ಹೊಸಪೇಟೆ (ವಿಜಯನಗರ): ‘ಭಾಷಾಂತರದಲ್ಲಿ ಸಾಕಷ್ಟು ಉದ್ಯೋಗಾವಕಾಶಗಳಿದ್ದು, ವಿದ್ಯಾರ್ಥಿಗಳು ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು’ ಎಂದು ಮಲಯಾಳಂ ಅನುವಾದಕ ಸುಧಾಕರನ್ ರಾಮಂತಳಿ ತಿಳಿಸಿದರು.
ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಸೋಮವಾರ ಭಾಷಾಂತರ ಅಧ್ಯಯನ ವಿಭಾಗದಿಂದ ಹಮ್ಮಿಕೊಂಡಿದ್ದ ‘ಕನ್ನಡ ಪ್ರಾದೇಶಿಕತೆಗಳು ಮತ್ತು ಅನುವಾದ’ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಪ್ರತಿಯೊಂದು ಭಾಷೆಗೆ ತನ್ನದೇ ಆದ ಸೌಂದರ್ಯವಿರುತ್ತದೆ. ಕನ್ನಡ ಭಾಷೆಯೂ ತ್ರಿಪದಿ, ವಚನ, ಸಾಂಗತ್ಯ, ರಗಳೆ, ಪದ್ಯ, ಗದ್ಯ ಸಾಹಿತ್ಯದಿಂದ ಅತ್ಯಂತ ಶ್ರೀಮಂತವಾಗಿದೆ. ಕೇರಳದವರಿಗೆ ಇದರ ಬಗ್ಗೆ ಗೊತ್ತಿಲ್ಲ. ಇಲ್ಲಿನ ಸಾಹಿತ್ಯ ಕೃತಿಗಳನ್ನು ಮಲಯಾಳಂ ಭಾಷೆಗೆ ಅನುವಾದಿಸುತ್ತಿದ್ದೇನೆ. ಭಾಷಾಂತರ ಮಾಡುವ ಸಮಯದಲ್ಲಿ ಸಣ್ಣ ಸಣ್ಣ ವ್ಯತ್ಯಾಸಗಳನ್ನು ಗಮನಿಸಬೇಕು. ಮೂಲಕೃತಿಗೆ ಧಕ್ಕೆ ಬರದ ಹಾಗೆ ವಿಷಯಗಳನ್ನು ನಿಖರವಾಗಿ, ಸ್ಪಷ್ಟವಾಗಿ ಪ್ರಸ್ತುತಪಡಿಸುವುದು ಮುಖ್ಯವಾಗುತ್ತದೆ ಎಂದು ಹೇಳಿದರು.
ಕುಲಸಚಿವ ಎ.ಸುಬ್ಬಣ್ಣ ರೈ ಮಾತನಾಡಿ, 'ಅನುವಾದ ಒಂದು ಸಂಕೀರ್ಣ ಪ್ರಕ್ರಿಯೆ. ಯಾವುದೇ ಕೃತಿಯನ್ನು ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಅನುವಾದ ಮಾಡುವಾಗ ಅನೇಕ ಸಮಸ್ಯೆ-ಸವಾಲುಗಳು ಎದುರಾಗುತ್ತವೆ. ಅಲ್ಲಿನ ಸಾಮಾಜಿಕ, ಸಾಂಸ್ಕೃತಿಕ ವಿಷಯಗಳ ಕುರಿತು ಅನುವಾದಕರು ಅರಿತುಕೊಳ್ಳಬೇಕು. ಆಗ ಅನುವಾದವು ಯಶಸ್ವಿಯಾಗುತ್ತದೆ’ ಎಂದರು.
ವಿಭಾಗದ ಮುಖ್ಯಸ್ಥ ಎ. ಮೋಹನ್ ಕುಂಟಾರ್, ಸಂಶೋಧನಾರ್ಥಿ ಶ್ವೇತಾ, ರಮೇಶ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.