ADVERTISEMENT

ಸರ್ಕಾರದಿಂದ ಸೇಡಿನ ರಾಜಕಾರಣ

ಅನುದಾನ ನೀಡದೆ ಪಕ್ಷಪಾತ: ಪರಮೇಶ್ವರನಾಯ್ಕ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2021, 6:28 IST
Last Updated 13 ಸೆಪ್ಟೆಂಬರ್ 2021, 6:28 IST
ಹೂವಿನಹಡಗಲಿ ತಾಲ್ಲೂಕು ಹಿರೇಮಲ್ಲನಕೆರೆಯಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಗೋದಾಮು ನಿರ್ಮಾಣಕ್ಕೆ ಶಾಸಕ ಪಿ.ಟಿ. ಪರಮೇಶ್ವರನಾಯ್ಕ ಶಿಲಾನ್ಯಾಸ ನೆರವೇರಿಸಿದರು
ಹೂವಿನಹಡಗಲಿ ತಾಲ್ಲೂಕು ಹಿರೇಮಲ್ಲನಕೆರೆಯಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಗೋದಾಮು ನಿರ್ಮಾಣಕ್ಕೆ ಶಾಸಕ ಪಿ.ಟಿ. ಪರಮೇಶ್ವರನಾಯ್ಕ ಶಿಲಾನ್ಯಾಸ ನೆರವೇರಿಸಿದರು   

ಹೂವಿನಹಡಗಲಿ: ಕಾಂಗ್ರೆಸ್ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳಿಗೆ ಅನುದಾನ ನೀಡದೇ ಸರ್ಕಾರ ಸೇಡಿನ ರಾಜಕಾರಣ ಮಾಡುತ್ತಿದೆ ಎಂದು ಶಾಸಕ ಪಿ.ಟಿ. ಪರಮೇಶ್ವರನಾಯ್ಕ ಆರೋಪಿಸಿದರು.

ತಾಲ್ಲೂಕಿನ ಹಿರೇಮಲ್ಲನಕೆರೆ ಗ್ರಾಮದಲ್ಲಿ ಶನಿವಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ₹ 40 ಲಕ್ಷ ವೆಚ್ಚದ ಗೋದಾಮು ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಎರಡು ವರ್ಷದಿಂದ ಕೆಕೆಆರ್‌ಡಿಬಿ ಹಾಗೂ ಜಿಲ್ಲಾ ಖನಿಜ ಪ್ರತಿಷ್ಠಾನ ಅನುದಾನ ಹೊರತುಪಡಿಸಿ ಕ್ಷೇತ್ರಕ್ಕೆ ಯಾವ ಅನುದಾನವೂ ಬಂದಿಲ್ಲ. ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ಸರ್ಕಾರ ಉದ್ದೇಶಪೂರ್ವವಾಗಿ ಅನುದಾನ ನೀಡುತ್ತಿಲ್ಲ. ಅಭಿವೃದ್ಧಿಯಲ್ಲಿ ಪಕ್ಷಪಾತ ಮಾಡುತ್ತಿರುವ ಬಿಜೆಪಿಯವರಿಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು ಎಂದು ಹೇಳಿದರು.

ADVERTISEMENT

‘ರೈತಪರ ಎಂದು ಹೇಳುತ್ತಲೇ ಕೇಂದ್ರ, ರಾಜ್ಯ ಸರ್ಕಾರಗಳು ರೈತರನ್ನು ಶೋಷಣೆ ಮಾಡುತ್ತಿವೆ. ಸಕಾಲದಲ್ಲಿ ಬೀಜ, ಗೊಬ್ಬರ ನೀಡದೇ ಅಲೆದಾಡುವಂತೆ ಮಾಡಿವೆ. ಕೃಷಿ ಉತ್ಪನ್ನಗಳ ಬೆಲೆ ಕುಸಿದಿದ್ದರೆ, ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ರೈತರು, ಬಡವರ ಸ್ಥಿತಿಯನ್ನು ಸರ್ಕಾರ ಶೋಚನೀಯವಾಗಿಸಿದೆ ಎಂದು ಟೀಕಿಸಿದರು.

ಇಲ್ಲಿನ ಸಹಕಾರ ಸಂಘವು ₹ 18 ಕೋಟಿ ಕೃಷಿ ಸಾಲ ನೀಡಿ ರೈತರಿಗೆ ನೆರವಾಗಿದೆ. ರೈತರು ಸಕಾಲದಲ್ಲಿ ಸಾಲ ಮರುಪಾವತಿಸಿ ಸಹಕಾರಿಯ ಬೆಳವಣಿಗೆಗೆ ಸಹಕರಿಸಬೇಕು. ಹಿರೇಮಲ್ಲನಕೆರೆ ಮತ್ತು ಮೋರಿಗೇರಿಯಲ್ಲಿ ವಾಲ್ಮೀಕಿ ಭವನ ನಿರ್ಮಾಣಕ್ಕೆ ತಲಾ ₹ 50 ಲಕ್ಷ ಮಂಜೂರಾಗಿದೆ ಎಂದು ತಿಳಿಸಿದರು.

ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಹನುಮಂತಪ್ಪ ಮಾತನಾಡಿ, ಸಹಕಾರಿ ಸ್ಥಾಪನೆಯಾಗಿ ನಾಲ್ಕು ದಶಕ ಕಳೆದರೂ ಒಮ್ಮೆಯೂ ಚುನಾವಣೆ ನಡೆದಿಲ್ಲ. ಅವಿರೋಧ ಆಯ್ಕೆ ಮೂಲಕ ಸದಸ್ಯರು ಸಹಕಾರಿಯ ಅಭಿವೃದ್ಧಿಗೆ ಶ್ರಮಿಸಿದ್ದಾರೆ ಎಂದು ಹೇಳಿದರು.

ಸಹಕಾರಿಯ ಅಧ್ಯಕ್ಷ ಎಂ.ದಿವಾಕರ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಅಧ್ಯಕ್ಷ ವಾರದ ಗೌಸ್ ಮೊಹಿದ್ದೀನ್, ಗ್ರಾ.ಪಂ. ಅಧ್ಯಕ್ಷರಾದ ಶಿವಾನಂದ, ವನಜಾಕ್ಷಮ್ಮ, ಖೇಮಣಿಬಾಯಿ, ಮುಖಂಡರಾದ ಅಟವಾಳಗಿ ಕೊಟ್ರೇಶ, ಎಲ್.ಚಂದ್ರನಾಯ್ಕ, ಜಿ.ವಸಂತ, ಬೀರಪ್ಪ, ಸಹಕಾರಿಯ ಮುಖ್ಯ ಕಾರ್ಯನಿರ್ವಾಹಕ ರಾಮಣ್ಣ, ಭರಮಲಿಂಗಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.