ಬಳ್ಳಾರಿ: ಪ್ರತಿ ವರ್ಷದಂತೆ ಈ ವರ್ಷವೂ ಹಂಪಿ ಉತ್ಸವವನ್ನು ಅದ್ಧೂರಿಯಾಗಿ ಮಾಡಲೇಬೇಕು. ಸರ್ಕಾರದ ಬಳಿ ಹಣವಿಲ್ಲದಿದ್ದರೆ ನಾವುಜಿಲ್ಲೆಯಾದ್ಯಂತ ಭಿಕ್ಷೆ ಬೇಡಿ ನೀಡುತ್ತೇವೆ ಎಂದು ಶಾಸಕ ಸೋಮಶೇಖರ ರೆಡ್ಡಿ ಹೇಳಿದರು.
ಸರ್ಕಾರ ಹಂಪಿ ಉತ್ಸವ ರದ್ದು ಮಾಡಿರುವುದು ಖಂಡನೀಯ. ಬರಗಾಲವಿದ್ದರೂ ಮೈಸೂರು ದಸರಾ ಉತ್ಸವವನ್ನು ವಿಜೃಂಭಣೆಯಿಂದ ಮಾಡಿ, ಹಂಪಿ ಉತ್ಸವ ಬಿಟ್ಟರೆ ಹೇಗೆ? ಉತ್ಸದ ಪರವಾಗಿ ಜಿಲ್ಲೆಯ ಎಲ್ಲಾ ಶಾಸಕರು ಒಕ್ಕೊರಲಿನಿಂದ ಧ್ವನಿ ಎತ್ತಬೇಕಿದೆ ಎಂದು ಭಾನುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಕಾಂಗ್ರೆಸ್ನಆರು ಶಾಸಕರಿದ್ದರೂ ಈ ಬಗ್ಗೆ ಧ್ವನಿ ಎತ್ತದಿರವುದು ಖೇದಕರ.ಲೋಕಸಭಾ ಉಪಚುನಾವಣೆಯಲ್ಲಿ ಗೆದ್ದ ಕಾಂಗ್ರೆಸ್ ಕೃತಜ್ಞತಾ ಸಮಾವೇಶಕ್ಕೆ ಕೋಟಿ-ಕೋಟಿ ಖರ್ಚು ಮಾಡಿದ್ದಾರೆ. ಉತ್ಸವ ಮಾಡಲು ಅಗುವುದಿಲ್ಲವೇ? ವಿಶ್ವ ಪಾರಂಪರಿಕ ತಾಣಕ್ಕೆ ಗೌರವ ಕೊಟ್ಟು ವಿಜೃಂಭಣೆಯಿಂದ ಆಚರಿಸಬೇಕು ಎಂದು ಆಗ್ರಹಿಸಿದರು.
ಸರಳವಾಗಿ ಉತ್ಸವವನ್ನು ಆಚರಿಸುವುದಾದರೆ ಬೇಡ ಎಂದು ಹೇಳಿದರು.
ಇದನ್ನೂ ಓದಿ:ಸರಳ ಹಂಪಿ ಉತ್ಸವ ಅಗತ್ಯ: ಉಗ್ರಪ್ಪ
ಬರಗಾಲದ ಸಮಯದಲ್ಲೇ ರಾಜ್ಯದ ಬೇರೆ ಬೇರೆ ಉತ್ಸವಗಳನ್ನು ಆಚರಿಸುತ್ತಾರೆ. ಹಂಪಿ ಉತ್ಸವಕ್ಕೆಆದಾಯದ ಸಮಸ್ಯೆಯಲ್ಲ ಆಸಕ್ತಿಯ ಸಮಸ್ಯೆ ಇದೆ. ಪ್ರವಾಸಿಗರಿಂದ ಮತ್ತು ಇತರೆ ಮೂಲಗಳಿಂದ ಆದಾಯ ಬರಲಿದೆ ಎಂದರು.
ಬಿಜೆಪಿ ಬರ ಅಧ್ಯಯನ ತಂಡ ನಾಳೆ ಜಿಲ್ಲೆಗೆ: ಜಿಲ್ಲೆಯ ಬರ ಪರಿಸ್ಥಿತಿ ಅಧ್ಯಯನ ಮಾಡಲು ಬಿಜೆಪಿಯ ಜಗದೀಶ್ ಶೆಟ್ಡರ್, ಸುರೇಶ್ ಅಂಗಡಿ, ಕರಡಿ ಸಂಗಣ್ಣ, ಹಾಲಪ್ಪ ಆಚಾರ್ ಒಳಗೊಂಡ ತಂಡ ಜಿಲ್ಲೆಗೆ ನ.04ರಂದು ಬರಲಿದ್ದಾರೆಎಂದು ತಿಳಿಸಿದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಚೆನ್ನಬಸವನ ಗೌಡ ಮಾತನಾಡಿ, ಹಲವಾರು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ವಿಶ್ವವಿಖ್ಯಾತ ಹಂಪಿ ಉತ್ಸವವನ್ನು ಬರದ ಕಾರಣ ಕೊಟ್ಟು ಜಿಲ್ಲಾ ಉಸ್ತುವಾರಿ ಸಚಿವ ಡಿಕೆಶಿ ರದ್ದು ಘೋಷಿಸಿರುವುದು ನೋವಿನ ಸಂಗತಿ ಎಂದರು.
ಬರಗಾಲ ಜಿಲ್ಲೆಗೆ ಮಾತ್ರ ಬಂದಿಲ್ಲ. ರಾಜ್ಯದ 100 ತಾಲ್ಲೂಕುಗಳಲ್ಲಿ ಬರ ಬಂದಿದೆ. ರಾಜ್ಯದ ಎಲ್ಲಾ ಉತ್ಸವಗಳು, ಜಯಂತಿಗಳು ಸರಾಗವಾಗಿ ನಡೆಯುತ್ತಿವೆ. ಜನರಿಗೆ ಬೇಡವಾದ ಜಯಂತಿಗಳನ್ನು ಸರ್ಕಾರ ಒತ್ತಾಯವಾಗಿ ಮಾಡುತ್ತಿದೆ. ಅವುಗಳನ್ನು ಮಾಡಲು ಬರ ಅಡ್ಡಿ ಬರಲಿಲ್ಲ. ಜಿಲ್ಲೆಯ ಹಂಪಿ ಉತ್ಸವಕ್ಕೆ ಮಾತ್ರ ಅಡ್ಡಿ ಬಂದಿದೆ ಎಂದು ಆಕ್ಷೇಪಿಸಿದರು.
ಉತ್ಸವಕ್ಕಾಗಿ ಹೋರಾಡುತ್ತಿರುವ ಕಲಾವಿದರಿಗೆ ಸಹಕಾರ ಕೊಟ್ಟು ಮುಂದೆ ಜಿಲ್ಲೆಯಾದ್ಯಂತ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಮುಖಂಡರಾದ ಶ್ರೀನಿವಾಸ್ ಪಾಟೀಲ್, ಜಿ.ವಿರೂಪಾಕ್ಷಗೌಡ, ಮುರಾರಿ ಗೌಡ, ಕೆ.ಎ.ರಾಮಲಿಂಪ್ಪ, ಮಲ್ಲನಗೌಡ, ವೀರಶೇಖರರೆಡ್ಡಿ, ಜಡೇಗೌಡ, ಮೋತ್ಕರ್ ಶ್ರೀನಿವಾಸ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.