ಹೊಸಪೇಟೆ: ಮಾನಸಿಕ ಖಿನ್ನತೆಗೆ ಒಳಗಾಗಿದ್ದ ವ್ಯಕ್ತಿಯೊಬ್ಬ ಚಲಿಸುವ ಬಸ್ಸಿನ ಚಕ್ರಕ್ಕೆ ತಲೆಕೊಟ್ಟು ಶುಕ್ರವಾರ ಜೀವ ತ್ಯಜಿಸಿದ್ದಾನೆ.
ತೋರಣಗಲ್ಲು ನಿವಾಸಿ ವೀರಾರೆಡ್ಡಿ (36) ಆತ್ಮಹತ್ಯೆಗೆ ಶರಣಾದವರು. ಎರಡು ವರ್ಷಗಳ ಹಿಂದೆ ಬ್ರೈನ್ಟ್ಯೂಮರ್ನಿಂದ ಇವರ ಪತ್ನಿ ನಿಧನ ಹೊಂದಿದ್ದರು. ಮೃತರಿಗೆ ಒಂದು ಗಂಡು ಮಗುವಿದೆ.
‘ಬೆಳಿಗ್ಗೆ ಚಿತ್ತವಾಡ್ಗಿ ಬಳಿ ರೈಲು ಹಳಿ ಮೇಲೆ ತಲೆ ಇಟ್ಟು ಜೀವ ಬಿಡಲು ವೀರಾರೆಡ್ಡಿ ಮುಂದಾಗಿದ್ದರು. ಅದನ್ನು ಗಮನಿಸಿದ ಸ್ಥಳೀಯ ಯುವಕರು, ಅವರ ಜೀವ ಉಳಿಸಿದ್ದರು. ಮಧ್ಯಾಹ್ನ ನಗರದ ರೋಟರಿ ವೃತ್ತದ ಸಿಗ್ನಲ್ ಬಳಿ ಬಸ್ ನಿಂತಿತ್ತು. ಸಿಗ್ನಲ್ ಬಿಟ್ಟ ನಂತರ ಬಸ್ ಹೊರಡಲು ಮುಂದಾದಾಗ, ಚಕ್ರದಡಿ ತಲೆ ಕೊಟ್ಟು ಜೀವ ಬಿಟ್ಟಿದ್ದಾನೆ’ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಈ ಸಂಬಂಧ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೆರವು:
ಹೊಸಪೇಟೆ: ತಾಲ್ಲೂಕಿನ ಹಂಪಿ ಪ್ರವಾಸಕ್ಕೆ ಬಂದಿದ್ದ 75 ವರ್ಷದ ಗೋವಿಂದರಾಜ್ ಅವರು ಶುಕ್ರವಾರ ವಿರೂಪಾಕ್ಷೇಶ್ವರ ದೇವಸ್ಥಾನದ ಆವರಣದಲ್ಲಿ ಪ್ರಜ್ಞೆ ತಪ್ಪಿ ಕುಸಿದು ಬಿದ್ದರು. ತಕ್ಷಣವೇ ಅದನ್ನು ಗಮನಿಸಿದ ಅಲ್ಲಿದ್ದ ಗೃಹರಕ್ಷಕ ದಳದ ಸಿಬ್ಬಂದಿ ಜಿ. ಗಂಗಾಧರ, ಬಿ. ಚಂದ್ರಶೇಖರ್ ಅವರು ಆಂಬ್ಯುಲೆನ್ಸ್ ಕರೆದು, ಅವರನ್ನು ಆಸ್ಪತ್ರೆಗೆ ಕಳುಹಿಸಿಕೊಟ್ಟರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.