ಕಂಪ್ಲಿ: ಇಡೀ ತೋಟಕ್ಕೆ ಪ್ಲಾಸ್ಟಿಕ್ ಬಲೆ (ನೆಟ್) ಹೊದಿಸಿ, ಗಿಳಿ ಹಿಂಡಿನಿಂದ ಹಣ್ಣುಗಳ ರಕ್ಷಣೆಗೆ ಇಲ್ಲಿನ ರೈತ ಎಂ. ಸುಧೀರ್ ವಿನೂತನ ಮಾರ್ಗ ಕಂಡುಕೊಂಡಿದ್ದಾರೆ.
ತಾಲ್ಲೂಕಿನ ಶಂಕರ್ ಸಿಂಗ್ ಕ್ಯಾಂಪಿನ ಸಮೀಪ ಏಳು ಎಕರೆ ಜಮೀನು ಹೊಂದಿರುವ ಸುಧೀರ್ ಅವರು, ಸಾವಯವ ಪದ್ಧತಿಯಲ್ಲಿ 2,200 ದಾಳಿಂಬೆ, 150 ಸಪೋಟಾ, 150 ನಿಂಬೆ ಹಾಗೂ 130 ಪೇರಲ ಗಿಡಗಳನ್ನು ಬೆಳೆಸಿದ್ದಾರೆ. ದಾಳಿಂಬೆ ಹಣ್ಣುಗಳಿಗೆ ಆಕರ್ಷಣೆಗೊಂಡು ಗಿಳಿ ಹಿಂಡು ತೋಟಕ್ಕೆ ಲಗ್ಗೆ ಇಡುತ್ತಿತ್ತು. ಇದರಿಂದ ಅಪಾರ ನಷ್ಟ ಉಂಟಾಗುತ್ತಿತ್ತು. ಇದರಿಂದ ಹೊರಬರಲು ₹ 1 ಲಕ್ಷ ವೆಚ್ಚದಲ್ಲಿ ಮೀನು ಹಿಡಿಯುವ ಪ್ಲಾಸ್ಟಿಕ್ ಬಲೆ ಖರೀದಿಸಿ, ಇಡೀ ತೋಟಕ್ಕೆ ಹಾಕಿದ್ದಾರೆ. ಅಳಿಲು ಮತ್ತು ಗಾಳಿಯಿಂದ ರಕ್ಷಿಸಲು ಹೊಲದ ಸುತ್ತ ಟಾರ್ಪಲಿನ್ ಹಾಕಿಸಿದ್ದಾರೆ. ಈಗ ಗಿಳಿಗಳ ಕಾಟ ತಪ್ಪಿದೆ.
‘ತೋಟದ ಸುತ್ತಲೂ ಇರುವ ತೆಂಗಿನಮರದಲ್ಲಿರುವ ಗೂಡಿನಲ್ಲಿ ನೂರಾರು ಗಿಳಿಗಳು ವಾಸವಾಗಿವೆ. ಜತೆಗೆ ಅಳಿಲುಗಳೂ ಇವೆ. ತೆಂಗಿನ ಗಿಡಗಳನ್ನು ತೆರವು ಮಾಡಿದರೆ ಗಿಳಿಗಳ ಕಾಟವೇ ಇರುವುದಿಲ್ಲ ಎಂದು ಕೆಲವರು ಸಲಹೆ ನೀಡಿದರು. ಆದರೆ, ತೆಂಗಿನ ಮರಗಳನ್ನು ಕಡಿಯುವುದು ನನಗೆ ಇಷ್ಟವಿರಲಿಲ್ಲ. ಅಂತಿಮವಾಗಿ ಬಲೆ ಹಾಕಿದೆ. ತೋಟವೂ ಉಳಿಯಿತು. ತೆಂಗಿನ ಮರಗಳು ಉಳಿದಿವೆ’ ಎಂದು ಸುಧೀರ್ ಹೇಳಿದರು.
‘ಹಣ್ಣಿನ ಗಿಡಗಳ ನಿರ್ವಹಣೆಗಾಗಿ ಈಗಾಗಲೇ ₹ 10ಲಕ್ಷ ವೆಚ್ಚ ಮಾಡಿದ್ದೇನೆ. 2017ರಲ್ಲಿ ಉತ್ತಮ ಇಳುವರಿ ಬಂದಿದೆ. ಈ ಬಾರಿಯೂ ಪ್ರತಿ ದಾಳಿಂಬೆ ಗಿಡ ಸರಾಸರಿ 30 ಕೆ.ಜಿ ಇಳುವರಿ ಹೊಂದಿದೆ. ಇಡೀ ತೋಟದಿಂದ ಈ ಬಾರಿ 60 ಟನ್ ಇಳುವರಿ ನಿರೀಕ್ಷಿಸಲಾಗಿದೆ. ಆದರೆ, ಮಾರುಕಟ್ಟೆಯಲ್ಲಿ ಸಗಟು ಧಾರಣೆ ಸಮರ್ಪಕವಾಗಿಲ್ಲದ ಕಾರಣ ನಷ್ಟದ ಹಾದಿ ತುಳಿಯುವಂತಾಗಿದೆ. ಸದ್ಯ ಮಾರುಕಟ್ಟೆಯಲ್ಲಿ ಕೆ.ಜಿ ದಾಳಿಂಬೆ ₹ 40 ಇದೆ. ಕನಿಷ್ಠ ₹ 60ರಿಂದ ₹ 70 ಇದ್ದಲ್ಲಿ ಲಾಭ ಉಂಟಾಗುತ್ತಿತ್ತು. ಆದರೆ, ಅವಧಿ ಮೀರಿದರೆ ಇನ್ನಷ್ಟು ನಷ್ಟ ಎದುರಾಗಲಿದೆ. ಸದ್ಯ ಮಾರುಕಟ್ಟೆ ದರಕ್ಕೆ ಮಾರಾಟ ಮಾಡುವುದು ಅನಿವಾರ್ಯ’ ಎಂದು ನೋವು ತೋಡಿಕೊಂಡರು.
ಸುಧೀರ್ ಅವರು ಪುರಸಭೆ ಅಧ್ಯಕ್ಷರಾಗಿದ್ದು, ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಆದರೆ, ಕೃಷಿ ಬಗ್ಗೆ ವಿಶೇಷ ಆಸ್ಥೆ ವಹಿಸಿ ಕೆಲಸ ಮಾಡುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.