ಕೂಡ್ಲಿಗಿ: ಏನೇ ಟೀಕೆಗಳು ಬಂದರೂ ಅವುಗಳನ್ನು ಸ್ವೀಕಾರ ಮಾಡಿ ಜನರ ಸಮಸ್ಯೆಗಳ ಪರಿಹರಿಸಲಾಗುವುದು ಎಂದು ಶಾಸಕ ಡಾ. ಶ್ರೀನಿವಾಸ್ ಎನ್.ಟಿ. ಹೇಳಿದರು.
ತಾಲ್ಲೂಕಿನ ಚಿರತಗುಂಡು ಗ್ರಾಮದಲ್ಲಿ ಮಂಗಳವಾರ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯ್ತಿ ವತಿಯಿಂದ ಹಮ್ಮಿಕೊಂಡಿದ್ದ ಮನೆ ಮನೆ ನಮ್ಮ ಶಾಸಕರು, ಮನೆ ಬಾಗಿಲಿಗೆ ನಮ್ಮ ಸರ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿ ನಿತ್ಯ ಸಮಸ್ಯೆಗಳೊಂದಿಗೆ ಕ್ಷೇತ್ರದ ನೂರಾರು ಜನರು ಮನೆ ಬಳಿ ಬರುತ್ತಿದ್ದಾರೆ. ಆದರೆ, ಅಲ್ಲಿ ಎಲ್ಲರಿಗೂ ಸ್ಪಂದಿಸಲು ಸಾಧ್ಯವಾಗುತ್ತಿಲ್ಲ. ಇದಕ್ಕಾಗಿ ನಿಮ್ಮ ಬಳಿಯೇ ನಾವು ಬಂದು ನಿಮ್ಮ್ ಸಮಸ್ಯೆಗಳನ್ನು ಅಲಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಅನೇಕ ಕಡೆ ಕುಟುಂಬಗಳು ಬೇರೆ ಬೇರೆಯಾಗಿದ್ದು, ಅವರ ಜಮೀನುಗಳ ಪೋತಿ, ಪೋಡಿಯಾಗಿಲ್ಲ. ಇದರಿಂದ ಅವರಿಗೆ ಪಡಿತರ ಚೀಟಿ ಸೇರಿದಂತೆ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಅದ್ದರಿಂದ ಸಂಬಂಧಿಸಿದ ಅಧಿಕಾರಿಗಳು ಪೋತಿ ಹಾಗೂ ಪೋಡಿಗಳನ್ನು ಶೀಘ್ರವಾಗಿ ಮಾಡಿ ಕೊಡುವ ಮೂಲಕ ಅವರ ನೆರವಿಗೆ ಬರಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದೇ ಸಂದರ್ಭದಲ್ಲಿ ವಿವಿಧ ಫಲಾನುಭವಿಗಳಿಗೆ ಸ್ಥಳದಲ್ಲಿಯೇ ಪರಿಹಾರ ಹಾಗೂ ಮಂಜೂರತಿ ಪತ್ರ ವಿತರಣೆ ಮಾಡಲಾಯಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ರತ್ನಮ್ಮ, ಗುಡೇಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎನ್. ಕೃಷ್ಣ, ಎಸ್.ಡಿಎಂಸಿ ಅಧ್ಯಕ್ಷೆ ಮಲ್ಲಮ್ಮ, ತಹಶೀಲ್ದಾರ್ ವಿ.ಕೆ. ನೇತ್ರಾವತಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನರಸಪ್ಪ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್. ವೆಂಕಟೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಮೈಲೇಶ ಬೇವೂರು, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಎಸ್.ಪಿ. ಪ್ರದೀಪ್, ಸಿಪಿಐ ಪ್ರಲ್ಹಾದ್ ಆರ್ ಚೆನ್ನಗಿರಿ, ಮುಖಂಡರಾದ ಗೌಡ್ರು ಬೊಮ್ಮಯ್ಯ, ಕೆ.ಪಿ.ಪಾಲಯ್ಯ, ಪಾಲಯ್ಯ,ಎಕ್ಕೆಗೊಂದಿ ನಾಗರಾಜ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.