
ಬಳ್ಳಾರಿ: ‘ಭದ್ರತೆ ಕೊಡಲು ಸಾಧ್ಯವಾಗದಿದ್ದರೆ ಮತ್ತು ವ್ಯಂಗ್ಯ ಮಾಡುವುದಾದರೆ ರಾಜ್ಯದ ಉಪ ಮುಖ್ಯಮಂತ್ರಿಯಾಗಿ ಡಿ.ಕೆ ಶಿವಕುಮಾರ್ಗೆ ಕಿಸಿಯಲು ಇನ್ನೇನಿದೆ’ ಎಂದು ಶಾಸಕ ಜನಾರ್ದನ ರೆಡ್ಡಿ ಪ್ರಶ್ನಿಸಿದರು.
ನಗರದಲ್ಲಿ ಸೋಮವಾರ ಮಾತನಾಡಿದ ಅವರು, ‘ಮುಖ್ಯಮಂತ್ರಿ ಆಗಬೇಕು ಎಂದು ಬಯಸುತ್ತಿರುವ ವ್ಯಕ್ತಿಯು ಪೊಲೀಸರ ಧೈರ್ಯ ಕುಗ್ಗಿಸಿ, ವ್ಯಂಗ್ಯದ ಮಾತುಗಳನ್ನು ಆಡುತ್ತಿದ್ದಾನೆ. ಈತ ಮುಖ್ಯಮಂತ್ರಿಯಾದರೆ ರಾಜ್ಯದ ಗತಿ ಏನಾಗಬಹುದು’ ಎಂದರು.
‘ಘಟನೆ ನಡೆದು ಐದು ದಿನಗಳ ಬಳಿಕ ಬಾಂಬ್ ನಿಷ್ಕ್ರಿಯ ದಳ ಘಟನಾ ಸ್ಥಳಕ್ಕೆ ಬಂದು ಗುಂಡುಗಳನ್ನು ಹುಡುಕುತ್ತಿದೆ ಎಂದರೆ, ತನಿಖೆ ಯಾವ ವೇಗದಲ್ಲಿ ನಡೆಯುತ್ತಿದೆ ಎಂದು ಯಾರಾದರೂ ಅಂದಾಜಿಸಬಹುದು. ಪೊಲೀಸರು ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಿಂದ ನಿಷ್ಪಕ್ಷಪಾತ ತನಿಖೆ ಸಾಧ್ಯವೇ’ ಎಂದು ಪ್ರಶ್ನಿಸಿದರು.
‘ಭರತ್ ರೆಡ್ಡಿ ಬೆನ್ನಿಗೆ ನಿಂತಿರುವುದಾಗಿ ಹೇಳುವ ಮೂಲಕ ಡಿ.ಕೆ ಶಿವಕುಮಾರ್ ಪೊಲೀಸರ ನೈತಿಕ ಬೆಂಬಲ ಕುಗ್ಗಿಸುತ್ತಿದ್ದಾರೆ. ಇದೆಲ್ಲವನ್ನು ಬದಿಗಿಟ್ಟು ಸಂಪೂರ್ಣ ಮಾಹಿತಿಯನ್ನು ಕೊಡಬೇಕು. ಇಲ್ಲವಾದರೆ, ಕಳಂಕ ಹೊತ್ತು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರದಿಂದ ಕೆಳಗೆ ಇಳಿಯಲಿದ್ದಾರೆ’ ಎಂದು ಹೇಳಿದರು.
ಬಳ್ಳಾರಿಯಿಂದ ಬೆಂಗಳೂರಿಗೆ ಪಾದಯಾತ್ರೆಯ ತೀರ್ಮಾನ ವರಿಷ್ಠರದ್ದು ಎಂದು ಅವರು ಇದೇ ವೇಳೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.