ಬಳ್ಳಾರಿ: ಕೋವಿಡ್ ಎರಡನೇ ಅಲೆ ವೇಳೆ ಎದುರಾದ ಹಾಸಿಗೆ, ಆಮ್ಲಜನಕ ಮತ್ತು ವೆಂಟಿಲೇಟರ್ ಸಮಸ್ಯೆಯಿಂದ ಎಚ್ಚೆತ್ತುಕೊಂಡ ಜಿಲ್ಲಾಡಳಿತವು, ನಿರೀಕ್ಷಿತ ಮೂರನೇ ಅಲೆಯ ಸೋಂಕಿತರ ಚಿಕಿತ್ಸೆಗಾಗಿ ಕೋವಿಡ್ ಆಸ್ಪತ್ರೆಗಳು ಮತ್ತು ಕೋವಿಡ್ ಆರೋಗ್ಯ ಕೇಂದ್ರಗಳಲ್ಲಿ ಒಟ್ಟು 5,328 ಹಾಸಿಗೆಗಳನ್ನು ಕಾದಿರಿಸಲಾಗಿದೆ.
ಜಿಲ್ಲೆಯಲ್ಲಿರುವ ಕೋವಿಡ್ ಆಸ್ಪತ್ರೆಗಳಲ್ಲಿ 1,208, ಆಯುಸ್ಮಾನ್ ಭಾರತ್ ಆರೋಗ್ಯ ಕರ್ನಾಟಕ (ಎಬಿಎಆರ್ಕೆ) ಯೋಜನೆಯಡಿ ನೋಂದಣಿಯಾದ ಖಾಸಗಿ ಆಸ್ಪತ್ರೆಗಳಲ್ಲಿ 271, ಎಬಿಎಆರ್ಕೆ ಅಡಿ ನೋಂದಣಿಯಾಗದ ಖಾಸಗಿ ಆಸ್ಪತ್ರೆಗಳಲ್ಲಿ 192 ಹಾಗೂ ಡೆಡಿಕೇಟೆಡ್ ಕೋವಿಡ್ ಕೇರ್ ಸೆಂಟರ್ಗಳಲ್ಲಿ (ಡಿಸಿಸಿಸಿ) 3,170 ಹಾಸಿಗೆಗಳನ್ನು ಸಿದ್ಧವಾಗಿಡಲಾಗಿದೆ.
‘ಎರಡನೇ ಅಲೆ ಸಂದರ್ಭದಲ್ಲಿ ಒಮ್ಮೆಲೇ ಸೋಂಕಿತರ ಸಂಖ್ಯೆ ಹೆಚ್ಚಾಗಿದ್ದರಿಂದ ಹಾಸಿಗೆ, ಆಮ್ಲಜನಕ ಹಾಗೂ ವೆಂಟಿಲೇಟರ್ ಕೊರತೆ ಎದುರಾಯಿತು. ಇದರಿಂದಾಗಿ ಮೂರನೇ ಅಲೆಯ ವೇಳೆ ಯಾವುದೇ ಸಮಸ್ಯೆ ಆಗದಂತೆ ಕ್ರಮಗಳನ್ನು ಕೈಗೊಳ್ಳಲಾಗಿದೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಜನಾರ್ದನ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ತೋರಣಗಲ್ನಲ್ಲಿ ಸಾವಿರ ಹಾಸಿಗೆಗಳ ಆಸ್ಪತ್ರೆ ಸಿದ್ಧವಾಗಿದೆ. ಅದನ್ನು ಪೂರ್ಣವಾಗಿ ಬಳಸುತ್ತಿಲ್ಲ. ಸದ್ಯಕ್ಕೆ 250 ಹಾಸಿಗೆಗಳನ್ನು ಉಪಯೋಗಿಸಲಾಗುವುದು. ಬಳ್ಳಾರಿ ಟ್ರಾಮಾ ಕೇರ್ ಸೆಂಟರ್, ಜಿಲ್ಲಾ ಆಸ್ಪತ್ರೆ, ಜಿಂದಾಲ್ ಸಂಜೀವಿನಿ ಖಾಸಗಿ ಆಸ್ಪತ್ರೆಗಳಲ್ಲಿ ಒಟ್ಟು 487 ಹಾಸಿಗೆಗಳನ್ನು ಸಿದ್ಧವಿಡಲಾಗಿದೆ. 30 ಹೊಸ ವೆಂಟಿಲೇಟರ್ ಖರೀದಿಸಲಾಗಿದೆ’ ಎಂದು ಜನಾರ್ದನ್ ಸ್ಪಷ್ಟಪಡಿಸಿದರು.
ಎರಡನೇ ಅಲೆಯಲ್ಲಿ ಒಟ್ಟು 60 ಸಾವಿರ ಕೋವಿಡ್ ಸೋಂಕಿತ ಪ್ರಕರಣಗಳು ವರದಿಯಾಗಿದ್ದವು. ಎಂಟು ಸಾವಿರ ಸೋಂಕಿತರು ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. 1,683 ಮಂದಿ ಮೃತಪಟ್ಟಿದ್ದರು. ಕೋವಿಡ್ ಮೂರನೇ ಅಲೆಯಲ್ಲಿ ಸೋಂಕಿತರ ಸಂಖ್ಯೆ 1 ಲಕ್ಷಕ್ಕೆ ಏರಿಕೆ ಆಗಬಹುದು ಎಂದು ಜಿಲ್ಲಾಡಳಿತ ಅಂದಾಜಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.