ಹರಪನಹಳ್ಳಿ: ಇತಿಹಾಸ ಪ್ರಸಿದ್ದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಪ್ರತಿಷ್ಠಾಪಿಸಿದ್ದ ಹಿಂದೂ ಮಹಾಗಣಪತಿಯ ಶೋಭಾಯಾತ್ರೆ ಸಾವಿರಾರು ಜನರ ನಡುವೆ ಶನಿವಾರ ಜರುಗಿತು.
ವಿಶ್ವಹಿಂದೂ ಪರಿಷತ್ ಬಜರಂಗ ದಳ ಕಾರ್ಯಕರ್ತರು ಮಧ್ಯಾಹ್ನ 2.10ಕ್ಕೆ ಗಣೇಶ ಧ್ವಜ ಹರಾಜು ಪ್ರಕ್ರಿಯೆ ಮುಕ್ತಾಯದ ಬಳಿಕ 3.30ಕ್ಕೆ ಮೆರವಣಿಗೆಗೆ ಚಾಲನೆ ನೀಡಿದರು.
ಹಿರೆಕೆರೆ ವೃತ್ತ, ಇಜಾರಿ ಶಿರಸಪ್ಪ ವೃತ್ತ ಪ್ರವೇಶಿಸಿದ ಹಾಲಸ್ವಾಮಿ ಮಠದ ಶಿವಯೋಗಿ ಹಾಲಸ್ವಾಮೀಜಿ ಪುಷ್ಪ ಸುರಿದು ಭಕ್ತಿ ಸಲ್ಲಿಸಿದರು. ಬಳಿಕ ಜೆಸಿ ಸರ್ಕಲ್, ಹಳೆ ಬಸ್ ನಿಲ್ದಾಣ ಹಾದು ಡಾ.ಬಿ.ಆರ್. ಅಂಬೇಡ್ಕರ ವೃತ್ತದ ಮೂಲಕ ನಾಯಕನಕೆರೆಗೆ ತೆರಳಿ, ವಿಶೇಷ ಪೂಜೆ ಸಲ್ಲಿಸುವ ಮೂಲಕ ವಿಸರ್ಜನೆ ನಡೆಯಿತು.
ಮೆರವಣಿಗೆ ಯುದ್ದಕ್ಕೂ ಡಿಜೆಯಿಂದ ಹೊರ ಹೊಮ್ಮುತ್ತಿದ್ದ ಹಾಡಿಗೆ ಯುವಕರು ಹೆಜ್ಜೆ ಹಾಕಿದರು. ಕೆಲವೆಡೆ ಯುವತಿಯರು, ಮಹಿಳೆಯರು, ವೃದ್ಧರು ಆಗಮಿಸಿ ಕಣ್ತುಂಬಿಕೊಂಡರು. ವಿದ್ಯುತ್ ದೀಪಾಲಂಕಾರ ಗಮನ ಸೆಳೆಯಿತು. ಡಿವೈಎಸ್ಪಿ ವೆಂಕಟಪ್ಪ ನಾಯಕ, ಸಿಪಿಐ ಮಹಾಂತೇಶ ಜಿ.ಸಜ್ಜನ್, ಪಿಎಸ್ಐಗಳಾದ ಶಂಭುಲಿಂಗ ಸಿ.ಹಿರೇಮಠ, ನಾಗರತ್ನಮ್ಮ, ಕಿರಣ್ ಕುಮಾರ, ಪ್ರಕಾಶ್, ಮಣಿಕಂಠ, ವಿಜಯಕೃಷ್ಣ ಅವರುಗಳ ನೇತೃತ್ವದಲ್ಲಿ ಬಂದೋಬಸ್ತ್ ಒದಗಿಸಿದ್ದರು. ಮುಖಂಡರಾದ ಜಯಪ್ರಕಾಶ ಸಾರಥಿ, ಸತೀಶ, ಆದಿತ್ಯ, ಅಭಿಲಾಷ ಪೂಜಾರ, ಅಶೋಕ ಹಾಗೂ ಆಯೋಜಕರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.