ಕೊಟ್ಟೂರು: ನಿಗದಿತ ಸಮಯದೊಳಗೆ ಸುಸಜ್ಜಿತ ಪ್ರಜಾಸೌಧ ನಿರ್ಮಾಣವಾಗಿ ವಿವಿಧ ಕಚೇರಿಗಳು ಒಂದೆಡೆ ಕಾರ್ಯ ನಿರ್ವಹಿಸುವುದರೊಂದಿಗೆ ತಾಲ್ಲೂಕಿನ ಜನತೆಯ ಬಹು ನಿರೀಕ್ಷಿತ ಕನಸಿನ ಸೌಧ ವರ್ಷದೊಳಗಾಗಿ ಲೋಕಾರ್ಪಣೆಗೆ ಸಿದ್ದಗೊಳ್ಳುತ್ತದೆ ಎಂದು ಶಾಸಕ ಕೆ.ನೇಮರಾಜನಾಯ್ಕ ಹೇಳಿದರು.
ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಪಕ್ಕದಲ್ಲಿ ಸೋಮವಾರ ಏರ್ಪಡಿಸಿದ್ದ ಪ್ರಜಾಸೌಧ ಕಟ್ಟಡದ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಸಾರ್ವಜನಿಕರ ಹಾಗೂ ವಿವಿಧ ಸಂಘ ಸಂಸ್ಥೆಗಳು, ಹೋರಾಟಗಾರರ ಅನೇಕ ವರ್ಷಗಳ ಪರಿಶ್ರಮದ ಫಲವಾಗಿ ಕಳೆದ ಐದಾರು ವರ್ಷಗಳ ಹಿಂದೆ ಬಿಜೆಪಿ ಸರ್ಕಾರದಲ್ಲಿ ತಾಲ್ಲೂಕು ಕೇಂದ್ರವೆಂದು ಘೋಷಣೆಯಾದ ಕೊಟ್ಟೂರಿನಲ್ಲಿ ಇಂದು ಭೂಮಿಪೂಜೆ ನೆರವೇರಿಸುತ್ತಿರುವುದು ಸಂತಸವಾಗುತ್ತಿದೆ ಎಂದು ಶಾಸಕ ಕೆ.ನೇಮರಾಜನಾಯ್ಕ ಹೇಳಿದರು.
ತಾಲ್ಲೂಕು ಆಡಳಿತ ಸೌಧದ ಕಟ್ಟಡ ಪೂರ್ಣಗೊಳ್ಳುತ್ತಿದ್ದಂತೆ ಪೂರ್ಣ ಪ್ರಮಾಣದ ಕಚೇರಿಗಳನ್ನು ಆರಂಭಿಸುವಂತೆ ಸರ್ಕಾರದ ಗಮನ ಸೆಳೆಯುತ್ತೇನೆ ಎಂದ ಅವರು ಪ್ರಜಾಸೌಧಕ್ಕೆ ಮಂಜೂರಾದ ₹ 8 ಕೋಟಿ ಜೊತೆ ಇನ್ನೂ ₹ 8 ಕೋಟಿ ಅನುದಾನವನ್ನು ಸಹ ಮಂಜೂರು ಮಾಡಿಸುವ ಭರವಸೆ ನೀಡಿದರು.
ಜ್ಙಾನಗುರು ವಿದ್ಯಾ ಪೀಠದ ಕಾರ್ಯದರ್ಶಿ ಎಂ.ಎಂ.ಜೆ.ಹರ್ಷವರ್ಧನ್ ಮಾತನಾಡಿ, ಪಟ್ಟಣದ ಪಟ್ಟಣ ಪಂಚಾಯ್ತಿಯನ್ನು ಮೇಲ್ದರ್ಜೆಗೇರಿಸಿ ಪುರಸಭೆಯಾಗಿಸುವಂತೆ ಸರ್ಕಾರದ ಮೇಲೆ ಶಾಸಕರು ಒತ್ತಡ ಹಾಕಬೇಕು ಎಂದರು. ಪಟ್ಟಣದ ಹೃದಯ ಭಾಗದಲ್ಲಿ ನಿರ್ಮಾಣವಾಗುತ್ತಿರುವ ಪ್ರಜಾಸೌಧ ಎಲ್ಲರಿಗೂ ಅನುಕೂಲವಾಗುವಂತಹ ಸೂಕ್ತ ಸ್ಥಳವಾಗಿದೆ ಎಂದರು.
ತಹಶೀಲ್ದಾರ್ ಜಿ.ಕೆ.ಅಮರೀಶ್, ತಾ.ಪಂ.ಇಒ ಬಿ.ಆನಂದಕುಮಾರ್, ಪ.ಪಂ.ಅಧ್ಯಕ್ಷೆ ಬಿ.ರೇಖಾ ರಮೇಶ್, ಉಪಾಧ್ಯಕ್ಷ ಜಿ.ಸಿದ್ಧಯ್ಯ, ಮುಖ್ಯಾಧಿಕಾರಿ ಎ.ನಸರುಲ್ಲಾ ಹಾಗೂ ಸದಸ್ಯರು ವಿವಿಧ ಇಲಾಖಾಧಿಕಾರಿಗಳು ಹಾಗೂ ಮುಖಂಡರಾದ ಬಿ.ಮರಿಸ್ವಾಮಿ, ಎಂ.ಎಂ.ಜೆ.ಶೋಭಿತ್, ಚಾಪಿ. ಚಂದ್ರಪ್ಪ, ರಾಂಪುರ ವಿವೇಕಾನಂದಗೌಡ, ಬಾದಾಮಿ ಮೃತ್ಯುಂಜಯ, ಬಾವಿಕಟ್ಟೆ ಶಿವಾನಂದ, ಬೋರ್ವೆಲ್ ತಿಪ್ಪೇಸ್ವಾಮಿ, ವೀಣಾ ವಿವೇಕಾನಂದಗೌಡ, ಬೂದಿ ಶಿವಕುಮಾರ್, ಸಿ.ಮ.ಗುರುಬಸವರಾಜ್ ಮುಂತಾದವರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.