ಹೊಸಪೇಟೆ: ‘ಹಸ್ರಪ್ರತಿಗಳು ಚರಿತ್ರೆ ಅರ್ಥೈಸಿಕೊಳ್ಳಲು ಇರುವ ಮಹತ್ವದ ಆಕರಗಳು’ ಎಂದು ಹಿರಿಯ ಸಾಹಿತಿ ಗುರುಮೂರ್ತಿ ಪೆಂಡಕೂರು ತಿಳಿಸಿದರು.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಹಭಾಗಿತ್ವದಲ್ಲಿ ಬುಧವಾರ ನಗರದ ವಿಜಯನಗರ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ 19ನೇ ಹಸ್ತಪ್ರತಿ ತರಬೇತಿ ಮತ್ತು ಜಾಗೃತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
‘ಹಸ್ತಪ್ರತಿಗಳು ಭೂತಕಾಲದ ಮೌಲ್ಯ ಸರ್ವಕಾಲಕ್ಕೂ ಪ್ರಸ್ತುತಪಡಿಸುವ ಬಹುಮುಖ್ಯವಾದ ಆಕರಗಳು. ಮನುಷ್ಯನ ಅಲಕ್ಷತನ, ಅಜಾಗರೂಕತೆ, ಹೊಣೆಗೇಡಿತನವನ್ನು ಇವುಗಳ ಸಹಾಯದಿಂದ ಅರಿಯಲು ಸಾಧ್ಯವಾಗಿದೆ. ಫ.ಗು. ಹಳಕಟ್ಟಿ, ಉತ್ತಂಗಿ ಚನ್ನಪ್ಪರಂತಹವರು ಹಸ್ತಪ್ರತಿಗಳ ಸಂಗ್ರಹ ಮತ್ತು ಸಂಶೋಧನೆಗಳ ಮೂಲಕ ಮಾಡಿದ ಸೇವೆ ಮಹತ್ವದ ಶೋಧವಾಗಿದೆ’ ಎಂದರು.
ಕನ್ನಡ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಎ.ಸುಬ್ಬಣ್ಣ ರೈ ಮಾತನಾಡಿ, ‘ಕನ್ನಡ ವಿಶ್ವವಿದ್ಯಾಲಯವು ನಾಡಿನ ಸಾಂಸ್ಕೃತಿಕ ಪರಂಪರೆ ಸಂರಕ್ಷಿಸಲು ಹಲವು ಯೋಜನೆಗಳನ್ನು ರೂಪಿಸಿದೆ. ಅದರಲ್ಲಿ ಹಸ್ತಪ್ರತಿಗಳ ಅಧ್ಯಯನವೂ ಒಂದು. ಹಸ್ತಪ್ರತಿಶಾಸ್ತ್ರ ವಿಭಾಗ ಮಾಡುವ ಕೆಲಸ ನಾಡಿನ ಗಮನ ಸೆಳೆದಿದೆ’ ಎಂದು ಹೇಳಿದರು.
ಹಸ್ತಪ್ರತಿ ತರಬೇತಿ ಮತ್ತು ಜಾಗೃತಿ ಶಿಬಿರದ ನಿರ್ದೇಶಕ ಕೆ. ರವೀಂದ್ರನಾಥ, ‘ಹಸ್ತಪ್ರತಿಗಳು ರಾಷ್ಟ್ರೀಯ ಸಂಪತ್ತು. ಏಕೆಂದರೆ ಅವುಗಳಲ್ಲಿ ನಾಡಿನ ಮೌಲ್ಯಗಳು ಅಡಗಿವೆ’ ಎಂದರು.
ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಸಾಲಿ ಸಿದ್ದಯ್ಯ ಮಾತನಾಡಿ, ‘ನಮ್ಮ ಪೂರ್ವಿಕರು ನೀಡಿದ್ದ ಸಾಹಿತ್ಯಿಕ ಕೊಡುಗೆಗಳು ಹಸ್ತಪ್ರತಿಗಳ ಮೂಲಕ ನಮಗೆ ಸಿಕ್ಕಿವೆ. ಸಂಶೋಧಕರು ಅವನ್ನು ಹೆಕ್ಕಿ ನಮಗೆ ಅಧ್ಯಯನಕ್ಕೆ ನೀಡಿದ್ದಾರೆ. ಅವುಗಳನ್ನು ನಾವ ಜತನದಿಂದ ಸಂರಕ್ಷಿಸಿ, ಮುಂದಿನ ಪೀಳಿಗೆಗೆ ತಲುಪಿಸಬೇಕು’ ಎಂದು ಹೇಳಿದರು.
ಪ್ರಾಧ್ಯಾಪಕ ಮೃತ್ಯುಂಜಯ ರುಮಾಲೆ, ಹಸ್ತಪ್ರತಿ ವಿಭಾಗದ ಮುಖ್ಯಸ್ಥ ಎಫ್.ಟಿ. ಹಳ್ಳಿಕೇರಿ, ಪ್ರಾಚಾರ್ಯ ವಿ.ಎಸ್. ಪ್ರಭಯ್ಯ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.