ಹೊಸಪೇಟೆ: ಪತಂಜಲಿ ಯೋಗ ಸಮಿತಿಯಿಂದ ಭಾನುವಾರ ಸಂಜೆ ನಗರದಲ್ಲಿ ಸಮಾಜ ಸೇವಾ ಪ್ರಶಸ್ತಿ, ಗುರು ಪೂರ್ಣಿಮೆ, ಗಿಡಮೂಲಿಕೆ ದಿನ ಆಚರಿಸಲಾಯಿತು.
ಸಮಾಜ ಸೇವಕರಾದ ಕಟ್ಟಾ ಸುಬ್ರಮಣ್ಯ, ಅಹಮ್ಮದ್ ಕಡ್ಡಿರಾಂಪುರ, ಪ್ರಭಾಕರ ಶೆಟ್ಟಿ, ಸುಬ್ರಾಯ ಹೆಗಡೆ ಹಾಗೂ ಶಿವರಾಮಪ್ಪ ಗುಜ್ಜಲ ಅವರಿಗೆ ಸಮಾಜ ಸೇವಾ ಪ್ರಶಸ್ತಿಯನ್ನು ಪತಂಜಲಿ ಯೋಗ ಪೀಠದ ರಾಜ್ಯ ಪ್ರಭಾರಿ ಭವರಲಾಲ್ ಆರ್ಯ ಪ್ರದಾನ ಮಾಡಿದರು.
ಬಳಿಕ ಮಾತನಾಡಿದ ಆರ್ಯ, ‘ಮನುಷ್ಯನಿಗೆ ಬ್ಯಾಂಕ್ ಬ್ಯಾಲೆನ್ಸ ಹೆಚ್ಚಾದರೆ ಸಮಸ್ಯೆಗಳು ಕಾಡುತ್ತವೆ. ರೋಗ–ರುಜಿನಗಳು ಬರುತ್ತವೆ. ಅದೇ ಪುಣ್ಯದ ಬ್ಯಾಲೆನ್ಸ್ ಹೆಚ್ಚಾದರೆ ಸಮಾಜ ಆತನನ್ನು ಗೌರವಿಸುತ್ತದೆ. ಸತ್ತ ಮೇಲೆಯೂ ಆತನನ್ನು ಸ್ಮರಿಸುತ್ತದೆ’ ಎಂದರು.
‘ಯೋಗದಿಂದ ಶರೀರ, ಮನಸ್ಸು, ಅರಿವು ಸಂಪನ್ನಗೊಳ್ಳುವುದರ ಜೊತೆಗೆ ಮನುಷ್ಯನ ವ್ಯಕ್ತಿತ್ವ, ದಿನಚರಿ, ನಡವಳಿಕೆಗಳು ಸಹ ಬದಲಾಗುತ್ತವೆ. ಪ್ರಾಮಾಣಿಕತೆ, ಕಾಯಕನಿಷ್ಠೆ, ಏಕಾಗ್ರತೆ, ಪ್ರೀತಿ-ವಿಶ್ವಾಸ ನಂಬಿಕೆಗಳು ಜಾಗೃತಗೊಳ್ಳುತ್ತವೆ’ ಎಂದು ನುಡಿದರು.
ಅರಣ್ಯ ಕೃಷಿಕ ಎಚ್.ವಿ. ಸಜ್ಜನ, ಸಾವಯವ ಕೃಷಿಕ ಅನ್ನಪೂರ್ಣಮ್ಮ ಅವರಿಗೆ ಪತಂಜಲಿ ಕೃಷಿಕ ಸಮ್ಮಾನ ಮಾಡಲಾಯಿತು. ಉದ್ಯಮಿಭೂಪಾಳ ರಾಘವೇಂದ್ರ ಶೆಟ್ಟಿ, ಪತಂಜಲಿ ಯೋಗ ಸಮಿತಿಯ ಜಿಲ್ಲಾ ಪ್ರಭಾರಿ ಎಫ್.ಟಿ.ಹಳ್ಳಿಕೇರಿ, ಭಾರತ ಸ್ವಾಭಿಮಾನ ಜಿಲ್ಲಾ ಪ್ರಭಾರಿ ಬಾಲಚಂದಶರ್ಮಾ, ಮಹಿಳಾ ಪತಂಜಲಿ ಯೋಗ ಸಮಿತಿಯ ರಾಜ್ಯ ಸಹಪ್ರಭಾರಿ ದಾಕ್ಷಾಯಣಿ ಶಿವಕುಮಾರ, ಯುವ ಭಾರತ ಪ್ರಭಾರಿ ಕಿರಣಕುಮಾರ, ಕಿಸಾನ ಸೇವಾ ಸಮಿತಿಯ ಪ್ರಭಾರಿ ಕೃಷ್ಣ ನಾಯಕ, ಪೂಜಾ ಐಲಿ, ಜಯಶ್ರೀ ವೀರೇಶ, ಅಶೋಕ ಚಿತ್ರಗಾರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.