ಹೂವಿನಹಡಗಲಿ: ಪಟ್ಟಣದಲ್ಲಿ ಗಣೇಶ ಚತುರ್ಥಿ ಹಬ್ಬದ ಪೂಜಾ ಸಾಮಗ್ರಿಗಳ ಖರೀದಿ ಭರಾಟೆ ಜೋರಾಗಿದ್ದು, ಗ್ರಾಹಕರಿಗೆ ಹಣ್ಣು, ಹೂ ಬೆಲೆ ಏರಿಕೆಯ ಬಿಸಿ ತಟ್ಟಿದೆ.
ಶಾಸ್ತ್ರಿ ವೃತ್ತದಲ್ಲಿ ಬಾಳೆಕಂಬ, ಕಬ್ಬು, ತರೇವಾರಿ ಹೂ, ಹಣ್ಣುಗಳು ಮತ್ತು ಗಣಪತಿ ಮೂರ್ತಿಗಳ ಮಾರಾಟ ನಡೆದಿದೆ. ಮಾರುಕಟ್ಟೆಯಲ್ಲಿ ಹಬ್ಬದ ಸಾಮಗ್ರಿ ಬೆಲೆಗಳು ಏರಿಕೆಯಾಗಿರುವುದರಿಂದ ಗ್ರಾಹಕರು ಚೌಕಾಸಿಗಿಳಿದು ಖರೀದಿಸುವುದು ಕಂಡುಬಂತು.
ಹಬ್ಬದ ಪ್ರಯುಕ್ತ ಒಂದು ಮಾರು ಮಲ್ಲಿಗೆಗೆ ₹100 ವರೆಗೆ ಮಾರಾಟವಾಗುತ್ತಿದೆ. ಸೇವಂತಿಗೆ, ಚೆಂಡು ಹೂ, ಕನಕಾಂಬರ ಬೆಲೆಯೂ ಹೆಚ್ಚಳವಾಗಿದೆ. ಸೇಬುಹಣ್ಣು ಕೆಜಿಗೆ ₹150ರಿಂದ ₹200 ಗಳವರೆಗೆ ಮಾರಾಟವಾಗುತ್ತಿದೆ. ಸೇಬಿಗಿಂತ ದಾಳಿಂಬೆ ಬೆಲೆ ಹೆಚ್ಚಾಗಿದೆ. ಬಾಳೆ, ಕಿತ್ತಳೆ, ಪೇರಲೆ, ಸೀತಾಫಲ, ಸಪೋಟ, ದ್ರಾಕ್ಷಿ ಹಣ್ಣಿನ ಬೆಲೆ ಕೇಳೆ ಗ್ರಾಹಕರು ಅಚ್ಚರಿ ವ್ಯಕ್ತಪಡಿಸುತ್ತಾರೆ.
‘ಗಣೇಶನ ಹಬ್ಬ ಪ್ರಯುಕ್ತ ಮಾರುಕಟ್ಟೆಯಲ್ಲಿ ಪೂಜಾ ಸಾಮಗ್ರಿಗಳ ಬೆಲೆ ಹೆಚ್ಚಳವಾಗಿದೆ. ಖರೀದಿಸುವವರಿಲ್ಲದೇ ಮಾರುಕಟ್ಟೆ ನೀರಸವಾಗಿದ್ದರೂ ಬೆಲೆಗಳು ಹೆಚ್ಚಾಗಿವೆ. ಖರೀದಿ ಪ್ರಮಾಣ ಕಡಿಮೆಗೊಳಿಸಿಯಾದರೂ ಹಬ್ಬ ಮಾಡುವುದು ಆನಿವಾರ್ಯವಾಗಿದೆ’ ಎಂದು ಹೊಳಗುಂದಿಯ ದೇವರಮನಿ ವೀರೇಶ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.