ಹೊಸಪೇಟೆ: ಇಲ್ಲಿನ ವಿಜಯನಗರ ಕಾಲುವೆಗಳಿಗೆ ವರ್ಷವಿಡೀ ನೀರು ಹರಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ (ಕೋಡಿಹಳ್ಳಿ ಚಂದ್ರಶೇಖರ್ ಬಣ) ಹಾಗೂ ಕರ್ನಾಟಕ ಹಿಂದುಳಿದ ವರ್ಗಗಳ ಒಕ್ಕೂಟದ ಕಾರ್ಯಕರ್ತರು ಶುಕ್ರವಾರ ಇಲ್ಲಿ ಪ್ರತಿಭಟನೆ ನಡೆಸಿದರು.
ನಂತರ ತಹಶೀಲ್ದಾರ್ ಎಚ್. ವಿಶ್ವನಾಥ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
‘ವಿಜಯನಗರ ಕಾಲುವೆಗಳಿಗೆ 500 ವರ್ಷಗಳ ಇತಿಹಾಸವಿದೆ. ವಿಜಯನಗರ ಅರಸರ ಕಾಲದಲ್ಲಿ ನಿರ್ಮಾಣಗೊಂಡಿರುವ ಈ ಕಾಲುವೆಗಳಿಗೆ ಮೊದಲಿನಿಂದಲೂ ವರ್ಷವಿಡೀ ನೀರು ಹರಿಸಲಾಗುತ್ತದೆ. ಆದರೆ, ಇತ್ತೀಚಿನ ಕೆಲವು ವರ್ಷಗಳಿಂದ ವಿವಿಧ ಕಾರಣಗಳನ್ನು ನೀಡಿ ನೀರು ಹರಿಸುತ್ತಿಲ್ಲ. ಇದರಿಂದಾಗಿ ಕಾಲುವೆ ಭಾಗದ ರೈತರು ಸಮಸ್ಯೆ ಎದುರಿಸುತ್ತಿದ್ದಾರೆ’ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
‘ರೈತರು ಎದುರಿಸುತ್ತಿರುವ ಸಮಸ್ಯೆಯನ್ನು ಅರಿತು ವರ್ಷವಿಡೀ ನೀರು ಹರಿಸಬೇಕು. ಈ ಸಲ ಜಲಾಶಯಕ್ಕೆ ದಾಖಲೆ ಪ್ರಮಾಣದಲ್ಲಿ ನೀರು ಹರಿದು ಬಂದಿದೆ. ಸದ್ಯ 60 ಟಿ.ಎಂ.ಸಿ. ಅಡಿಗಿಂತಲೂ ಅಧಿಕ ನೀರಿನ ಸಂಗ್ರಹವಿದೆ. ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಯಾವುದೇ ರೀತಿಯ ಸಮಸ್ಯೆ ಎದುರಾಗುವುದಿಲ್ಲ. ಕೂಡಲೇ ಎರಡನೇ ಬೆಳೆಗೆ ನೀರು ಹರಿಸಬೇಕು’ ಎಂದು ಒತ್ತಾಯಿಸಿದ್ದಾರೆ.
ರೈತ ಸಂಘದ ರಾಜ್ಯ ಉಪಾಧ್ಯಕ್ಷ ಖಾಜಾ ಹುಸೇನ್ ನಿಯಾಜಿ, ಜಿಲ್ಲಾ ಉಪಾಧ್ಯಕ್ಷ ಎಂ. ದಾನೇಶ್, ತಾಲ್ಲೂಕು ಅಧ್ಯಕ್ಷ ಎಂ. ಜಡೆಪ್ಪ, ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷ ವೈ. ಯಮುನೇಶ್, ಪ್ರಧಾನ ಕಾರ್ಯದರ್ಶಿ ರವಿಶಂಕರ್ ದೇವರಮನೆ, ಮಲ್ಲಿಕಾರ್ಜುನ, ಜೆ.ಕೆ. ಜಹಿರುದ್ದೀನ್, ಕೆ. ಹನುಮಂತ ರೆಡ್ಡಿ, ಜೆ. ಕೊಟ್ರಪ್ಪ, ದುರ್ಗಪ್ಪ, ತಾಯಪ್ಪ, ಡಿ. ಚಂದ್ರಶೇಖರ್, ಸೋಮಣ್ಣ ಯಾದವ್, ಬಿ. ಹನುಮಂತಪ್ಪ, ಬಿಸಾಟಿ ಮೂರ್ತಿ, ಪ್ರಲ್ಹಾದ್ ಸ್ವಾಮಿ, ಕೆ. ಜಯಪ್ಪ, ಎಸ್. ತಿಪ್ಪೇಸ್ವಾಮಿ, ಸೋಮರೆಡ್ಡಿ, ಕೆ. ಮೂರ್ತಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.