ಬಳ್ಳಾರಿ: ಕಲ್ಯಾಣ ಕರ್ನಾಟಕ ಪ್ರದೇಶದ ವ್ಯಾಪ್ತಿಗೆ ಒಳಪಡುವ ಬಳ್ಳಾರಿ ಜಿಲ್ಲೆ, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಕೆಆರ್ಡಿಬಿ) ಅನುದಾನದ ವಿಚಾರದಲ್ಲಿ ಮಾತ್ರ ಪ್ರತಿ ವರ್ಷ ಮಲತಾಯಿ ಧೋರಣೆಗೆ ತುತ್ತಾಗುತ್ತಿದೆ.
ಬಳ್ಳಾರಿ, ವಿಜಯನಗರ, ಕೊಪ್ಪಳ, ರಾಯಚೂರು, ಬೀದರ್, ಕಲಬುರಗಿ, ಯಾದಗಿರಿ ಜಿಲ್ಲೆಗಳು ಕೆಕೆಆರ್ಡಿಬಿ ವ್ಯಾಪ್ತಿಗೆ ಒಳಪಡುತ್ತವೆ. ಈ ಏಳು ಜಿಲ್ಲೆಗಳಿಗೆ 2022-23ರಲ್ಲಿ ₹1260 ಕೋಟಿ, 2023-24ನೇ ಸಾಲಿನಲ್ಲಿ ₹2610 ಕೋಟಿ, 2024–25ನೇ ಸಾಲಿನಲ್ಲಿ ₹3225 ಕೋಟಿ ಸೇರಿ ಒಟ್ಟು ₹7,095 ಕೋಟಿ ಹಣವನ್ನು ಮಂಡಳಿಯು ಒದಗಿಸಿದೆ.
ಬಳ್ಳಾರಿ ಜಿಲ್ಲೆಗೆ 2022-23ರಲ್ಲಿ ₹71.04 ಕೋಟಿ, 2023–24ರಲ್ಲಿ ₹147.16 ಕೋಟಿ, 2024–25ರ ಸಾಲಿನಲ್ಲಿ ₹181.84 ಕೋಟಿ ಅನುದಾನ ಸಿಕ್ಕಿದೆ. ಒಟ್ಟಾರೆ ಈ ಮೂರು ವರ್ಷಗಳಲ್ಲಿ ₹400.06 ಕೋಟಿ ಹಣ ಮಂಡಳಿಯಿಂದ ಬಂದಿದೆ.
ಆದರೆ, ಕಲ್ಯಾಣ ಕರ್ನಾಟಕ ಭಾಗದ ಬೇರೆ ಜಿಲ್ಲೆಗಳಿಗೆ ಕಳೆದ ಮೂರು ವರ್ಷಗಳಿಗೆ ಸಿಕ್ಕಿರುವ ಅನುದಾನಕ್ಕೆ ಹೋಲಿಸಿಕೊಂಡರೆ ಬಳ್ಳಾರಿ ಜಿಲ್ಲೆಗೆ ಸಿಕ್ಕಿರುವ ಅನುದಾನವು ಕಡಿಮೆ ಎನಿಸಿದೆ.
ಬೀದರ್ ಜಿಲ್ಲೆಗೆ ಈ ಮೂರು ವರ್ಷಗಳಲ್ಲಿ ₹1053.22 ಕೋಟಿ, ಕಲಬುರಗಿಗೆ ₹1975.82 ಕೋಟಿ, ಯಾದಗಿರಿ ₹521.27 ಕೋಟಿ, ರಾಯಚೂರು ₹1265.50 ಕೋಟಿ, ಕೊಪ್ಪಳ 510.94, ವಿಜಯನಗರ ಜಿಲ್ಲೆಗೆ 767.46 ಕೋಟಿ ಹಣ ಬಿಡುಗಡೆಯಾಗಿದೆ.
ಈ ಮೂಲಕ ಬಳ್ಳಾರಿಯು ಕೆಕೆಆರ್ಡಿಬಿಯಲ್ಲಿ ಮಲತಾಯಿ ಧೋರಣೆಗೆ ತುತ್ತಾಗಿರುವುದು, ಪ್ರಾದೇಶಿಕ ಅಸಮಾನತೆ ಎದುರಿಸುತ್ತಿರುವ ಪ್ರದೇಶದಲ್ಲೇ ನಿರ್ಲಕ್ಷ್ಯಕ್ಕೆ ಒಳಗಾಗಿರುವುದು ಅಂಕಿ ಗೊತ್ತಾಗಿದೆ.
ವಿಜಯನಗರಕ್ಕಿಂತಲೂ ಕಡಿಮೆ ಹಣ
ಬಳ್ಳಾರಿಯಿಂದ ಒಡೆದು ಹೋದ ವಿಜಯನಗರ ಜಿಲ್ಲೆಗೆ ಈ ಮೂರು ವರ್ಷಗಳಲ್ಲಿ ಸಿಕ್ಕ ಅನುದಾನಕ್ಕೆ ಹೋಲಿಸಿಕೊಂಡರೆ ಬಳ್ಳಾರಿಗೆ ಸಿಕ್ಕ ಅನುದಾನವೂ ಕಡಿಮೆ ಇದೆ. 2022-23ರಲ್ಲಿ ಬಳ್ಳಾರಿಗೆ ₹71.04 ಕೋಟಿ ಸಿಕ್ಕರೆ ವಿಜಯನಗರಕ್ಕೆ ₹136.29 ಕೋಟಿ ಸಿಕ್ಕಿತ್ತು. 2023-24ರಲ್ಲಿ ಬಳ್ಳಾರಿಗೆ ₹147.16 ಕೋಟಿ ಸಿಕ್ಕಿತ್ತು. ವಿಜಯನಗರಕ್ಕೆ ₹282.32 ಕೋಟಿ ಸಿಕ್ಕಿದೆ. 2024-25ರಲ್ಲಿ ಬಳ್ಳಾರಿ ₹181.84 ಕೋಟಿ, ವಿಜಯನಗರ ₹348.84 ಕೋಟಿ ಪಡೆದಿತ್ತು.
ಪರಿಷತ್ ಸದಸ್ಯರಿಗಿಲ್ಲ ಚಿಕ್ಕಾಸು
ಕೆಕೆಆರ್ಡಿಬಿ ಅನುದಾನದಲ್ಲಿ ಈ ಪ್ರದೇಶದ ಯಾವೊಬ್ಬ ಪರಿಷತ್ ಸದಸ್ಯರಿಗೆ ಚಿಕ್ಕಾಸೂ ದೊರೆತಿಲ್ಲ. ಮಂಡಳಿ ರಚನೆ ಸಂದರ್ಭದಲ್ಲಿ ರೂಪಿಸಲಾದ ನಿಯಮಾವಳಿಗಳು ಇದಕ್ಕೆ ಅಡ್ಡಿಯಾಗಿವೆ ಎನ್ನಲಾಗಿದೆ. ಈ ವಿಚಾರದ ಬಗ್ಗೆ ಪರಿಷತ್ ಸದಸ್ಯರು ಹಲವು ವರ್ಷಗಳಿಂದ ಸರ್ಕಾರಗಳನ್ನು ಪ್ರಶ್ನೆ ಮಾಡುತ್ತಿದ್ದಾರಾದರೂ, ಈ ವರೆಗೆ ಈ ಸಮಸ್ಯೆ ಬಗೆಹರಿದಿಲ್ಲ. ‘ನಾವು ಬಳಸುವುದೂ ಕ್ಷೇತ್ರಕ್ಕೇನೆ. ನಮಗೇ ಅನುದಾನ ನೀಡದೇ ಹೋದರೆ ಹೇಗೆ’ ಎಂದು ವಿಧಾನ ಪರಿಷತ್ ಸದಸ್ಯ ವೈ.ಎಂ ಸತೀಶ್ ಬೇಸರ ವ್ಯಕ್ತಪಡಿಸಿದ್ದಾರೆ.
ಕೆಕೆಆರ್ಡಿಬಿಯಿಂದ ಬಳ್ಳಾರಿಗೆ ನಿರಂತರ ಮೋಸವಾಗಿದೆ. ಸರ್ಕಾರ ಇದನ್ನು ಸರಿಪಡಿಸಬೇಕು. ವಿಧಾನ ಪರಿಷತ್ ಪರಿಷತ್ ಸದಸ್ಯರಿಗೂ ಅನುದಾನ ಒದಗಿಸಬೇಕು.ವೈ.ಎಂ ಸತೀಶ್ ಪರಿಷತ್ ಸದಸ್ಯ
ಕಡಿಮೆ ಅನುದಾನಕ್ಕೆ ಕಾರಣವೇನು?
ಬಳ್ಳಾರಿಯು ಖನಿಜ ಸಂಪದ್ಭರಿತ ಜಿಲ್ಲೆ. ಇಲ್ಲಿನ ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್ (ಡಿಎಂಎಫ್)ಗೆ ಭಾರೀ ಹಣ ಸಂಗ್ರಹವಾಗುತ್ತದೆ. ಜತೆಗೆ ಕೆಎಂಇಆರ್ಸಿ ಇದೆ. ಹೀಗಿರುವಾಗ ಕೆಕೆಆರ್ಡಿಬಿಯಿಂದಲೂ ಅನುದಾನ ನೀಡಬೇಕೇ ಎಂಬ ಪ್ರಶ್ನೆಯನ್ನು ಬೀದರ್ ಕಲಬುರಗಿ ಭಾಗದ ರಾಜಕಾರಣಿಗಳು ಕೇಳುತ್ತಾರೆ. ಈ ಕಾರಣಕ್ಕಾಗಿಯೇ ಜಿಲ್ಲೆಗೆ ಪ್ರತಿ ವರ್ಷವೂ ಕೆಕೆಆರ್ಡಿಬಿಯಿಂದ ಹೆಚ್ಚಿನ ಅನುದಾನ ಸಿಗುತ್ತಿಲ್ಲ ಎಂದು ಹೇಳಲಾಗುತ್ತಿದೆ. ವಾಸ್ತವವೇನೆಂದರೆ ಕಳೆದ ಮೂರು ವರ್ಷಗಳಿಂದ ಡಿಎಂಎಫ್ನಲ್ಲಿ ಕ್ರಿಯಾಯೋಜನೆಯೇ ಅಗಿಲ್ಲ. ಹೀಗಿದ್ದ ಮೇಲೆ ಡಿಎಂಎಫ್ ಹಣದ ಬಳಕೆಯಾದರೂ ಎಲ್ಲಿ ಆಗಿದೆ ಎಂಬುದು ಇಲ್ಲಿನ ಕೆಲ ನಾಯಕರ ಅಭಿಮತ. ಇದೆಲ್ಲದರ ಜತೆಗೆ ಅನುದಾನ ತರುವಲ್ಲಿ ಬೀದರ್ ಕಲಬುರಗಿ ರಾಯಚೂರು ಭಾಗದ ಜನಪ್ರತಿನಿಧಿಗಳಿಗೆ ಇರುವ ಬದ್ಧತೆ ಇಚ್ಛಾಶಕ್ತಿ ಬಳ್ಳಾರಿ ಭಾಗದ ಜನಪ್ರತಿನಿಧಿಗಳಿಗೆ ಇಲ್ಲ ಎಂದು ಉನ್ನತ ಹಂತದ ಮೂಲಗಳು ಹೇಳುತ್ತವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.