ಸಂಡೂರು ತಾಲ್ಲೂಕಿನ ಯಶವಂತನಗರ ಗ್ರಾಮದಲ್ಲಿ ಮಂಗಳವಾರ ಸಂಜೆ ಭಾರಿ ಮಳೆ ಸುರಿದಿದ್ದರಿಂದ ರೈಲ್ವೆ ಸೇತುವೆಯ ಕೆಳ ಭಾಗದಲ್ಲಿ ಆಪಾರ ಪ್ರಮಾಣದಲ್ಲಿ ಮಳೆಯ ನೀರು ಸಂಗ್ರಹಗೊಂಡಿರುವುದು
ಸಂಡೂರು: ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಮಂಗಳವಾರ ಸಂಜೆ ಗುಡುಗು ಸಿಡಿಲು ಸಹಿತ ಉತ್ತಮ ಮಳೆ ಸುರಿದಿದೆ.
ಯಶವಂತನಗರ ಗ್ರಾಮದಲ್ಲಿ ಸುರಿದ ಭಾರಿ ಮಳೆಗೆ ಸಂಚಾರ ಅಸ್ತವ್ಯಸ್ತವಾಯಿತು. ಸಂಡೂರು, ತೋರಣಗಲ್ಲು ಹೋಬಳಿಯ ಹಳ್ಳಿಗಳಲ್ಲಿ ಉತ್ತಮ ಮಳೆ ಸುರಿಯಿತು. ಚೋರುನೂರು ಹೋಬಳಿಯ ಗ್ರಾಮಗಳಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಭಾರಿ ಮಳೆ ಸುರಿದಿದ್ದರಿಂದ ಯಶವಂತನಗರದ ಹಳ್ಳವು ತುಂಬಿ ಹರಿಯಿತು. ಯಶವಂತನಗರ ಗ್ರಾಮದಲ್ಲಿ ಭಾರಿ ಮಳೆಗೆ ರೈಲ್ವೆ ಮೇಲ್ಮಟ್ಟದ ಸೇತುವೆಯ ಕೆಳ ಭಾಗದಲ್ಲಿ ಮಳೆಯ ನೀರು ಭಾರಿ ಪ್ರಮಾಣದಲ್ಲಿ ಸಂಗ್ರಹಗೊಂಡಿದ್ದರಿಂದ ಸಾರಿಗೆ ಬಸ್ ಸೇರಿದಂತೆ ವಿವಿಧ ವಾಹನಗಳ ಸವಾರರು ಎರಡು ತಾಸುಗಳ ಕಾಲ ಪರದಾಡಿದರು. ಸೇತುವೆಯ ಕೆಳ ಭಾಗದಲ್ಲಿ ಆಪಾರ ಪ್ರಮಾಣದ ಹಳ್ಳದ ನೀರು ಸಂಗ್ರಹಗೊಂಡಿವೆ. ಬಸ್ ಮಳೆಯ ನೀರಿನಲ್ಲಿ ಸಿಲುಕಿ ಕೆಟ್ಟು ನಿಂತಿದ್ದರಿಂದ ಎರಡು ತಾಸು ಕಾಲ ಟ್ರಾಫಿಕ್ ಜಾಮ್ ಉಂಟಾಯಿತು.
ಯಶವಂತನಗರ ಗ್ರಾಮದಿಂದ ಸಂಡೂರು ಪಟ್ಟಣದವರೆಗೂ ವಿವಿಧ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಸಾಧನಾ ಸಮಾವೇಶಕ್ಕೆ ತೆರಳಿದ ವಾಹನಗಳು ಸಹ ಟ್ರಾಫಿಕ್ ಜಾಮ್ನಲ್ಲಿ ಸಿಲುಕಿದ್ದರಿಂದ ದೂರದ ಗ್ರಾಮಗಳಿಗೆ ತೆರಳುವ ಸಾರ್ವಜನಿಕರು ಕೆಲ ಗಂಟೆಗಳ ಕಾಲ ಪರದಾಡಿದರು.
ಸಾರ್ವಜನಿಕ ಸಹಕಾರದಿಂದ ಟ್ರಾಫಿಕ್ ಜಾಮ್ ನಿವಾರಣೆಯಾಯಿತು ನಂತರ ವಾಹನಗಳು ನಿಧಾನವಾಗಿ ಸೇತುವೆಯ ಕೆಳೆಗಿನ ಮಳೆಯ ನೀರಿನಲ್ಲಿ ಸಂಚರಿಸಿದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.