ADVERTISEMENT

ಹೊಸಪೇಟೆ: 55ಕೆ.ಜಿ ಗಾಂಜಾ ವಶ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2020, 3:06 IST
Last Updated 20 ಸೆಪ್ಟೆಂಬರ್ 2020, 3:06 IST
ಹೊಸಪೇಟೆ ನಗರ ಪೊಲೀಸರು ಶನಿವಾರ ವಶಪಡಿಸಿಕೊಂಡು ಗಾಂಜಾ ಹಾಗೂ ಬಂಧಿತ ಆರೋಪಿಗಳು
ಹೊಸಪೇಟೆ ನಗರ ಪೊಲೀಸರು ಶನಿವಾರ ವಶಪಡಿಸಿಕೊಂಡು ಗಾಂಜಾ ಹಾಗೂ ಬಂಧಿತ ಆರೋಪಿಗಳು   

ಹೊಸಪೇಟೆ: ನಗರದ ವಿವಿಧೆಡೆ ಗಾಂಜಾ ಮಾರಾಟ ಮಾಡುತ್ತಿದ್ದ ಆರು ಜನರನ್ನು ಬಂಧಿಸಿ, ಅವರಿಂದ ₹11.43 ಲಕ್ಷ ಮೌಲ್ಯದ 55.930 ಕೆ.ಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಡಿವೈಎಸ್ಪಿ ವಿ.ರಘು ಕುಮಾರ್, ನಗರದಲ್ಲಿ ಗಾಂಜಾ ಮಾರಾಟದ ಬಗ್ಗೆ ಮಾಹಿತಿ ದೊರೆತ್ತಿತ್ತು. ಎಸ್ಪಿ ಸೈದುಲ್ ಅದಾವತ್ ಹಾಗೂ ಹೆಚ್ಚುವರಿ ಎಸ್ಪಿ ಕೆ.ಲಾವಣ್ಯ ಅವರ ಮಾರ್ಗದರ್ಶನದಲ್ಲಿ ಮೂರು ತಂಡ ಗಳನ್ನು ರಚಿಸಿ ವಿವಿಧೆಡೆ ದಾಳಿ ನಡೆಸಿ, ಆರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ವಿವರಿಸಿದರು.

14ರಂದು ನಗರದ ಕನಕದಾಸ ವೃತ್ತದ ಬಳಿ ಮ್ಯಾಸಕೇರಿಯ ಅಣ್ಣತಮ್ಮ ಜೆ.ಹನುಮೇಶ್, ಜೆ.ಷಣ್ಮುಖ ಅವರಿಂದ 20 ಸಾವಿರ ಮೌಲ್ಯದ ಗಾಂಜಾ, ಬೈಕ್, ಎರಡು ಮೊಬೈಲ್ ಮತ್ತು ನಗದು ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 15ರಂದು ನಗರದ ಎಪಿಎಂಸಿ ಮಾರುಕಟ್ಟೆ ಬಳಿ ಗಾಂಜಾ ಮಾಡುತ್ತಿದ್ದ ವಿದ್ಯಾರ್ಥಿಗಳಾದ ಕೂಡ್ಲಿಗಿ ತಾಲ್ಲೂಕಿನ ಕಾನಹೊಸಳ್ಳಿಯ ಎಂ.ಎಚ್.ಮಧು ಹಾಗೂ ತಾಲ್ಲೂಕಿನ ಧರ್ಮಸಾಗರದ ಎಂ.ಸುರೇಶ್‌ಕುಮಾರ್ ಅವರನ್ನು ಬಂಧಿಸಿ, ಅವರಿಂದ 1,05,200 ಮೌಲ್ಯದ ಗಾಂಜಾ ವಶ ಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

ADVERTISEMENT

ಶುಕ್ರವಾರ ನಗರದ ಬಿ.ಟಿ.ಆರ್ ನಗರದ ಮನೆ ಮೇಲೆ ದಾಳಿ ನಡೆಸಿ ಮನೆಯಲ್ಲಿ ದಾಸ್ತಾನು ಮಾಡಿದ್ದ ಅಂದಾಜು ₹9,94,000 ಲಕ್ಷ ಮೌಲ್ಯದ ಗಾಂಜಾ ವಶಪಡಿಸಿಕೊಂಡು, ಇಬ್ಬರನ್ನು ಬಂಧಿಸಲಾಗಿದೆ ಎಂದರು.

ಮ್ಯಾಸಕೇರಿಯ ಹೇಮಲತಾ ಹಾಗೂ ಬಳ್ಳಾರಿ ಕೌಲ್ ಬಜಾರ್‌ನ ಇರ್ಫಾನ್ ಅಲಿ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಮೂರು ಪ್ರಕರಣದಲ್ಲಿ ಹೇಮಲತಾ ಎಂಬುವರು ಪ್ರಮುಖ ಆರೋಪಿ ಎಂಬುದು ತನಿಖೆಯಿಂದ ಪತ್ತೆಯಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.