತಿಯನ್ನು ಪರಿಗಣಿಸಿ ವಿವಿಧ ಜಾತಿಗಳಲ್ಲಿರುವ ಬಿ.ಪಿ.ಎಲ್. ಕಾರ್ಡ್ ಹೊಂದಿದವರಿಗೆ ಸೌಲಭ್ಯ ದೊರೆಯುವಂತೆ ಕ್ರಮ ಕೈಗೊಳ್ಳಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಉಜ್ವಲ ಯೋಜನೆ, ಆವಾಸ್ ಯೋಜನೆ, ಉಚಿತ ಪಡಿತರ ಪೂರೈಕೆ, ವಿಧವಾ ವೇತನ ಮತ್ತು ಮುಂತಾದ ಸೌಲಭ್ಯಗಳನ್ನು ಎಲ್ಲಾ ಜಾತಿಗಳ ಬಿ.ಪಿ.ಎಲ್. ಪಡಿತರದಾರರಿಗೆ ನೀಡಲಾಗುತ್ತದೆ. ಅದೇ ರೀತಿ ಉಚಿತ ವಿದ್ಯುತ್‌ ಕೂಡ ಎಲ್ಲರಿಗೂ ವಿಸ್ತರಿಸಬೇಕೆಂದು ಒತ್ತಾಯಿಸಿದರು.

ADVERTISEMENT

ಮುಖಂಡರಾದ ಯು.ಆಂಜನೇಯಲು, ತಿಪ್ಪೇಸ್ವಾಮಿ, ಮಧುಸೂಧನ್, ಬಿ.ವಿರೂಪಾಕ್ಷಪ್ಪ, ರವಿಕುಮಾರ್, ಮಹಮ್ಮದ್ ಬಾಷ, ಶಿವಾನಂದ ಕಬ್ಬೇರ್, ಸುರೇಶ್, ಶಶಿಕಾಂತ್, ಮಡ್ಡಿರೇಣೇಶ್, ವೆಂಕಪ್ಪ ಯಾದವ್, ಗೋಪಾಲ್‍ರಾವ್, ಯು.ನೀಲಕಂಠ, ವೀರಣ್ಣ, ಗೋಪಿನಾಥ, ಆಶಾಬಾಯಿ, ನಾಗರತ್ನಮ್ಮ, ಸರ್ವಮಂಗಳ, ಆಶಾ ಜ್ಯೋತಿ, ಬಿ.ಉಮಾ, ಕೆಂಚಮ್ಮ, ಸರಸ್ವತಿ, ರಾಧಮ್ಮ, ಆಶಾ ಬಾನು, ಶಬೀನಾ, ರೆಹಮಾನ್‍ಬಿ, ಬಿ.ಲಕ್ಷ್ಮಿ, ಶಹೀನ್‍ಬೀ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.