ಮರಿಯಮ್ಮನಹಳ್ಳಿ: ಎಲ್ಲಾ ಕಲೆಗಳ ತಾಯಿ ಬೇರು ಜಾನಪದ ಕಲೆಯಾಗಿದ್ದು, ಆ ಕಲೆಯನ್ನು ಉಳಿಸಿ ಬೆಳಸಿಕೊಂಡು ಹೋಗುವ ಮಹತ್ತರ ಜವಾಬ್ದಾರಿ ಇಂದಿನ ಯುವ ಪೀಳಿಗೆ ಮೇಲಿದೆ ಎಂದು ಹಿರಿಯ ಜಾನಪದ ಕಲಾವಿದೆ ಮಾತಾ ಬಿ.ಮಂಜಮ್ಮ ಜೋಗತಿ ಹೇಳಿದರು.
ಪಟ್ಟಣದ ದುರ್ಗಾದಾಸ್ ಕಲಾಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿಶೇಷ ಘಟಕ ಯೋಜನೆಯಡಿ ಶುಕ್ರವಾರ ಹಮ್ಮಿಕೊಂಡಿದ್ದ ‘ಹಾಡಿರೇ ರಾಗಗಳ-ತೂಗಿರೇ ದೀಪಗಳ’ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅಲ್ಲದೆ ಜಾನಪದ ಕಲೆಗಳಲ್ಲಿರುವಂತಹ ಸೋಬಾನೆ ಪದಗಳು, ತತ್ವ ಪದಗಳು, ಭಜನೆ ಪದಗಳು ಸೇರಿದಂತೆ ಹಲವಾರು ಜನಪದ ಕಲೆಗಳನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ನಿಟ್ಟಿನಲ್ಲಿ ಯುವಕರು ಅವುಗಳನ್ನು ಸಂಗ್ರಹಿಸಿ ದಾಖಲಿಸುವ ಕೆಲಸ ಮಾಡಬೇಕಿದೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ಧಲಿಂಗೇಶ ರಂಗಣ್ಣನವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿರಿಯ ರಂಗಕಲಾವಿದೆ ಕೆ.ನಾಗರತ್ನಮ್ಮ ಅಧ್ಯಕ್ಷತೆವಹಿಸಿದ್ದರು. ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯ ಕೆ.ಮಂಜುನಾಥ, ರಂಗ ನಿರ್ದೇಶಕ ಬಿ.ಎಂ.ಎಸ್.ಪ್ರಭು, ಎಚ್.ಮಂಜುನಾಥ, ಹಿರಿಯ ಬಯಲಾಟ ಕಲಾವಿದ ಕೆ.ರಾಮಚಂದ್ರಪ್ಪ, ಬಿ.ಎಂ.ಯೋಗೇಶ್, ಸರದಾರ ಉಪಸ್ಥಿತರಿದ್ದರು.
ಪ್ರೇಕ್ಷಕರ ಮನಸೂರೆಗೊಂಡ ಸಾಂಸ್ಕೃತಿಕ ಕಾರ್ಯಕ್ರಮ: ಆರಂಭದಲ್ಲಿ ಯಶೋಧ ಬಯಲುವದ್ದೀಗೆರೆ ತಂಡದವರು ಪ್ರಸ್ತುತ ಪಡೆಸಿದ ಶಾಸ್ತ್ರೀಯ ಸಂಗೀತ ಕೇಳುಗರ ಕಿವಿಯನ್ನು ಇಂಪಾಗಿಸಿದರೆ, ನಂತರ ರಾಮಾಂಜಿನಪ್ಪ ತಂಡದವರ ಭಜನೆ ಪದಗಳು, ವಟ್ಟಿ ರಾಮಪ್ಪ ತಂಡದವರು ಬಯಲಾಟ ಪದಗಳನ್ನು ಹಾಡಿ ರಂಜಿಸಿದರು.
ನಂತರ ಅಂಜಿನಮ್ಮ ತಂಡದವರು ಸೋಬಾನೆ ಪದಗಳು, ಎಚ್.ಕೆಂಚಪ್ಪ ತಂಡದವರು ಜನಪದ ಗಾಯನ, ಎಸ್.ಎಸ್.ಮನೋಜ್ಕುಮಾರ್ ತಂಡದವರು ಸುಗಮ ಸಂಗೀತ, ಬಿ.ಎಂ.ಯೋಗಿಶ ತಂಡದವರಿಂದ ಜಾನಪದ ಗೀತೆಗಳ ಗಾಯನ, ಸರದಾರ ತಂಡವರಿಂದ ರಂಗಗೀತೆಗಳು, ಹುಲಿಗೆಮ್ಮ ತಂಡದವರಿಂದ ಸೋಬಾನೆ ಪದಗಳನ್ನು ಹಾಡಿದರು.
ತಿರುಮಲೇಶ ತಂಡದವರು ಭಾವಗೀತೆಗಳನ್ನು ಹಾಡಿದರೆ, ಹನುಮಯ್ಯ ತಂಡದವರು ತತ್ವ ಪದಗಳು, ಮಹೇಶ ತಂಡದವರು ಭಜನೆ ಪದ ಹಾಗೂ ಬಸಮ್ಮ ತಂಡದವರು ಸೋಬಾನೆ ಪದಗಳನ್ನು ಹಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.