ADVERTISEMENT

ಏಳು ಕೋಟಿ.. ಏಳು ಕೋಟಿ.. ಚಹಾಂಗ ಬಲೋ..

ಮೈಲಾರದ ಡೆಂಕನಮರಡಿಯಲ್ಲಿ ಲಕ್ಷಾಂತರ ಭಕ್ತರ ಉದ್ಘೋಷ.. ಮೈಲಾರಲಿಂಗನ ದರ್ಶನದಿಂದ ಪುನೀತ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 7 ಫೆಬ್ರುವರಿ 2023, 19:30 IST
Last Updated 7 ಫೆಬ್ರುವರಿ 2023, 19:30 IST
ಕಟ್ಟಿಗೆ ಚೂರುಗಳ ಮೂಲಕ ಜೋಕಾಲಿ ರೀತಿಯಲ್ಲಿ ಕಟ್ಟಿ, ಅದರೊಳಗೆ ಬಾಳೆಕಾಯಿ ಇಟ್ಟು, ಅದನ್ನು ತೂಗಿ, ಮಕ್ಕಳಾಗಲೆಂದು ಹರಕೆ ತೀರಿಸಿದ ಮಹಿಳೆಯರು
ಕಟ್ಟಿಗೆ ಚೂರುಗಳ ಮೂಲಕ ಜೋಕಾಲಿ ರೀತಿಯಲ್ಲಿ ಕಟ್ಟಿ, ಅದರೊಳಗೆ ಬಾಳೆಕಾಯಿ ಇಟ್ಟು, ಅದನ್ನು ತೂಗಿ, ಮಕ್ಕಳಾಗಲೆಂದು ಹರಕೆ ತೀರಿಸಿದ ಮಹಿಳೆಯರು   

ಮೈಲಾರ (ವಿಜಯನಗರ ಜಿಲ್ಲೆ): ಏಳು ಕೋಟಿ.. ಏಳು ಕೋಟಿ.. ಚಹಾಂಗ ಬಲೋ...

ಸೂರ್ಯ ತನ್ನ ಪಥ ಬದಲಿಸಿಕೊಂಡು ಮರೆಯಾಗುವ ಸಮಯ. ಪವಿತ್ರ ಧಾರ್ಮಿಕ ಸುಕ್ಷೇತ್ರ ಮೈಲಾರದ ಡೆಂಕನಮರಡಿಯಲ್ಲಿ ಲಕ್ಷಾಂತರ ಭಕ್ತರಿಂದ ಬಂದ ಉದ್ಘೋಷವಿದು. ಫುಟ್ಬಾಲ್‌ ಪಂದ್ಯ ವೀಕ್ಷಣೆಗೆ ಜನ ಸೇರುವ ಹಾಗೆ ಡೆಂಕನಮರಡಿಯಲ್ಲಿ ಮಂಗಳವಾರ ಸಂಜೆ ಭಕ್ತಗಣ ಸೇರಿತ್ತು. ಅವರ ಉದ್ಘೋಷದಿಂದ ಇಡೀ ಪರಿಸರ ಭಕ್ತಿಮಯವಾಗಿತ್ತು. ಎಲ್ಲರ ಬಾಯಲ್ಲೂ ಮೈಲಾರಲಿಂಗ ಸ್ವಾಮಿಯ ಜಪ. ಗೊರವಯ್ಯ ರಾಮಣ್ಣ ಬಿಲ್ಲು ಏರಿ ಕೆಲವೇ ಸೆಕೆಂಡುಗಳಲ್ಲಿ ನುಡಿಯುವ ದೈವವಾಣಿ, ಭವಿಷ್ಯವಾಣಿ ಕೇಳಲು ಎಲ್ಲರೂ ಕಾತುರರಾಗಿದ್ದರು. ದೈವವಾಣಿ ಆಲಿಸಿ, ಅವರ ಹರಕೆ ತೀರಿಸಲು ತುದಿಗಾಲಲ್ಲಿ ನಿಂತಿದ್ದರು.

ಗೊರವಯ್ಯ ನುಡಿಯುವ ಕಾರಣಿಕದ ಪ್ರಕಾರ ನಾಡಿನಲ್ಲಿ ಬೆಳವಣಿಗೆಗಳಾಗುತ್ತವೆ. ಅದು ಜನಜೀವನದ ಮೇಲೂ ಪರಿಣಾಮ ಬೀರುತ್ತದೆ ಎಂಬುದು ಜನರ ನಂಬಿಕೆ. ಈ ವಾಣಿ ಆಲಿಸಿದ ನಂತರ ಹರಕೆ ತೀರಿಸಿದರೆ ಮೈಲಾರಲಿಂಗ ಒಲಿಯುತ್ತಾನೆ. ಕಷ್ಟ ಕಾರ್ಪಣ್ಯಗಳೆಲ್ಲ ದೂರವಾಗುತ್ತವೆ ಎಂಬ ಅದಮ್ಯ ಭರವಸೆಯೊಂದಿಗೆ ಅಪಾರ ಜನ ಬಂದಿದ್ದರು.

ADVERTISEMENT

ಸಂಜೆ 5.30ಕ್ಕೆ ಕಾರಣಿಕ ನುಡಿ ನಿಗದಿಯಾಗಿತ್ತು. ಆದರೆ, ಮಧ್ಯಾಹ್ನ ಎರಡು ಗಂಟೆಯಿಂದಲೇ ಜನ ವಿವಿಧ ಕಡೆಗಳಿಂದ ಡೆಂಕನಮರಡಿಯತ್ತ ಧಾವಿಸಲು ಶುರು ಮಾಡಿದರು. ಸಮಯ ಕಳೆದಂತೆ ಭಕ್ತರ ಸಂಖ್ಯೆ ಹೆಚ್ಚಾಗುತ್ತಲೇ ಹೋಯಿತು. ಕಾರಣಿಕ ನುಡಿಯುವ ಸಂದರ್ಭ ಬಂದಾಗ ಇರುವೆಗಳಂತೆ ಜನ ಡೆಂಕನಮರಡಿಯನ್ನು ಸುತ್ತುವರಿದಿದ್ದರು. ದೇವಸ್ಥಾನದ ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್ ಅವರು ಅಶ್ವಾರೂಢರಾಗಿ ಡೆಂಕನಮರಡಿಗೆ ಆಗಮಿಸಿ ಕಾರಣಿಕ ಸ್ಥಳದಲ್ಲಿ ಪ್ರದಕ್ಷಿಣೆ ಹಾಕಿದರು. ವಿಜಯನಗರದ ಅರಸರು ಮೈಲಾರಲಿಂಗ ಸ್ವಾಮಿಗೆ ಅರ್ಪಿಸಿದ್ದ ಉತ್ಸವ ಮೂರ್ತಿಗಳ ಮೆರವಣಿಗೆ ಬರುತ್ತಿದ್ದಂತೆ ಭಕ್ತರ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಏಳು ಕೋಟಿ.. ಏಳು ಕೋಟಿ.. ಚಹಾಂಗ ಬಲೋ.. ಎಂಬ ವಾಣಿ ಮತ್ತೆ ಪ್ರತಿಧ್ವನಿಸಿತು. ಗೊರವಯ್ಯ ರಾಮಣ್ಣ ಬಿಲ್ಲು ಏರುತ್ತಿದ್ದಂತೆ ಕ್ಷಣಕಾಲ ಡೆಂಕನಮರಡಿ ಸ್ತಬ್ಧಗೊಂಡಿತ್ತು. ಮೌನಕ್ಕೆ ಜಾರಿತ್ತು. ‘ಅಂಬಲಿ ಹಳಸಿತು, ಕಂಬಳಿ ಬೀಸಿತಲೇ ಪರಾಕ್’ ಎಂದು ರಾಮಣ್ಣ ಹೇಳಿ ಬಿಲ್ಲಿನಿಂದ ಕೆಳಗೆ ಬೀಳುತ್ತಲೇ ಭಕ್ತರ ಜಯಘೋಷ ಮುಗಿಲು ಮುಟ್ಟಿತ್ತು. ‘ಸ್ವಾಮಿಯ ನುಡಿಯಲ್ಲಿ ಮಿಶ್ರಫಲ ಅಡಗಿದೆ. ಮಳೆ, ಬೆಳೆ ಸಮೃದ್ದಿಯಾಗಿ ನಾಡು ಸುಭಿಕ್ಷೆಯಾಗಬಹುದು. ರಾಜ್ಯದಲ್ಲಿ ಸ್ಥಿರವಾದ ಸರ್ಕಾರ ಬರುತ್ತದೆ’ ಎಂದು ಭಕ್ತರು ವಿಶ್ಲೇಷಿಸಿದರು.

ಬಗೆಬಗೆಯ ಹರಕೆ:

ಕಾರಣಿಕ ನುಡಿ ಮುಗಿಯುತ್ತಿದ್ದಂತೆ ವಿವಿಧ ಕಡೆಗಳಿಂದ ಡೆಂಕನಮರಡಿ ಪರಿಸರದಲ್ಲಿ ಬೀಡು ಬಿಟ್ಟಿದ್ದ ಭಕ್ತರು ಅವರು ಕುಳಿತ ಜಾಗದಲ್ಲಿ ಕಲ್ಲುಗಳನ್ನು ಪೋಣಿಸಿದರು. ಕೆಲವರು ಕಟ್ಟಿಗೆಯ ಚೂರುಗಳನ್ನು ಜೋಡಿಸಿಟ್ಟರು. ಕೆಲವರು ಬಿಲ್ಲುಗಳಿಂದ ಕಿರು ಜೋಕಾಲಿಯಂತೆ ಮಾಡಿ, ಅದರೊಳಗೆ ಬಾಳೆಹಣ್ಣು ಇಟ್ಟು, ಅರಿಶಿಣ ಹಾಕಿ ಪೂಜಿಸಿ, ತೂಗಿದರು.

ಮೈಲಾರಲಿಂಗನ ಆಶೀರ್ವಾದದಿಂದ ಮನೆಯಿಲ್ಲದವರಿಗೆ ಮನೆಯಾಗಲಿ, ಮಕ್ಕಳಾಗದಿದ್ದವರಿಗೆ ಮಕ್ಕಳಾಗಲಿ, ಜೀವನದಲ್ಲಿ ಯಶಸ್ಸು ಸಿಗಲಿ, ಉದ್ಯಮ ಬೆಳೆಯಲಿ, ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬರಲಿ, ಉತ್ತಮ ವಧು–ವರ ಸಿಗಲಿ ಹೀಗೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಹರಕೆ ತೀರಿಸಿದರು. ಅಲ್ಲಿಗೆ ಬಂದಿದ್ದವರೆಲ್ಲರೂ ಕಲ್ಲುಗಳನ್ನು ಪೋಣಿಸಿ ಇಟ್ಟಿದ್ದರಿಂದ ಇಡೀ ಡೆಂಕನಮರಡಿಯಲ್ಲಿ ಮಿನಿ ಪಿರಮಿಡ್‌ಗಳು ನಿರ್ಮಿಸಿದಂತೆ ಭಾಸವಾಯಿತು. ಜಿಲ್ಲಾಡಳಿತದ ಪ್ರಕಾರ, ಐದರಿಂದ ಆರು ಲಕ್ಷ ಜನ ಕಾರಣಿಕಕ್ಕೆ ಸಾಕ್ಷಿಯಾದರು. ಜಿಲ್ಲಾಧಿಕಾರಿ ಟಿ. ವೆಂಕಟೇಶ್‌, ಜಿಲ್ಲಾ ಪಂಚಾಯಿತಿ ಸಿಇಒ ಸದಾಶಿವ ಪ್ರಭು ಹಾಗೂ ಮೊದಲ ಬಾರಿಗೆ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಹಲವು ಅಧಿಕಾರಿಗಳು ಈ ಕ್ಷಣಗಳನ್ನು ಕುತೂಹಲದಿಂದ ಕಣ್ತುಂಬಿಕೊಂಡರು.

ಸುಗಮವಾಗಿ ಜರುಗಿದ ಕಾರಣಿಕ:
ಡೆಂಕನಮರಡಿಯಲ್ಲಿ ಕಾರಣಿಕ ನುಡಿ ಮುಗಿಯುವವರೆಗೆ ಈ ಸಲ ಹೇಗಾಗುತ್ತದೋ ಹೇಗೋ ಎಂಬ ಚಿಂತೆ ಕಾಡುತ್ತದೆ. ಆದರೆ, ಈ ಸಲ ಯಾವುದೇ ಸಣ್ಣ ಅಹಿತಕರ ಘಟನೆ ಆಗದಂತೆ ಜಿಲ್ಲಾಡಳಿತ ಹಾಗೂ ಹಿಂದೂ ಧಾರ್ಮಿಕ ದತ್ತಿ ಇಲಾಖೆಯು ಅಚ್ಚುಕಟ್ಟಿನ ವ್ಯವಸ್ಥೆ ಮಾಡಿತ್ತು.

ಹಡಗಲಿಯಿಂದ ಮೈಲಾರಕ್ಕೆ ಬರುವ ಮಾರ್ಗದಲ್ಲೆಲ್ಲಾ ಬ್ಯಾರಿಕೇಡ್‌ಗಳನ್ನು ಅಳವಡಿಸಿ, ವಾಹನಗಳನ್ನು ದೂರದಲ್ಲೇ ತಡೆದರು. ನಡೆದುಕೊಂಡು ಹೋಗುವವರಿಗೆ ಒಂದು ಮಾರ್ಗ, ವಾಹನಗಳಿಗೆ ಮತ್ತೊಂದು ಮಾರ್ಗ ನಿಗದಿಪಡಿಸಿದ್ದರು. ಇನ್ನು, ಕಾರಣಿಕ ನುಡಿ ಮುಗಿದ ನಂತರವೂ ಹೀಗೆ ಮಾಡಿದರು. ಡೆಂಕನಮರಡಿಯ ಕೇಂದ್ರ ಸ್ಥಳದ ಸುತ್ತಲೂ ನಾಲ್ಕು ಬಗೆಯಲ್ಲಿ ಕೋಟೆಯಂತೆ ಬ್ಯಾರಿಕೇಡ್‌ ನಿರ್ಮಿಸಿದ್ದರು. ಸುತ್ತಲೂ ಪೊಲೀಸರ ಸರ್ಪಗಾವಲು ಹಾಕಲಾಗಿತ್ತು. ಧಾರ್ಮಿಕ ವಿಧಿ ವಿಧಾನ ಪೂರೈಸುವವರು ಬಿಟ್ಟರೆ ಮತ್ಯಾರಿಗೂ ಅದರೊಳಗೆ ಪ್ರವೇಶಿಸಲು ಬಿಡಲಿಲ್ಲ. ಕಾರಣಿಕ ನುಡಿ ಸ್ಪಷ್ಟವಾಗಿ ಆಲಿಸಲೆಂದು ಇಡೀ ಪರಿಸರದಲ್ಲಿ ಧ್ವನಿವರ್ಧಕಗಳ ವ್ಯವಸ್ಥೆ ಮಾಡಲಾಗಿತ್ತು. ದೂರದಲ್ಲಿ ಕುಳಿತವರೆಲ್ಲೂ ಸ್ಪಷ್ಟವಾಗಿ ನುಡಿ ಆಲಿಸಿದರು. ಇದರಿಂದಾಗಿ ಯಾವುದೇ ಗೊಂದಲಕ್ಕೆ ಆಸ್ಪದ ಇರಲಿಲ್ಲ. ಇಷ್ಟೇ ಅಲ್ಲ, ಕಾರಣಿಕ ನುಡಿ ನುಡಿದ ನಂತರ ಹಲವು ಬಾರಿ ಅದನ್ನು ಧ್ವನಿವರ್ಧಕಗಳಲ್ಲಿ ಹಾಕಲಾಯಿತು.

ಸರಗಳ್ಳತನ, ಜೇಬುಗಳ್ಳರ ಮೇಲೆ ನಿಗಾ ವಹಿಸಲು ವಿಶೇಷ ವ್ಯವಸ್ಥೆ ಮಾಡಲಾಗಿತ್ತು. ಹೀಗಾಗಿ ಅನೇಕ ಚಾಲಾಕಿ ಕಳ್ಳರನ್ನು ಪೊಲೀಸರು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದರು. ಸ್ಥಳದಲ್ಲಿ ಬಳ್ಳಾರಿ ವಲಯದ ಐ.ಜಿ. ಲೋಕೇಶ್‌ ಕುಮಾರ್‌ ಬಿ.ಎಸ್‌., ಎಸ್ಪಿ ಶ್ರೀಹರಿಬಾಬು ಬಿ.ಎಲ್‌., ಡಿಸಿ ಟಿ. ವೆಂಕಟೇಶ್‌, ಜಿಪಂ ಸಿಇಒ ಸದಾಶಿವಪ್ರಭು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.