ಹೊಸಪೇಟೆ (ವಿಜಯನಗರ): ‘ದೆಹಲಿ ಮಾದರಿಯಲ್ಲಿ ರಾಜ್ಯದಲ್ಲಿ ಸರ್ಕಾರಿ ಶಾಲೆಗಳಲ್ಲಿ ಅಗತ್ಯ ಮೂಲಸೌಕರ್ಯ ಕಲ್ಪಿಸಿ ಅಭಿವೃದ್ಧಿ ಪಡಿಸಿ’
ನಗರದ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ಬಿ.ಎಚ್. ಶಾರದಾ ಮೇಲಿನಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ತಾಕೀತು ಮಾಡಿ ಗಮನ ಸೆಳೆದಳು.
ಖಾಸಗಿ ಸುದ್ದಿವಾಹಿನಿಯು ಸಿ.ಎಂ. ಜತೆ ಏರ್ಪಡಿಸಿದ್ದ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಶಾರದಾ, ‘ದೆಹಲಿಯ ಶಾಲೆಗಳಲ್ಲಿ ಖಾಸಗಿ ಶಾಲೆಗಳಿಗಿಂತ ಉತ್ತಮ ಸೌಕರ್ಯ ಕಲ್ಪಿಸಲಾಗಿದೆ. ಅದೇ ರೀತಿ ನಮ್ಮ ರಾಜ್ಯದ ಎಲ್ಲ ಶಾಲೆಗಳನ್ನು ಅಭಿವೃದ್ಧಿ ಪಡಿಸಬೇಕು. ಎಲ್ಲ ಶಾಲೆಗಳಲ್ಲಿ ಎಫ್ಡಿಎ, ಎಸ್ಡಿಎ ಹುದ್ದೆಗಳನ್ನು ತುಂಬಬೇಕು. ಹೀಗೆ ಮಾಡಿದರೆ ಶಿಕ್ಷಕರ ಮೇಲಿನ ಹೆಚ್ಚಿನ ಭಾರ ಕಡಿಮೆಯಾಗುತ್ತದೆ. ಅವರು ಪೂರ್ಣ ಪ್ರಮಾಣದಲ್ಲಿ ಪಾಠದ ಕಡೆಗೆ ಲಕ್ಷ್ಯ ಕೊಡಲು ಸಾಧ್ಯವಾಗುತ್ತದೆ’ ಎಂದು ತಿಳಿಸಿದಳು.
‘ಪೋಷಕರು ಟಿ.ಸಿ ಕೇಳಿಕೊಂಡು, ಮಕ್ಕಳ ಪ್ರವೇಶಕ್ಕಾಗಿ ಶಾಲೆಗೆ ಬಂದರೆ ಶಿಕ್ಷಕರು ಪಾಠವನ್ನು ಮಧ್ಯದಲ್ಲಿಯೇ ಬಿಟ್ಟು ಹೋಗುತ್ತಾರೆ. ಇದು ಹೋಗಬೇಕು’ ಎಂದು ಮನವಿ ಮಾಡಿದಳು. ಅದಕ್ಕೆ ಸಿ.ಎಂ. ಸಕಾರಾತ್ಮಕವಾಗಿ ಸ್ಪಂದಿಸಿ, ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.