ಬಳ್ಳಾರಿ: ‘ಹಾನಿಗೊಳಗಾಗಿರುವ ಕಂಪ್ಲಿ–ಗಂಗಾವತಿ ಸೇತುವೆ ದುರಸ್ತಿ ಕುರಿತು ಕೊಪ್ಪಳ ಜಿಲ್ಲಾಡಳಿತದೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದರು.
ಸ್ವಾತಂತ್ರ್ಯ ದಿನಾಚರಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸೇತುವೆಗೆ ಹಾನಿಯಾಗಿರುವುದರಿಂದ ವಾಹನ ಸಂಚಾರ ಎಂದಿನಿಂದ ಆರಂಭಿಸಬೇಕು ಎಂಬುದನ್ನುನಿರ್ಧರಿಸಿಲ್ಲ. ಸೇತುವೆಯ ಸದ್ಯದ ಗುಣಮಟ್ಟದ ಕುರಿತು ವರದಿ ನೀಡುವಂತೆ ಲೋಕೋಪಯೋಗಿ ಇಲಾಖೆಗೆ ಸೂಚಿಸಲಾಗಿದೆ. ವರದಿ ಬಳಿಕ ಕ್ರಮ ಕೈಗೊಳ್ಳಲಾಗುವುದು’ ಎಂದರು.
‘ನದಿ ದಡದ ಬಹುತೇಕ ಗ್ರಾಮಗಳ ಜಮೀನುಗಳು ಜಲಾವೃತಗೊಂಡಿವೆ. ಪ್ರವಾಹದಿಂದ ಸಂತ್ರಸ್ತರಾದವರಿಗೆ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯ ನಿಯಮಗಳ ಅನ್ವಯ ಪರಿಹಾರ ನೀಡಲಾಗುವುದು. ಕಚ್ಚಾ ಮನೆ ಕುಸಿದಿದ್ದರೆ ₹95 ಸಾವಿರ ನೀಡಲಾಗುತ್ತದೆ. ಪ್ರತಿ ಹೆಕ್ಟೆರ್ ಬೆಳೆ ಹಾನಿಗೆ ₹13,500 ನೀಡಲಾಗುತ್ತದೆ’ ಎಂದು ಮಾಹಿತಿ ನೀಡಿದರು.
‘ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನ ಹಚ್ಚೊಳ್ಳಿ ಮತ್ತು ಹಡಗಲಿ ತಾಲ್ಲೂಕಿನ ಬ್ಯಾಲ ಹುಣಸಿ ಗ್ರಾಮಗಳ ಸ್ಥಳಾಂತರ ಮಾಡಿ ಶಾಶ್ವತ ಪರಿಹಾರ ನೀಡಬೇಕು ಎಂಬಬೇಡಿಕೆ ಇದೆ. ಆ ಬಗ್ಗೆ ಚರ್ಚಿಸಲಾಗುತ್ತಿದೆ. ಸಿರುಗುಪ್ಪದಲ್ಲಿ 58 ಸೇರಿದಂತೆಜಿಲ್ಲೆಯ ವಿವಿಧೆಡೆ ಕುಡಿಯುವ ನೀರಿನ ಕೆರೆಗಳ ಭರ್ತಿ ಕಾರ್ಯ ನಡೆದಿದೆ. ಅದಕ್ಕೆ ಎರಡು ತಿಂಗಳಾದರೂ ಬೇಕು‘ ಎಂದರು.
‘ಜಿಲ್ಲಾ ಕ್ರೀಡಾಂಗಣದ ಅಭಿವೃದ್ಧಿ ಕಾರ್ಯ ಎರಡು ವರ್ಷದಿಂದ ಕುಂಟುತ್ತಿದೆ. ನಿರ್ಮಿತಿ ಕೇಂದ್ರಕ್ಕೆ ಹೊಸ ಯೋಜನಾ ನಿರ್ದೇಶಕರನ್ನು ನಿಯೋಜಿಸಲಾಗಿದೆ. ನೆರವು ನೀಡಲಿರುವ ಜಿಂದಾಲ್ಜೊತೆಗೂ ಚರ್ಚಿಸಲಾಗುವುದು’ ಎಂದರು.
ಸಂಸದ ವೈ.ದೇವೇಂದ್ರಪ್ಪಮಾತನಾಡಿ, ‘ಸಂತಸ್ರರಿಗೆ ಪರಿಹಾರ ನೀಡುವಲ್ಲಿ ಅಧಿಕಾರಿಗಳ ಗಮನ ಸೆಳೆದಿರುವೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.