ಬಂಧನ (ಸಾಂದರ್ಭಿಕ ಚಿತ್ರ)
ಮರಿಯಮ್ಮನಹಳ್ಳಿ: ವಿಆರ್ಎಲ್ ಖಾಸಗಿ ಬಸ್ ಚಾಲಕನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಕತ್ತಿ (ತಲ್ವಾರ್) ತೋರಿಸಿ ಪ್ರಾಣ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಮಿನಿಲಾರಿಯ ಚಾಲಕನೊಬ್ಬನನ್ನು ಮಂಗಳವಾರ ಪಟ್ಟಣದ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲ್ಲೂಕಿನ ಕಲಕೇರಿ ಗ್ರಾಮದ ಯಮನೂರ ಹನುಮಂತಪ್ಪ ಕಡೆಮನಿ(21) ಬಂಧಿತ ಮಿನಿಲಾರಿ ಚಾಲಕ.
ಪ್ರಯಾಣಿಕರನ್ನು ಹೊತ್ತು ಬೆಂಗಳೂರಿನಿಂದ ರಾಯಚೂರಿಗೆ ಹೊರಟ್ಟಿದ್ದ ವಿಆರ್ಎಲ್ ಖಾಸಗಿ ಬಸ್ ಪಟ್ಟಣದ ಸಮೀಪದ ಚಿಲಕನಹಟ್ಟಿ ಬಳಿಯ ಜೈಹಿಂದ ಡಾಬಾ ಬಳಿಯ ರಾಷ್ಟ್ರೀಯ ಹೆದ್ದಾರಿ-50ರಲ್ಲಿ ಭಾನುವಾರ ಬೆಳಗಿನ ಜಾವಾ ಹಿಂದುಗಡೆಯಿಂದ ಬಂದ ಮಿನಿಲಾರಿಯ ಚಾಲಕ ಯಮನೂರ ಅಡ್ಡಹಾಕಿ ನಿಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಮಿನಿಲಾರಿ ಚಾಲಕ ಯಮನೂರ ಅವರು ಬಸ್ನ ಚಾಲಕ ದಾವಲ್ಸಾಬ್ ಅವರಿಗೆ, ಲಾರಿಯ ಸೈಡ್ ಮಿರರ್ಗೆ ಟಚ್ ಮಾಡಿಕೊಂಡು ಬಸ್ ನಿಲ್ಲಿಸದೇ ಹಾಗೇ ಬರುತ್ತಿದ್ದೀಯ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಬೈಯ್ದಿದ್ದಾನೆ. ಆಗ ಬಸ್ನ ಮತ್ತೊಬ್ಬ ಚಾಲಕ ಬಾವಾಸಾಬ್ ಬಂದು ಲಾರಿಯ ಚಾಲಕನನ್ನು ತಡೆಯಲು ಯತ್ನಿಸಿದ್ದಾರೆ. ಇಷ್ಟಕ್ಕೆ ನಿಲ್ಲದ ಯಮನೂರು ತನ್ನ ಬಳಿಯಿದ್ದ ಸುಮಾರು ಮೂರುವರೆ ಅಡಿ ಉದ್ದದ ಖಡ್ಗದಂತಿರುವ ಕತ್ತಿಯನ್ನು ತೆಗೆದುಕೊಂಡು ಬಂದು ಬೀಸಿ, ಅವರ ಮೇಲೆ ಹಲ್ಲೆಗೆ ಯತ್ನಿಸಿ ಪ್ರಾಣ ಬೆದರಿಕೆ ಒಡ್ಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.