ಹೊಸಪೇಟೆ (ವಿಜಯನಗರ): ‘ಹಾಲುಮತ ಮಹಾಸಭಾದಿಂದ ಒಂದು ಲಕ್ಷ ಕುರುಬ ಸಮಾಜದ ಯುವಕರನ್ನು ಒಗ್ಗೂಡಿಸಿ, ಸಂಘಟಿಸುವ ಕೆಲಸ ನಡೆಯುತ್ತಿದೆ’ ಎಂದು ಮಹಾಸಭಾ ರಾಜ್ಯ ಸಂಚಾಲಕ ರಾಜು ಮೌರ್ಯ ತಿಳಿಸಿದರು.
ಗುರುವಾರ ನಗರದಲ್ಲಿ ನಡೆದ ಹಾಲುಮತ ಮಹಾಸಭೆಯಲ್ಲಿ ಮಾತನಾಡಿದ ಅವರು, ‘ಸುಕ್ಷೇತ್ರ ಕಾಗಿನೆಲೆ ಕನಕ ಗುರುಪೀಠದ ಅಡಿಯಲ್ಲಿ ಕಾರ್ಯನಿರ್ವಹಿಸಲು ಒಂದು ಲಕ್ಷ ಸಮಾಜದ ಸಕ್ರಿಯ ಯುವಕರನ್ನು ಗುರುತಿಸಿ, ಅವರಿಂದ ಸಮಾಜವನ್ನು ಸಂಘಟಿಸಲಾಗುವುದು. ಶೇ 80ರಷ್ಟು ಯುವಕರಿಗೆ ಆದ್ಯತೆ ನೀಡಿ ಉಳಿದ ಶೇ20ರಷ್ಟು ಹಿರಿಯ ಮುಖಂಡರ ಮಾರ್ಗದರ್ಶನದಲ್ಲಿ ಸಂಘಟನೆ ಮಾಡಲಾಗುವುದು’ ಎಂದರು.
‘ಕುರುಬ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಸಮಾಜ ಕಲ್ಯಾಣ ಇಲಾಖೆಯಿಂದ ಎಲ್ಲ ಜಿಲ್ಲೆಗಳಲ್ಲಿ ಕುಲಶಾಸ್ತ್ರೀಯ ಅಧ್ಯಯನ ನಡೆದಿದೆ. ಈ ಅಧ್ಯಯನ ವರದಿ ಎರಡರಿಂದ ಮೂರು ತಿಂಗಳಲ್ಲಿ ಬರಲಿದೆ. ಬಂದ ಬಳಿಕ ಕೇಂದ್ರ ಸರ್ಕಾರಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶಿಫಾರಸು ಮಾಡುವ ವಿಶ್ವಾಸ ಇದೆ’ ಎಂದರು.
ಮಹಾಸಭಾದ ರಾಜ್ಯ ಕಾರ್ಯದರ್ಶಿ ಶಿವಾನಂದ ಹುಲ್ಲೇನರ್, ಬಳ್ಳಾರಿ ಜಿಲ್ಲಾ ಅಧ್ಯಕ್ಷ ಕುರಿ ಶಿವಮೂರ್ತಿ, ಮುಖಂಡರಾದ ಶ್ರೀನಿವಾಸ, ಸಿ. ವೀರಣ್ಣ ದಾವಣಗೆರೆ, ಸಿದ್ದಣ್ಣ ಉಚ್ಚಂಗಿದುರ್ಗ, ರಾಮು ಅರಕೇರಿ, ಸಂಗಮೇಶ ಕಜ್ಜಿಡೋಣಿ, ಸಿ.ಬಿ.ನಾಗೇಶ, ಜಿ.ಗೋಪಾಲಕೃಷ್ಣ, ಬೇಕರಿ ವೆಂಕಟೇಶ, ಪ್ರಶಾಂತ, ದೊಡ್ಡ ಬಸವರಾಜ, ಕಂಬಳಿ ಮಲ್ಲಿಕಾರ್ಜುನ, ಜಂಬಣ್ಣ, ಪರಮೇಶ್ವರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.