ಸಂಡೂರು: ತಾಲ್ಲೂಕಿನ ಭುಜಂಗನಗರ, ನರಸಿಂಗಾಪುರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯ ತಗ್ಗು ಪ್ರದೇಶದಲ್ಲಿ ಮಳೆಯ ನೀರು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹಗೊಂಡು ಜನರ ಸಂಚಾರಕ್ಕೆ ತೊಂದರೆಯಾದ ಪರಿಣಾಮ ಸಾರ್ವಜನಿಕರೊಬ್ಬರು ನೀರಿನಲ್ಲಿ ಕುಳಿತು ಏಕಾಂಗಿಯಾಗಿ ಪ್ರತಿಭಟಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ರಸ್ತೆಯು ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮ(ಎನ್ಎಂಡಿಸಿ)ಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿದ್ದು, ನಿತ್ಯ ನೂರಾರು ವಾಹನಗಳು ಸಂಚರಿಸುತ್ತಿದ್ದು, ರಸ್ತೆಯ ತಗ್ಗು ಪ್ರದೇಶದಲ್ಲಿ ಮಳೆಯ ನೀರು ಸಂಗ್ರಹಗೊಂಡಿದ್ದರಿಂದ ಬೈಕ್ ಸೇರಿದಂತೆ ವಿವಿಧ ವಾಹನಗಳ ಸವಾರರು ಪ್ರಯಾಸಪಟ್ಟು ಸಂಚರಿಸುತ್ತಿದ್ದಾರೆ ನೂತನ ರಸ್ತೆ ಕಾಮಗಾರಿ ಹಮ್ಮಿಕೊಳ್ಳದ ಸಂಡೂರಿನ ಅಧಿಕಾರಿ, ಜನ ಪ್ರತಿನಿಧಿಗಳ ಆಕ್ರೋಶ ವ್ಯಕ್ತಪಡಿಸುವುದು ಸಾಮಾನ್ಯವಾಗಿದೆ.
ಸಣ್ಣ ಮಳೆ ಬಂದರೆ ಸಾಕು ಹದಗೆಟ್ಟ ರಸ್ತೆಯಲ್ಲಿ ಬಹಳಷ್ಟು ಪ್ರಮಾಣದ ನೀರು ನಿಲ್ಲುತ್ತಿದ್ದು, ವಿವಿಧ ವಾಹನಗಳ ಸವಾರರು ಈ ಸ್ಥಳದಲ್ಲಿ ಆಯತಪ್ಪಿ ಬಿದ್ದು ಗಾಯಗೊಂಡಿದ್ದಾರೆ. ಸಾರ್ವಜನಿಕರ ಸುಗಮ ಸಂಚಾರದ ದೃಷ್ಠಿಯಿಂದ ತಾಲ್ಲೂಕು ಆಡಳಿತವು ಶೀಘ್ರವಾಗಿ ನೂತನ ರಸ್ತೆಯನ್ನು ನಿರ್ಮಿಸಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.